ವಿಶ್ವವೇ ಒಂದು ರಂಗ. ರಂಗದಲ್ಲಿ ಇರುವವರು ಬಣ್ಣ ಹಾಕಿ ನಾಟಕವಾಡಿದರೆ ರಂಗದಲ್ಲಿ ಇಲ್ಲದವರು ಬಣ್ಣ ಹಾಕದೆ ನಾಟಕವಾಡುತ್ತಿದ್ದಾರೆ. ಹೀಗಾಗಿ ಇಂದು ಶುದ್ಧೀಕರಣ ಎಂಬುದು ಇಂದು ಎಲ್ಲಾ ರಂಗದಲ್ಲಿ ಆಗಬೇಕಾಗಿದೆ.
ಬೆಂಗಳೂರು (ಮಾ.30): ‘ವಿಶ್ವವೇ ಒಂದು ರಂಗ. ರಂಗದಲ್ಲಿ ಇರುವವರು ಬಣ್ಣ ಹಾಕಿ ನಾಟಕವಾಡಿದರೆ ರಂಗದಲ್ಲಿ ಇಲ್ಲದವರು ಬಣ್ಣ ಹಾಕದೆ ನಾಟಕವಾಡುತ್ತಿದ್ದಾರೆ. ಹೀಗಾಗಿ ಇಂದು ಶುದ್ಧೀಕರಣ ಎಂಬುದು ಇಂದು ಎಲ್ಲಾ ರಂಗದಲ್ಲಿ ಆಗಬೇಕಾಗಿದೆ. ರಾಜಕೀಯ, ವ್ಯಾಪಾರ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಶುದ್ಧೀಕರಣ ಅಗತ್ಯವಾಗಿದೆ’ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ಯುಗಾದಿ ಸಂಭ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸಿದ ಅವರು, ‘ಕೂಡು ಕುಟುಂಬಗಳಿದ್ದಾಗ ಚಿಕ್ಕಪುಟ್ಟ ಮನಸ್ತಾಪ ಮರೆತು ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತಿದ್ದರು.
ಈಗ ಅದೇ ಮಾದರಿಯಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯಕ್ರಮ ನಡೆಸಿವೆ. ಗಣಿತದಲ್ಲಿ ಒಂಬತ್ತು ಅಂಕಿ ಸಾಕಷ್ಟು ಮಹತ್ವದ ಪಾತ್ರ ವಹಿಸುತ್ತದೆ. ಅದೇ ಅರ್ಥದಲ್ಲಿ ಒಂಬತ್ತು ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ಶ್ಲಾಘನೀಯ’ ಎಂದರು. ‘ಬೇವು- ಬೆಲ್ಲದಂತೆ ಬದುಕಿನಲ್ಲಿ ಸಿಹಿ ಮತ್ತು ಕಹಿ ಇರಬೇಕು ಎಂದು ಹೇಳಿದರೂ ನಮಗೆ ಜೀವನದ ಕಹಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಆದರೆ, ಇಂದು ಎಲ್ಲ ಕ್ಷೇತ್ರಗಳಲ್ಲೂ ಕಹಿ ಹೆಚ್ಚಾಗಿದೆ. ಕಹಿ ಸಿಹಿಯನ್ನು ಸಮನಾಗಿ ಸ್ವೀಕರಿಸಿ ನಾವು ಮುನ್ನಡೆಯಲು ಸಂಕಲ್ಪ ಮಾಡೋಣ’ ಎಂದು ಹೇಳಿದರು.
ಹಾಡಿ ರಂಜಿಸಿದವರು: ಅಚ್ಚರಿಯಿಂದ ಕೂಡಿದ ಕಾರ್ಯಕ್ರಮದಲ್ಲಿ ನಾಗಚಂದ್ರಿಕಾ ಭಟ್, ರಂಜನೀ ಕೀರ್ತಿ ಮತ್ತು ಗುಬ್ಬಿಗೂಡು ಮಹೇಶ್ ಭಾವಗೀತೆಗಳನ್ನು ಹಾಡಿದರು. ಬೇಂದ್ರೆಯವರ ಯುಗಾದಿ ಹಾಡು, ಬಿಆರೆಲ್ ಅವರ ಅಮ್ಮ ನಿನ್ನ ಎದೆಯಾಳದಲ್ಲಿ ಮತ್ತು ಒಡೆಯದ ಒಡಪೇ ಗೀತೆಗಳು ತಂಗಾಳಿಯಂತೆ ಕೇಳುಗರನ್ನು ಮುದಗೊಳಿಸಿದವು.
ಸಿನಿಮಾಗಳನ್ನು ಮಾರ್ಕೆಟಿಂಗ್ ಮಾಡಬೇಕು: ನಿರ್ದೇಶಕ ಗಿರೀಶ್ ಕಾಸರವಳ್ಳಿ
ರಾಜ್ಯದ ಜನಪ್ರಿಯ ಹಾಗೂ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಾದ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆ ವತಿಯಿಂದ ಯುಗಾದಿ ಸಂಭ್ರಮ ಪುರಸ್ಕಾರ ಎನ್ನುವ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಕಲಾವಿದರು, ಸಾಹಿತಿಗಳನ್ನು ಗೌರವಿಸಿರುವ ಕೆಲಸ ಶ್ಲಾಘನೀಯ. ಇಂತಹದೊಂದು ಕಾರ್ಯಕ್ರಮ ರೂಪಿಸಿದ ಕನ್ನಡಪ್ರಭ ಏಷ್ಯಾನೆಟ್ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥರನ್ನು ಅಭಿನಂದಿಸುತ್ತೇನೆ. ಕನ್ನಡಪ್ರಭ- ಏಷ್ಯಾನೆಟ್ ಸಂಸ್ಥೆ ಅಸಾಮಾನ್ಯ ಕನ್ನಡಿಗ, ರೈತರತ್ನ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ರಾಜ್ಯದ ಎಲ್ಲಾ ರಂಗದ ಸಾಧಕರನ್ನು ಗೌರವಿಸಿ ಪುರಸ್ಕರಿಸುತ್ತಿರುವುದು ಅಭಿನಂದನಾರ್ಹ.
-ಜಮೀರ್ ಅಹಮದ್ ಖಾನ್, ವಸತಿ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವರು