ಅಪ್ಪು ಜತೆಗೆ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು; ಅದು ಸಾಧ್ಯವಾಗಲಿಲ್ಲ: ಶಿವರಾಜ ಕುಮಾರ ಭಾವುಕ

By Kannadaprabha NewsFirst Published Jan 6, 2023, 10:36 AM IST
Highlights

ವೇದ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಯಶಸ್ಸು ಸಿಕ್ಕಿದ್ದು, ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಸಿನಿಮಾಗೆ ಮಹಿಳೆಯರು ಮಾತ್ರವಲ್ಲದೇ ಪುರುಷರೂ ವೇದ ಚಿತ್ರದ ಸಂದೇಶವನ್ನು ಸ್ವೀಕರಿಸುವ ಮೂಲಕ ಸ್ಪಂದಿಸುತ್ತಿದ್ದಾರೆ ಎಂದು ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ಕುಮಾರ್‌ ತಿಳಿಸಿದರು.

ದಾವಣಗೆರೆ (ಜ.6) : ವೇದ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಯಶಸ್ಸು ಸಿಕ್ಕಿದ್ದು, ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಸಿನಿಮಾಗೆ ಮಹಿಳೆಯರು ಮಾತ್ರವಲ್ಲದೇ ಪುರುಷರೂ ವೇದ ಚಿತ್ರದ ಸಂದೇಶವನ್ನು ಸ್ವೀಕರಿಸುವ ಮೂಲಕ ಸ್ಪಂದಿಸುತ್ತಿದ್ದಾರೆ ಎಂದು ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ಕುಮಾರ್‌ ತಿಳಿಸಿದರು.

ನಗರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ತಮ್ಮ ಅಭಿನಯದ 125ನೇ ಸಿನಿಮಾ ವೇದ(Vedha) ಯಶಸ್ಸಿನ ಕುರಿತಂತೆ ಮಾತನಾಡಿ, ಇಡೀ ಕುಟುಂಬ ಸಮೇತ ಎಲ್ಲರೂ ಕುಳಿತು, ನೋಡಬಹುದಾದ ಸಿನಿಮಾ(Cinema) ಎಂದರು. ದಾವಣಗೆರೆ ನಂತರ ಹರಿಹರ, ರಾಣೆಬೆನ್ನೂರು, ಹಾವೇರಿ, ಗದಗ ಸೇರಿ ರಾಜ್ಯದ ಅನೇಕ ಕಡೆ ಪ್ರವಾಸ ಮಾಡುತ್ತಿದ್ದೇವೆ ಎಂದು ಹೇಳಿದರು.

'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

ಈಸೂರು ದಂಗೆ ಎಂಬ ಚಿತ್ರಕಥೆ ಸಿದ್ಧವಾಗಿದೆ. ಅದೂ ಶೀಘ್ರವೇ ಚಿತ್ರೀಕರಣ ಶುರುವಾಗಲಿದೆ. ಎಲ್ಲದಕ್ಕೂ ಸಮಯ ಕೂಡಿ ಬಂದಾಗ ಆಗುತ್ತದೆ. ಅಭಿಮಾನಿಗಳ ಗಲಾಟೆ ಹೆಚ್ಚಾಗುತ್ತಿದೆ. ಇದು ಯಾರಲ್ಲೂ ಆಗಬಾರದು. ನನ್ನ ಮನಸ್ಸು ಯಾವಾಗಲೂ ತೆರೆದ ಹೃದಯ, ನಮ್ಮ ಹೃದಯದ ತುಂಬಾ ಪ್ರೀತಿನೇ ತುಂಬಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪುನೀತ್‌ ಜೊತೆ ಸಿನಿಮಾ ಆಗಬೇಕಿತ್ತು:

ಮುಂದಿನ ಚಿತ್ರಗಳಾದ ಯೋಗರಾಜ್‌ ಭಟ್‌(Yogarajbhat) ನಿರ್ದೇಶನದ ಕರಟಕ ದಮನಕ(Karataka Damanaka) ಎಂಬ ಸಿನಿಮಾದಲ್ಲಿ ಪ್ರಭುದೇವ(Prabhudev) ಜೊತೆಗೆ ಮಾಡುತ್ತಿದ್ದೇನೆ. ಇನ್ನೊಂದು ಸಿನಿಮಾವು ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್‌ ನಾಗರಾಜ ನಿರ್ಮಾಣದ ಗೋಸ್ಟ್‌(Ghost) ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಪುನೀತ್‌ ರಾಜಕುಮಾರ(Puneet rajakumar) ಜೊತೆಗೆ ನಾನು ಸಿನಿಮಾ ಮಾಡಬೇಕಿತ್ತು. ಆದರೆ, ಅದು ಆಗಲಿಲ್ಲ. ಇನ್ನು ರಾಘಣ್ಣ ಜೊತೆಗೆ ಸಿನಿಮಾ ಮಾಡಲು ಉತ್ತಮ ಕಥೆ ಹುಡುತ್ತಿದ್ದೇವೆ ಎಂದು ತಿಳಿಸಿದರು.

ನಿರ್ಮಾಪಕಿ ಗೀತಾ ಶಿವರಾಜಕುಮಾರ(Geeta Shivaraj kumar) ಮಾತನಾಡಿ, ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಕಥೆ ವೇದ ಚಿತ್ರವು ಹೊಂದಿದೆ. ಸಿನಿಮಾದ ಯಶಸ್ಸು ನಮಗೂ ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ ಎಂದರು. ನಾಯಕಿ ಗಾನವಿ ಲಕ್ಷ್ಮಣ್‌ ಮಾತನಾಡಿ, ದಾವಣಗೆರೆಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಮಾಡಿ, ತುಂಬಾ ಖುಷಿಯಾಗಿದೆ. ವೇದ ಚಿತ್ರಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಸಿನಿಮಾವು ಯಶಸ್ವಿಯಾಗಬೇಕು ಎಂಬುದಾಗಿ ದೇವಿಯ ಸನ್ನಿಧಿಯಲ್ಲಿ ಬೇಡಿ, ಪ್ರಾರ್ಥಿಸಿದ್ದೇನೆ ಎಂದರು.

ಚಿತ್ರದ ನಾಯಕಿ ಅದಿತಿ ಸಾಗರ್‌, ವೇದ ಚಿತ್ರದ ಯಾವ ಹಾಡುಗಳು ನಿಮಗಿಷ್ಟಎಂದು ಕೇಳಿದರು. ಅದಕ್ಕೆ ಅಭಿಮಾನಿಗಳು ಎಲ್ಲಾ ಹಾಡುಗಳು ಇಷ್ಟಎಂದು ಕೂಗಿದರು. ಅಭಿಮಾನಿಗಳ ಅಪೇಕ್ಷೆ ಮೇರೆಗೆ ಚಿತ್ರದ ಡೈಲಾಗ್‌ ಹೇಳಿದ ಅದಿತಿ ಸಾಗರ್‌ ಅಭಿಮಾನಿಗಳನ್ನು ರಂಜಿಸಿದರು. ಚಿತ್ರದ ನಿರ್ದೇಶಕ ಹರ್ಷ ಮಾತನಾಡಿ, ವೇದ ಸಿನಿಮಾ ನಿಮಗೆ ಇಷ್ಟವಾಗಿದೆಯೇ ಎಂದು ಅಭಿಮಾನಿಗಳಿಗೆ ಪ್ರಶ್ನಿಸಿ ವೇದ ಪಾರ್ಚ್‌-2 ಮಾಡಬೇಕಾ ಎಂದು ಕೇಳಿದರು. ಅಭಿಮಾನಿಗಳು ಎಸ್‌.. ಎಸ್‌. ಎಂಬುದಾಗಿ ವೇದ-2 ಬರಲಿ ಎಂಬುದಾಗಿ ತಮ್ಮ ಸಮ್ಮತಿ ಸೂಚಿಸಿದರು. ಚಿತ್ರದ ನಿರ್ಮಾಪಕರಾದ ಗೀತಾ ಶಿವರಾಜ ಕುಮಾರ, ನಟಿ ಗಾನವಿ ಲಕ್ಷ್ಮಣ್‌, ಚಿತ್ರಮಂದಿರದ ಲಕ್ಷ್ಮಿಕಾಂತ ರೆಡ್ಡಿ, ಮ್ಯಾನೇಜರ್‌ ಕರಿಸಿದ್ದಯ್ಯ, ಅಖಿಲ ಕರ್ನಾಟಕ ಡಾ.ರಾಜಕುಮಾರ, ಡಾ.ಶಿವರಾಜಕುಮಾರ, ಪುನೀತ್‌ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಯೋಗೀಶ, ಶಿವಕುಮಾರ, ಚಂದ್ರಕುಮಾರ, ಭಾಗ್ಯದೇವಿ, ಪ್ರಕಾಶ, ದುರುಗೇಶ, ಗುಮ್ಮನೂರು ಶ್ರೀನಿವಾಸ, ಮಂಜುನಾಥ, ಇತರರಿದ್ದರು.

 

Vedha Movie Review; 'ವೇದ' ಸಿನಿಮಾದಲ್ಲಿ ಸ್ತ್ರಿ ಶಕ್ತಿಯ ದರ್ಶನ

ನಗರದಲ್ಲಿ ಮೆರವಣಿಗೆ; ಹಾಡು, ಹೆಜ್ಜೆ ಹಾಕಿದ ಶಿವಣ್ಣ

ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ ವೇದ ಚಿತ್ರದ ಪ್ರಮೋಷನ್‌ಗೆ ನಗರಕ್ಕೆ ಆಗಮಿಸಿದ ವೇಳೆ ಅಭಿಮಾನಿಗಳ ಆಸೆಯಂತೆ ಅಶೋಕ ಚಿತ್ರಮಂದಿರದಲ್ಲಿ ವೇದ ಚಿತ್ರದ ಪುಷ್ಪಾ ಪುಷ್ಪಾ ಹಾಡು, ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು, ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು, ಬೀಳಿಸಿ ನೋಡು ಹಾಡುಗಳನ್ನು ಹಾಡಿ, ಹೆಜ್ಜೆ ಹಾಕಿ ರಂಜಿಸಿದರು. ಅಖಿಲ ಕರ್ನಾಟಕ ಡಾ.ರಾಜಕುಮಾರ, ಡಾ.ಶಿವರಾಜ ಕುಮಾರ, ಪುನೀತ್‌ ರಾಜಕುಮಾರ ಅಭಿಮಾನಿಗಳ ಸಂಘದಿಂದ ನಡೆದ ಶಿವ ಸಂಭ್ರಮ ಕಾರ್ಯಕ್ರಮದಡಿ ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಮೆರವಣಿಗೆಯು ಹೊರಟು, ಕೆ.ಟಿ.ಜೆ ನಗರ, ಶಿವಪ್ಪಯ್ಯ ವೃತ್ತ, ಶ್ರೀ ಜಯದೇವ ಸರ್ಕಲ್‌, ಪಿ.ಬಿ.ರಸ್ತೆ, ಹಳೇ ಬಸ್‌ ನಿಲ್ದಾಣ, ಗಾಂಧಿ ಸರ್ಕಲ್‌ ಮುಖಾಂತರ ಅಶೋಕ ಚಿತ್ರಮಂದಿರ ತಲುಪಿತು.

click me!