Ambuja: ಗಟ್ಟಿಗಿತ್ತಿ ಹೆಂಗಸಿನ ಪಾತ್ರದಲ್ಲಿ ಶುಭಾ ಪೂಂಜಾ ಜೊತೆಯಾದ ರಜಿನಿ

By Suvarna NewsFirst Published Nov 26, 2021, 7:32 PM IST
Highlights

ಶ್ರೀನಿ ಹನುಮಂತರಾಜು ನಿರ್ದೇಶನದ ಅಂಬುಜ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಕಿರುತೆರೆ ನಟಿ ರಜಿನಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಜೀವ ತುಂಬುವ ಜತೆಗೆ ತುಂಬಾ ಮುದ್ದಾಗಿ ಅಭಿನಯಿಸಿದ್ದಾರೆ. 

ಶ್ರೀನಿ ಹನುಮಂತರಾಜು (Srini Hanumantaraju) ನಿರ್ದೇಶನದ 'ಅಂಬುಜ' (Ambuja) ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಕಿರುತೆರೆ ನಟಿ ರಜಿನಿ (Rajini) ಕಾಣಿಸಿಕೊಂಡಿದ್ದಾರೆ. 'ಅಮೃತ ವರ್ಷಿಣಿ' ಧಾರಾವಾಹಿಯ ಅಮೃತ ಪಾತ್ರಧಾರಿಯಾಗಿ ಎಲ್ಲರ ಮನೆ ಮಾತಾಗಿದ್ದ ನಟಿ ರಜಿನಿ 'ಆತ್ಮಬಂಧನ' ಸೇರಿ ಹಲವಾರು ರಿಯಾಲಿಟಿ ಶೋ ಗಳು 'ಮಜಾ ಟಾಕೀಸ್' , 'ಡ್ಯಾನ್ಸಿಂಗ್ ಸ್ಟಾರ್',‌ 'ಸ್ಟಾರ್ ಸಿಂಗರ್' ಹೀಗೆ ಕಿರುತೆರೆಯಲ್ಲಿ‌ ಖ್ಯಾತಿ ಪಡೆದು ಈಗ 'ಅಂಬುಜ' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಡ್ತಿ ಪಡೆದಿದ್ದಾರೆ. ಚಿತ್ರದ ಟೈಟಲ್ ರೋಲ್‌ನಲ್ಲಿ ನಟಿಸುತ್ತಿದ್ದು, ಸೈಕಾಲಾಜಿಕಲ್ ಥ್ರಿಲ್ಲರ್ ಜಾನರ್‌ನಲ್ಲಿ ಸಾಗುವ ಈ ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. 

ರಜಿನಿ ಅವರು ಪಾತ್ರಕ್ಕೆ ಜೀವ ತುಂಬುವ ಜತೆಗೆ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗಟ್ಟಿಗಿತ್ತಿ ಹೆಂಗಸಾಗಿ ಮೊದಲ ಚಿತ್ರದಲ್ಲೇ ಉತ್ತಮ ಪಾತ್ರ ಮಾಡಲಿದ್ದಾರೆಂಬ ಭರವಸೆ ಇದೆ ಎಂಬುದು ನಿರ್ದೇಶಕ ಶ್ರೀನಿ ಹನುಮಂತರಾಜು ಮಾತು. 'ಅಂಬುಜ' ಚಿತ್ರದಲ್ಲಿ ಶುಭಾ ಪೂಂಜಾ (Shubha Poonja) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಅವರ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಮಾಜದಲ್ಲಾಗುವ ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತವೆ. ಹಾಗೆ ಅವರು ಅನುಭವಿಸುವ ತೊಂದರೆಗಳೇನು, ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. 

ಶುಭಾ ಪೂಂಜಾ ಮನೆಯಲ್ಲಿ ನಿಧಿ ಸುಬ್ಬಯ್ಯ: ಗೆಳತಿಯರ ಸರ್‌ಪ್ರೈಸ್ ಭೇಟಿ

ಜ್ಞಾನ, ವಿಜ್ಞಾನ-ಅಜ್ಙಾನಗಳ ಒಟ್ಟು ಚಿತ್ರಣವೇ 'ಅಂಬುಜ' ಚಿತ್ರದ ಕತೆಯಂತೆ. ಇದೊಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4ತಿಂಗಳು ಸಮಯ ತೆಗೆದುಕೊಂಡು ತಯಾರಿಸಲಾಗಿದೆ. ಇದರ ತೂಕ ಬರೋಬ್ಬರಿ 20 ಕೆಜಿ. ಇಷ್ಟನ್ನೂ ಧರಿಸಿ ಶುಭಾ ಪೂಂಜಾ ನಟಿಸಿದ್ದಾರೆ. ಈ ಸಿನಿಮಾಕ್ಕಾಗಿ ಶುಭಾ ಪೂಂಜಾ ತಮ್ಮ ದೇಹದ ತೂಕವನ್ನು 20 ಕೆಜಿ ಕಡಿಮೆ ಮಾಡಿಕೊಂಡಿರುವುದು ಚಿತ್ರದ ಹೈಲೈಟ್. ಗದಗದ ಲಂಬಾಣಿ ತಾಂಡಾದಲ್ಲಿಯೇ ಚಿತ್ರೀಕರಣ ನಡೆದಿದ್ದು, ಒಂದಷ್ಟು ವಿಶೇಷಗಳೊಂದಿಗೆ ಶೀಘ್ರದಲ್ಲಿಯೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

20 ಕೆಜಿ ಭಾರದ ಲಂಬಾಣಿ ವೇಷ ತೊಟ್ಟ ಶುಭಾ ಪೂಂಜಾ

ಈ ಹಿಂದೆ 'ಕೆಲವು ದಿನಗಳ ನಂತರ' (Kelavu Dinagala Nantara) ಎನ್ನುವ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದ ಶ್ರೀನಿ, ಈ ಬಾರಿ ನೈಜ ಘಟನೆಯ ಮೊರೆ ಹೋಗಿದ್ದಾರೆ. ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆಯನ್ನು ಬರೆಯುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರಸನ್ನ ಕುಮಾರ್‌ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ರೆಕಾರ್ಡಿಂಗ್‌ ಮಾಡಲಾಗಿದೆ. ಅನನ್ಯಾ ಭಟ್‌, ಅನುರಾಧಾ ಭಟ್‌, ರಾಜೇಶ್‌ ಕೃಷ್ಣನ್‌, ಎಂ.ಡಿ. ಪಲ್ಲವಿ ಹಾಡಿದ್ದಾರೆ. ಮುರಳೀಧರ್ ಕ್ಯಾಮೆರಾ ಕೈಚಳಕವಿರುವ ಈ ಚಿತ್ರದಲ್ಲಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ ಶರಣಯ್ಯ, ಪದ್ಮಜಾ ರಾವ್, ದೀಪಕ್ ಸುಬ್ರಮಣ್ಯ, ಜಗದೀಶ್ ಹಲ್ಕುಡೆ, ಬೇಬಿ ಆಕಾಂಕ್ಷ ಹಾಗೂ ಸಂದೇಶ್ ಶೆಟ್ಟಿ ನಟಿಸುತ್ತಿದ್ದಾರೆ. 
 

click me!