
ಬೆಂಗಳೂರು(ಜು.13): ಚಿತ್ರರಂಗಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಈ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಲಾಪ ಮುಗಿದ ಬಳಿಕ ವಾಣಿಜ್ಯ ಮಂಡಳಿಯಲ್ಲೇ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್ ತಿಳಿಸಿದ್ದಾರೆ.
SHIVARAJ KUMAR BIRTHDAY: ಹ್ಯಾಟ್ರಿಕ್ ಹೀರೋಗೆ ಮೇಘನಾ ರಾಜ್ ಕಡೆಯಿಂದ ವಿಶೇಷ ಬರ್ತಡೇ ವಿಶ್
ಸಿಎಂ, ಡಿಸಿಎಂ ಅವರಿಗೆ ನೀಡಿರುವ ಮನವಿಯಲ್ಲಿ ಅನೇಕ ಸಮಸ್ಯೆಗಳನ್ನು ವಿವರಿಸಲಾಗಿದೆ. ಅವುಗಳು ಹೀಗಿವೆ:
1. ಕನ್ನಡ ಸಿನಿಮಾ ನಿರ್ಮಾಪಕರು ಚಿತ್ರ ಪ್ರದರ್ಶನಕ್ಕೆ ಬೇಕಾಗುವ ಡಿಜಿಟಲ್ ಡಿಸಿಪಿಯನ್ನು ಪಕ್ಕದ ರಾಜ್ಯದಲ್ಲಿ ಪಡೆಯಬೇಕಾಗಿದೆ. ಇದರಿಂದ ನಿರ್ಮಾಪಕರು ಕಷ್ಟಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಯೋಗದಲ್ಲಿ ಅಂದಾಜು 20 ಕೋಟಿ ವೆಚ್ಚದಲ್ಲಿ ಡಿಜಿಟಲ್ ಡಿಸಿಪಿ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯವ್ಯಯದಲ್ಲಿ ಹಣ ಒದಗಿಸಿಕೊಡಬೇಕು.
2. ಸರ್ಕಾರವು ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಘೋಷಣೆ ಮಾಡಿದ್ದು, ಪೂರಕ ಇಲಾಖೆಗಳೂ ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಪರಿಗಣಿಸಲು ಕ್ರಮ ಕೈಗೊಳ್ಳಬೇಕು.
3. ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನೆರೆರಾಜ್ಯಗಳಲ್ಲಿ ನಿಗದಿಪಡಿಸಿರುವಂತೆ ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 250 ರು. ಮೀರದಂತೆ ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ 150 ರು. ಮೀರದಂತೆ ಪ್ರವೇಶದರ ನಿಗದಿಪಡಿಸುವ ಮೂಲಕ ಆದೇಶ ಹೊರಡಿಸಬೇಕು.
4. ರಾಜ್ಯದಲ್ಲಿ ಸುಮಾರು 200 ತಾತ್ಕಾಲಿಕ ಮತ್ತು ಅರೆ ಕಾಯಂ ಚಿತ್ರಮಂದಿರಗಳನ್ನಾಗಿ ಪರಿವರ್ತಿಸಲು ಬಯಸಿರುವ ಕಾರಣ ನಿಯಮ 107 (2) (1)ಕ್ಕೆ 2030 ಡಿಸೆಂಬರ್ 31ರವರೆಗೆ ವಿಸ್ತರಿಸುವಂತೆ ತಿದ್ದುಪಡಿ ತರಲು ಗೃಹ ಇಲಾಖೆಗೆ ನಿರ್ದೇಶಿಸಬೇಕು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭೇಟಿಯ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ಪದಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ್, ಸುಂದರ್ ರಾಜ್, ಕುಶಾಲ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಜೈರಾಜ್, ಕೆವಿ ಚಂದ್ರಶೇಖರ್ ಮುಂತಾದವರು ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.