
ಬೆಂಗಳೂರು (ಮಾ.14): ನಟ ದರ್ಶನ್ ಮತ್ತು ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಕೇಸ್ ಸದ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಬೆನ್ನಲ್ಲೇ, ಸಮಾಜದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ 'ಬಾಸ್' ಎಂಬ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದು ದರ್ಶನ್ ಪ್ರಕರಣವನ್ನೇ ಹೋಲುತ್ತಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
'ಬಾಸ್' ಸಿನಿಮಾದ ಟೀಸರ್ನಲ್ಲಿರುವ ಕೆಲವು ಸನ್ನಿವೇಶಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಘಟನೆಗಳನ್ನು ನೆನಪಿಸುವಂತಿದೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಕಥೆಯ ಎಳೆ ದರ್ಶನ್ ಅವರ ರಿಯಲ್ ಲೈಫ್ ಘಟನೆಗಳಿಗೆ ಹತ್ತಿರವಾಗಿದೆ ಎಂಬ ವಾದ ಕೇಳಿಬರುತ್ತಿದೆ. ಆದರೆ, ಚಿತ್ರದ ನಿರ್ದೇಶಕ ಲವ ಅವರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ವೃತ್ತಿಯಲ್ಲಿ ವಕೀಲರೂ ಆಗಿರುವ ನಿರ್ದೇಶಕ ಲವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ಈ ಸಿನಿಮಾ ಖಂಡಿತವಾಗಿಯೂ ದರ್ಶನ್ ಸರ್ ಅವರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಸಮಾಜದಲ್ಲಿ ನಡೆದ ವಿವಿಧ ನೈಜ ಘಟನೆಗಳನ್ನು ಕ್ರೋಢೀಕರಿಸಿ ಈ ಕಥೆ ಸಿದ್ಧಪಡಿಸಲಾಗಿದೆ. ನಾನು ಕೂಡ ದರ್ಶನ್ ಅವರ ಅಭಿಮಾನಿ, ಅವರನ್ನು ಸಮಾಜಕ್ಕೆ ಸಂದೇಶ ನೀಡುವ ನಾಯಕನಂತೆಯೇ ನೋಡುತ್ತೇನೆ" ಎಂದು ಹೇಳಿದ್ದಾರೆ.
ಸಿನಿಮಾದ ಕಂಟೆಂಟ್ ಪ್ರಬಲವಾಗಿದ್ದರಿಂದ ಕೆಲವು ಹಿರಿಯ ನಟರು ಮತ್ತು ನಾಯಕಿಯರು ನಟಿಸಲು ಹಿಂದೇಟು ಹಾಕಿದರು ಹಾಗೂ ಕೆಲವರು ಫೋನ್ ಪಿಕ್ ಕೂಡ ಮಾಡಲಿಲ್ಲ ಎಂಬ ಆತಂಕಕಾರಿ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ 42 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಒಂದು ವೇಳೆ ಈ ಸಿನಿಮಾ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಆಗಿದ್ದರೆ, ಕಾನೂನುಬದ್ಧವಾಗಿ ಅದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಲವ, "ಯಾವುದೇ ಪ್ರಕರಣ ಟ್ರಯಲ್ ಹಂತದಲ್ಲಿದ್ದಾಗ ಅದರ ಮೇಲೆ ಸಿನಿಮಾ ಮಾಡುವುದು ಸರಿಯಲ್ಲ. ಹಾಗಾಗಿ ನಾನು ಯಾವುದೇ ನಿರ್ದಿಷ್ಟ ವ್ಯಕ್ತಿಯ ಕಥೆ ಮಾಡುತ್ತಿಲ್ಲ, ಬದಲಿಗೆ ಸಮಾಜದ ಘಟನೆಗಳನ್ನಷ್ಟೇ ಆಧರಿಸಿ ಕಾಲ್ಪನಿಕವಾಗಿ ಈ ಸಿನಿಮಾ ಮಾಡಿದ್ದೇನೆ" ಎಂದಿದ್ದಾರೆ. ಸದ್ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಟ್ರೈಲರ್ ಲಾಂಚ್ ಆದ ಮೇಲೆ ಸಿನಿಮಾದ ನೈಜ ಕಥಾಹಂದರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.