
ಬಂಧನ ಸಿನಿಮಾದ ರಹಸ್ಯ!
ಸ್ಯಾಂಡಲ್ವುಡ್ ಸಾಹಸಸಿಂಹ, ಮೇರು ನಟ ಡಾ ವಿಷ್ಣುವರ್ಧನ್ (Vishnuvardhan) ಅವರ ಕೆರಿಯರ್ನಲ್ಲಿ 'ಬಂಧನ' ಸಿನಿಮಾ ಒಂದು ದೊಡ್ಡ ಮೈಲಿಗಲ್ಲು. ಆದರೆ ಅದಕ್ಕೂ ಮೊದಲು 'ನಾಗರಹಾವು' ಸಿನಿಮಾ ವಿಷ್ಣುವರ್ಧನ್ ಅವರನ್ನು ಕನ್ನಡದ ಸ್ಟಾರ್ ನಟರನ್ನಾಗಿ ಮಾಡಿದ ಸಿನಿಮಾ. ಮೂಲ ಹೆಸರು ಸಂಪತ್ ಕುಮಾರ್ ಮೂಲಕ 'ವಂಶವೃಕ್ಷ' ಸಿನಿಮಾದಲ್ಲಿ ನಟಿಸಿದ್ದ ನಟ, ಆ ಬಳಿಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾ ಮೂಲಕ ನಾಯಕರಾಗಿ, 'ಆಂಗ್ರಿ ಯಂಗ್ ಮ್ಯಾನ್' ಬಿರುದು ಪಡೆದು ಸ್ಟಾರ್ ನಟರಾಗಿ ಮೆರೆದರು. ಆ ಬಳಿಕ ನಟ ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮೇರನಟರ ಪಟ್ಟಿಯಲ್ಲಿ ಸ್ಥಾನ ಪಡೆದರು.
ಇಂಥ ನಟ ವಿಷ್ಣುವರ್ಧನ್ ಸಿನಿಮಾ ಬದುಕಿನಲ್ಲಿ ಬಂಧನ, ಮುತ್ತಿನ ಹಾರ ಹಾಗೂ ಯಜಮಾನ ಮುಂತಾದ ಸಿನಿಮಾ ದೊಡ್ಡ ಮೈಲಿಗಲ್ಲುಗಳು. ಆದರೆ ಅಚ್ಚರಿ ಎಂಬಂತೆ, ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿನಯಿಸಲು ಸುತಾರಾಂ ಒಪ್ಪಿರಲಿಲ್ಲವಂತೆ. ಈ ಸಂಗತಿಯನ್ನು ಸ್ವತಃ ಬಂಧನ ಚಿತ್ರದ ನಿರ್ದೇಶರಾದ ಡಾ ರಾಜೇಂದ್ರಸಿಂಗ್ ಬಾಬು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅರೇ, ಅಂಥ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಲು ನಟ ವಿಷ್ಣುವರ್ಧನ್ ಯಾಕೆ ಒಪ್ಪಿರಲಿಲ್ಲ ಗೊತ್ತಾ? ಇಲ್ಲಿದೆ ಆ ರಹಸ್ಯ..
ಹೌದು, ರಾಜೇಂದ್ರಸಿಂಗ್ ಬಾಬು ಅವರು ನಟ ವಿಷ್ಣುವರ್ಧನ್ ಅವರಿಗೆ ಬಂಧನ (Bandhana) ಚಿತ್ರದ ಕಥೆ ಹೇಳಿದಾಗ, ನಟ ವಿಷ್ಣುವರ್ಧನ್ 'ನಾನು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವೇ ಇಲ್ಲ. ನನಗೆ ಆಂಗ್ರಿ ಯಂಗ್ ಮ್ಯಾನ್, ಸಾಹಸಸಿಂಹ ಹಾಗೂ ಕರಾಟೆ ಕಿಂಗ್ ಅಂತ ಸಿನಿಮಾ ಪ್ರೇಕ್ಷಕರು ಹೆಸರು ಇಟ್ಟಿದ್ದಾರೆ. ಅಂಥ ಪಾತ್ರ ಬಿಟ್ಟು ನಾನು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳೂ ಒಪ್ಪಲಿಕ್ಕಿಲ್ಲ. ದಯವಟ್ಟು ನಿಮ್ಮ ಕಾಸನ್ನು ಕಳೆದುಕೊಳ್ಳಬೇಡಿ. ನಾನು ಈ ಸಿನಿಮಾ ಮಾಡೋದ್ರಿಂದ ನಿಮಗೆ ನಷ್ಟ ಆಗಬಹುದು. ಅದು ನಿಮಗೆ ಒಳ್ಳೆಯದಲ್ಲ. ನಾನೊಬ್ಬ ನಿಮ್ಮ ಹಿತೈಷಿಯಾಗಿ ಈ ಮಾತು ಹೇಳುತ್ತಿದ್ದೇನೆ' ಎಂದಿದ್ದರಂತೆ ನಟ ವಿಷ್ಣುವರ್ಧನ್.
ವಿಷ್ಣುವರ್ಧನ್ ಮಾತಿಗೆ ರಾಜೇಂದ್ರ ಸಿಂಗ್ ಬಾಬು ಅವರು 'ನೀವು ಈ ಸಿನಿಮಾ ಮಾಡಲೇಬೇಕು. ಈ ಕಥೆ ಹಾಗೂ ನಿಮ್ಮ ಡಾಕ್ಟರ್ ಪಾತ್ರವನ್ನು ಖಂಡಿತ ಪ್ರೇಕ್ಷಕರು ಒಪ್ಪುತ್ತಾರೆ. ಒಮ್ಮೆ ಸಿನಿಮಾ ಫೇಲ್ ಅಗಿ ನನಗೆ ಲಾಸ್ ಆದರೂ ಏನೂ ಸಮಸ್ಯೆಯಿಲ್ಲ. ನಾನು ಹಿಂದಿ ಸಿನಿಮಾ ಮಾಡಿ ಹಣವನ್ನು ಇಲ್ಲಿ ತಂದು ಹಾಕಿಕೊಳ್ಳುತ್ತೇನೆ' ಎಂದರಂತೆ. ಆ ಬಳಿಕವಷ್ಟೇ ನಟ ವಿಷ್ಣುವರ್ಧನ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಆ ಬಳಿಕ ನಡೆದಿದ್ದು ಇತಿಹಾಸ.
1984ರಲ್ಲಿ ತೆರೆಗೆ ಬಂದ ಬಂಧನ ಸಿನಿಮಾ ಆ ವರ್ಷದ ಸೂಪರ್ ಹಿಟ್ ಸಿನಿಮಾ ಅಗಿ ಹೊರಹೊಮ್ಮಿತ್ತು. ನಟ ವಿಷ್ಣುವರ್ಧನ್-ಸುಹಾಸಿನಿ ಜೋಡಿಯನ್ನು ಕನ್ನಡದ ಪ್ರೇಕ್ಷಕರು ತುಂಬಾ ಇಷ್ಟಪಟ್ಟು ಸಿನಿಮಾ ಸೂಪರ್ ಹಿಟ್ ಆಗುವಂತೆ ನೋಡಿಕೊಂಡರು. ಜೊತೆಗೆ, ಜೈಜಗದೀಶ್ ಎಂಬ ಅಪ್ಪಟ ಕನ್ನಡದ ಪ್ರತಿಭೆ ಬಂಧನ ಸಿನಿಮಾ ಮೂಲಕ ಸ್ಟಾರ್ ಖಳನಾಯಕ ಪಟ್ಟ ಪಡೆದುಕೊಂಡರು. ಬಂಧನ ಸಿನಿಮಾದ ಬಳಿಕ ನಟ ಜೈಜಗದೀಶ್ ಅವರು ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡರು. ಈಗ ಇವೆಲ್ಲವೂ ಇತಿಹಾಸ.
ಇಂದು ಕೂಡ ಬಂಧನ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಆ ಸಿನಿಮಾದ ಹೀರೋ ವಿಷ್ಣುವರ್ಧನ್ ಬದುಕಿಲ್ಲ. ಆದರೆ ಆ ಸಿನಿಮಾ ಹುಟ್ಟುಹಾಕಿರೋ ಹವಾ ಇಂದಿಗೂ ಕಡಿಮೆ ಆಗಿಲ್ಲ. ಆದರೆ, ಒಮ್ಮೆ ವಿಷ್ಣುವರ್ಧನ್ ಅವರನ್ನು ರಾಜೇಂದ್ರ ಸಿಂಗ್ ಬಾಬು ಒಪ್ಪಿಸಿ ಆ ಸಿನಿಮಾ ಮಾಡದೇ ಇದ್ದರೆ ಅದು ಕನ್ನಡ ಪ್ರೇಕ್ಷಕರು ಸೇರಿದಂತೆ, ಸ್ವತಃ ವಿಷ್ಣುವರ್ಧನ್ ಅವರಿಗೂ ನಷ್ಟ ಆಗುತ್ತಿತ್ತು. ಆದರೆ, ಆ ಸಿನಿಮಾ ಮೂಲಕ ಹಲವರ ವೃತ್ತಿಬದುಕು ಎತ್ತರಕ್ಕೆ ಏರಿತು. ಅದಕ್ಕೇ ಅನ್ನೋದು, ಎಲ್ಲವೂ ವಿಧಿ ಲಿಖಿತ.. ಏನಾಗಬೇಕೋ ಅದು ಆಗೋದು, ಬಂಧನ ಸಿನಿಮಾ ವಿಷ್ಣುವರ್ಧನ್ ಅವರಿಗಾಗಿಯೇ ಬಂತು ಎಂಬುದು ಅಳಿಸಲಾಗದ ಸತ್ಯ ಸಂಗತಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.