Garuda Gamana Vrishabha Vahana: ಓಟಿಟಿಯಲ್ಲಿ ಧೂಳೆಬ್ಬಿಸಿದ ರಾಜ್‌ ಬಿ. ಶೆಟ್ಟಿ ಚಿತ್ರ

By Suvarna NewsFirst Published Jan 17, 2022, 10:29 PM IST
Highlights

'ಗರುಡ ಗಮನ ವೃಷಭ ವಾಹನ' ಸಿನಿಮಾವು ಓಟಿಟಿಗೆ ಬಂದ ಮೂರೇ ದಿನಗಳಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ದಾಖಲಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಚಿತ್ರವೆಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. 

ರಿಷಬ್‌ ಶೆಟ್ಟಿ (Rishab Shetty) ಹಾಗೂ ರಾಜ್‌ ಬಿ. ಶೆಟ್ಟಿ (Raj B Shetty) ಕಾಂಬಿನೇಷನ್‌ನ 'ಗರುಡಗಮನ ವೃಷಭವಾಹನ' (Garuda Gamana Vrishabha Vahana) ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಈ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲಾಗಿದೆ. ಜೀ5ನಲ್ಲಿ (Zee5) ಜನವರಿ 13ರಿಂದ ಈ ಸಿನಿಮಾ ಪ್ರಸಾರ ಆರಂಭಿಸಿದೆ. ರಿಲೀಸ್ ಆದ ಮೂರೇ ದಿನಕ್ಕೆ ಈ ಸಿನಿಮಾ ಮಾಡಿರುವ ದಾಖಲೆ ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು! 'ಗರುಡ ಗಮನ ವೃಷಭ ವಾಹನ' ಸಿನಿಮಾವು ಓಟಿಟಿಗೆ ಬಂದ ಮೂರೇ ದಿನಗಳಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ದಾಖಲಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಚಿತ್ರವೆಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. 
 
ಈ ಹಿಂದೆ ಜೀ5ನಲ್ಲಿ ಬಿಡುಗಡೆಯಾಗಿದ್ದ ಶಿವರಾಜ್‌ಕುಮಾರ್ (Shivarajkumar) ನಟನೆಯ 'ಭಜರಂಗಿ 2' (Bhajarangi 2) ಚಿತ್ರವು ಕೇವಲ ಮೂರು ದಿನ ಕಳೆಯುವುದರೊಳಗೆ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಕಂಡಿತ್ತು. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಎಂಬ ಕೀರ್ತಿಗೆ 'ಭಜರಂಗಿ 2' ಸಿನಿಮಾ ಪಾತ್ರವಾಗಿತ್ತು. ಇದೀಗ ಆ ದಾಖಲೆಯನ್ನು 'ಗರುಡ ಗಮನ ವೃಷಭ ವಾಹನ' ಸಿನಿಮಾ ಬ್ರೇಕ್ ಮಾಡಿದ್ದು, ಮೂರೇ ದಿನಕ್ಕೆ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಜೀ5 ಈ ಕುರಿತು ಟ್ವೀಟ್ (Tweet) ಮಾಡಿ ಸಂತಸವನ್ನು ಹಂಚಿಕೊಂಡಿದೆ.

Garuda Gamana Vrishabha Vahana: ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ ರಕ್ಷಿತ್‌ ಶೆಟ್ಟಿ

'ಒಂದು ಮೊಟ್ಟೆಯ ಕಥೆ' ನಂತರ ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ಕರಾವಳಿ ಪ್ರದೇಶದ ರೌಡಿಸಂ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ರಾಜ್‌ ಶೆಟ್ಟಿ ಅವರನ್ನು ಹಾಸ್ಯ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರು, ಇದರಲ್ಲಿ ಚೂರಿ ಹಿಡಿದು ಮುನ್ನುಗ್ಗಿ ಅರ್ಭಟಿಸುವ ರೆಬೆಲ್‌ ಶಿವನ ಪಾತ್ರದಲ್ಲಿ ಕಣ್ತುಂಬಿಕೊಳ್ಳಬೇಕಿದೆ. ಹರಿಯಾಗಿ ಪೊಲೀಸ್‌ ಪಾತ್ರದಲ್ಲಿ ರಿಷಬ್‌ ಇದ್ದಾರೆ. ಬ್ರಹ್ಮಯ್ಯ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪರಭಾಷೆಯ ನಿರ್ಮಾಪಕ ಮತ್ತು ನಿರ್ದೇಕರಿಂದಲೂ ಮೆಚ್ಚುಗೆ ಸಿಕ್ಕಿದ್ದು, ತಮಿಳಿನ ಗೌತಮ್ ವಾಸುದೇವ್ ಮೆನನ್‌ ಇದರ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.



'ಗರುಡ ಗಮನ ವೃಷಭ ವಾಹನ' ಚಿತ್ರಕ್ಕೆ ಈ ಹಿಂದೆ ವಿರೋಧ ವ್ಯಕ್ತವಾಗಿದ್ದು, ಚಿತ್ರದಲ್ಲಿ ಬರುವ ಕೆಲ ಸನ್ನಿವೇಶಗಳ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆರೋಪ ಕೇಳಿ ಬಂದಿದ್ದು, ರೌಡಿಸಂ ಚಿತ್ರಕ್ಕೆ ಈ ರೀತಿಯ ಟೈಟಲ್ ಯಾಕೆ ಬೇಕಿತ್ತು? ಎಂಬ ಪ್ರಶ್ನೆ ಕೇಳಿಬಂದಿತ್ತು. ಅದೇ ರೀತಿ ಎಮ್ಮೆಕೆರೆ ರೌಡಿಯ ಕೊಲೆಯ ವೇಳೆ ಶ್ಲೋಕ ಕೀರ್ತನೆಗಳು ಯಾಕೆ ಎಂದೂ ಪ್ರಶ್ನೆಯನ್ನೂ ಮಾಡಲಾಗಿತ್ತು. ಹಾಗೂ ಕೊಲೆ ಮಾಡಿ ವಿಕೃತವಾಗಿ ಕುಣಿವ ಕೊಲೆಗಾರನಿಗೆ ಮಾದೇವಾ ಹಾಡು ಯಾಕೆ? ಕೊಲೆಗಡುಕನೊಬ್ಬ ಸ್ವಾಮೀಜಿಯ ಪಾದರಕ್ಷೆ ಧರಿಸುವುದೇಕೆ? ಸೈಕೋಪಾತ್ ಒಬ್ಬನನ್ನು ವೈಭವೀಕರಿಸಲು ಈ ಹಾಡನ್ನು ಬಳಸಿಕೊಂಡಿದ್ದೇಕೆ? 

Shiva Rajkumar: ಭಜರಂಗಿ 2 ಓಟಿಟಿಗೆ ಬಂದ 3 ದಿನದಲ್ಲಿ 5 ಕೋಟಿ ನಿಮಿಷ ವೀಕ್ಷಣೆ

ರೌಡಿಗಳಿಗೆ ಹರಿ, ಶಿವ ಎಂದು ಹೆಸರಿಟ್ಟಿರೋದೇಕೆ? ಈ ಚಿತ್ರದಿಂದ ಯುವಕರು ರೌಡಿಸ್ಮ್ ಕಡೆ ಆಕರ್ಷಿತರಾಗುವ ಅಪಾಯವಿದೆ. ಪುಡಿ ರೌಡಿಗಳು ದೊಡ್ಡ ರೌಡಿಗಳಾಗಲು ಪ್ರೇರಣೆ ನೀಡುವಂತಿದೆ. ಮಕ್ಕಳು, ಯುವಕರು ಅಡ್ಡದಾರಿ ತುಳಿಯುವಂತೆ ಮಾಡುವಂತಿದೆ ಎನ್ನುವುದು ಸೇರಿದಂತೆ ಹೀಗೆ ಸಿನಿಮಾದ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಲಾಗಿತ್ತು. ಇನ್ನು ಮಂಗಳೂರಿನ ಭೂಗತ ಜಗತ್ತಿನ ಸುತ್ತ ಈ ಚಿತ್ರದ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by ZEE5 Kannada (@zee5kannada)

click me!