
ಬೆಂಗಳೂರು (ಆ.16): ಶ್ರೀ ಮಂಜುನಾಥ ಸಿನಿಮಾದಲ್ಲಿ ಪುಟ್ಟ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಬಂದಿದ್ದ ನಟ ಅಜಯ್ ರಾವ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಅವರ ಪತ್ನಿ ಸುಷ್ಮಾ ರಾವ್, ಅಜಯ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲು ಮಾಡಿದ್ದು, ಅದರೊಂದಿಗೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಇಬ್ಬರೂ ಒಪ್ಪಂದ ಮಾಡಿಕೊಂಡು ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೂ ಇಲ್ಲವೋ ಅನ್ನೋದು ಗೊತ್ತಾಗಿಲ್ಲ. ಇದರ ನಡುವೆ 10 ವರ್ಷದ ಸುಂದರ ಸಂಸಾರ ಸಡನ್ ಆಗಿ ಹಳಿ ತಪ್ಪಿದ್ದು ಹೇಗೆ ಅನ್ನೋದರ ಕುತೂಹಲ ಆರಂಭವಾಗಿದೆ. ಕಳೆದ ವರ್ಷದ ಏಪ್ರಿಲ್ನಲ್ಲಿ ತಮ್ಮ 'ಕೃಷ್ಣಶಿಖರ' ಮನೆಯ ಗೃಹ ಪ್ರವೇಶ ಮಾಡಿದ್ದ ಈ ದಂಪತಿಗಳು ಈ ವೇಳೆ ಒಬ್ಬರನ್ನೊಬ್ಬರು ತುಂಬಾ ಹೊಗಳಿಕೊಂಡಿದ್ದರು.
ಯಲಹಂಕ ಬಳಿಕ ಕೋಗಿಲು ಬಡಾವಣೆಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ನ ಟಾಪ್ ಫ್ಲೋರ್ನಲ್ಲಿ ಅಜಯ್ ರಾವ್ ಮನೆ ಖರೀದಿ ಮಾಡಿದ್ದರು. ಏಪ್ರಿಲ್ 14 ರಂದು ಅದ್ದೂರಿಯಾಗಿ ಗೃಹಪ್ರವೇಶ ಕೂಡ ಮಾಡಿದ್ದರು.
ಈ ವೇಳೆ ಮಾತನಾಡಿದ್ದ ಸ್ವಪ್ನಾ ರಾವ್, 'ಖುಷಿಯಾಗ್ತಿದೆ. ಅವರ ಜೊತೆಯಲ್ಲಿ ನಿಂತು ಈ ಮನೆ ಕಟ್ಟಿದ್ದೀವಿ ಅನ್ನೋದೇ ಖುಷಿ. ಎಲ್ಲರೂ ಬಂದು ಹೋದರು. ನೀವು ಈಗ ಬಂದಿದ್ದೀರಿ. ತುಂಬಾ ಖುಷಿಯಾಗಿದೆ. ನನಗೆ ಬಹಳ ಸಂಭ್ರಮವಾಗಿದೆ' ಎಂದು ಹೇಳಿದ್ದರು. ಅವರ ವೈಫ್ ನಾನು ಎಂದು ಗುರುತಿಸಿಕೊಳ್ಳೋದಕ್ಕೆ ತುಂಬಾ ಹೆಮ್ಮೆ ಇದೆ. ಅವರ ಬಗ್ಗೆ ನನಗೆ ಸಿಕ್ಕಾಪಟ್ಟೆ ಹೆಮ್ಮೆ ಇದೆ ಎಂದು ಹೇಳಿದ್ದರು.
ಮನೆಯ ಒಳಾಂಗಣ ವಿನ್ಯಾಸವನ್ನು ನಾವಿಬ್ಬರೂ ಮಾಡಿದ್ದೇವೆ. ನಾನು ಏನೇ ಯೋಚನೆ ಮಾಡಿದರೂ, ಮೊದಲು ಇವರಿಗೆ ಹೇಳೋದು. ಅವರ ಅದರ ಮೇಲೆ ಇನ್ನೊಂದಷ್ಟು ವರ್ಕ್ ಮಾಡಿ ಸ್ಪೆಷಲ್ ಆಗಿ ಮಾಡಿಕೊಡುತ್ತಾರೆ. ಅದೇ ಖುಷಿ ಎಂದು ಗಂಡನ ಬಗ್ಗೆ ಮಾತನಾಡಿದ್ದರು.
ಇಷ್ಟೆಲ್ಲಾ ಹೇಳಿದ್ದ ಸುಷ್ಮಾ ರಾವ್ ಇದಾದ ಒಂದೇ ವರ್ಷಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಅವರಿಬ್ಬರ ನಡುವೆ ಕಳೆದ ಒಂದು ವರ್ಷದಲ್ಲಿ ಆಗಿದ್ದೇನು? ಯುದ್ಧಕಾಂಡ ಸಿನಿಮಾದ ದಯನೀಯ ಸೋಲೇ ಸಂಸಾರದ ಬಿಕ್ಕಟ್ಟಿಗೆ ಕಾರಣವಾಗಿರಬಹುದಾ? ಅನ್ನೋ ಪ್ರಶ್ನೆಗಳು ಎದ್ದಿವೆ.
ಅಜಯ್ ರಾವ್ ಮನೆಯ ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಕಲಾವಿದರು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಆಗಮಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, 'ನವರಸ ನಾಯಕ' ಜಗ್ಗೇಶ್, ಮೇಘನಾ ರಾಜ್, ಸುಂದರ್ ರಾಜ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್, ನಟಿ ಮಯೂರಿ ಮುಂತಾದವರು ಆಗಮಿಸಿದ್ದರು.
ಈ ಹಿಂದೆ ತಮ್ಮ ಮದುವೆ ಕೂಡ ಕೆಟ್ಟ ಮಹೂರ್ತದಲ್ಲಿ ಆಗಿತ್ತು ಎಂದು ಅಜಯ್ ರಾವ್ ಸಂದರ್ಶನವೊಂದರಲ್ಲಿ ಹೇಳಿದ್ದರು. ‘ನಾನು ಶಾಸ್ತ್ರಗಳನ್ನು ನಂಬುತ್ತೇನೆ, ಆದರೆ ಅದನ್ನು ಫಾಲೋ ಮಾಡುವುದಿಲ್ಲ. 'ಎಕ್ಸ್ಕ್ಯೂಸ್ ಮಿ' ನಂತರ ಹಲವು ಸೋಲುಗಳ ಬಳಿಕ 'ತಾಜ್ ಮಹಲ್' ಸಿನಿಮಾ ನನಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಆದರೆ, ಆ ನಂತರ ಬಂದ ಯಶಸ್ಸು ಅಥವಾ ಸೋಲು ಯಾವುದೂ ನನಗೆ ಮಹತ್ವದ್ದಾಗಿಲ್ಲ. ನನ್ನ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ನಾನು ಕಾಲ ಅಥವಾ ಮುಹೂರ್ತವನ್ನು ನೋಡುವುದಿಲ್ಲ’ ಎಂದು ನಟ ಅಜಯ್ ರಾವ್ ಹೇಳಿದ್ದರು.
ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, 'ನಾನು ಮದುವೆಯಾಗಿದ್ದೇ ತಪ್ಪಾದ ಮುಹೂರ್ತದಲ್ಲಿ. ನನ್ನ ನಿರ್ಮಾಣದ ಮೊದಲ ಸಿನಿಮಾ 'ಕೃಷ್ಣ ಲೀಲಾ' ಕೂಡ ತಪ್ಪಾದ ಮುಹೂರ್ತದಲ್ಲಿ ಮಾಡಿದ್ದೇನೆ' ಎಂದು ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.