ಧಾರಾವಾಹಿ ನಿರ್ಮಾಣಕ್ಕಿಳಿದ ರಮೇಶ್ ಅರವಿಂದ್!

By Web DeskFirst Published Mar 4, 2019, 10:50 AM IST
Highlights

ರಮೇಶ್ ಅರವಿಂದ್ ಈಗ ನಿರ್ಮಾಪಕರಾಗುತ್ತಿದ್ದಾರೆ. ಹಾಗಂತ ಅವರು ಸಿನಿಮಾ ನಿರ್ಮಿಸುತ್ತಿಲ್ಲ. ಬದಲಿಗೆ ಕಿರುತೆರೆಯಲ್ಲಿ ಧಾರಾವಾಹಿಗೆ ಬಂಡವಾಳ ಹಾಕುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುವ ‘ನಂದಿನಿ’ ಎನ್ನುವ ಹೆಸರಿನ ಧಾರಾವಾಹಿಗೆ ಈಗ ರಮೇಶ್ ಅರವಿಂದ ಅವರದ್ದೇ ನಿರ್ಮಾಣ ಸಾರಥ್ಯ. ಹಾಗೆ ನೋಡಿದರೆ ಇದೇ ಧಾರಾವಾಹಿ ಬೇರೆಯವರ ನಿರ್ಮಾಣದಲ್ಲಿ ಪ್ರಸಾರವಾಗುತ್ತಿತ್ತು. ಅದು ಮುಗಿದು ಅದರ ಮುಂದುವರಿದ ಭಾಗವನ್ನು ನಿರ್ಮಾಣ ಮಾಡಬೇಕು ಎಂದುಕೊಂಡಾಗ ರಮೇಶ್ ಅರವಿಂದ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ವಾಹಿನಿಯಲ್ಲಿ ಈ ‘ನಂದಿನಿ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಕುತೂಹಲಕಾರಿ ಚಿತ್ರಕಥೆ, ಅದ್ಭುತ ಗ್ರಾಫಿಕ್ ದೃಶ್ಯಗಳಿಂದ ಜನರನ್ನು ಮೋಡಿ ಮಾಡಿತು. ಹೀಗೆ ಮನೆ ಮಾತಾಗಿರುವ ಈ ಧಾರಾವಾಹಿಯ ಮುಂದುವರೆದ ಭಾಗದ ನಿರ್ಮಾಣಕ್ಕೆ ರಮೇಶ್ ಅರವಿಂದ್ ಮುಂದಾಗಿರುವುದು ವಿಶೇಷ. ಇಲ್ಲಿವರೆಗೂ ನಟ ಆಗಿದ್ದ ರಮೇಶ್ ಅರವಿಂದ್ ಈಗ ಧಾರಾವಾಹಿಯೊಂದಕ್ಕೆ ನಿರ್ಮಾಪಕರಾಗಿದ್ದು ಯಾಕೆ?
‘ನಂದಿನಿ’ಗೆ ಅವರು ಹಣ ಹೂಡುವುದಕ್ಕೆ ಕಾರಣಗಳೇನು? ರಮೇಶ್ ಹೇಳುವುದಿಷ್ಟು-

  • ಕಿರುತೆರೆಯಲ್ಲಿ ನಂದಿನಿ ಧಾರಾವಾಹಿ ತುಂಬಾ ಪ್ರಸಿದ್ಧಿ ಆಗಿದೆ.
  • ಅದರ ಮುಂದುವರಿದ ಭಾಗ ಅಂದರೆ ಮುಂದಿನ ಜನರೇಷನ್ ಕತೆ ಹೆಚ್ಚು ಇಷ್ಟವಾಯಿತು.
  • ಹಾವು, ದೇವರು, ಪ್ರಾಣಿಗಳು ಹೀಗೆ ಸಿಕ್ಕಾಪಟ್ಟೆ ಫ್ಯಾಂಟಿಸಿ ಆಗಿ ಸಾಗುವ ಈ ಧಾರಾವಾಹಿಯ ಕತೆಯನ್ನು ನಾನು ಮಾಡಿದ ಸಿನಿಮಾಗಳಲ್ಲೂ ನೋಡಿರಲಿಲ್ಲ. ಆ ಧಾರಾವಾಹಿಯ ಫ್ಲೇವರ್ ನನ್ನ ಹೆಚ್ಚು ಆಕರ್ಷಿಸಿತು.
  • ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ಬರುತ್ತಿದೆ. ಇದರ ಪ್ರೇಕ್ಷಕ ವರ್ಗವೇ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ಜನರಿಗೆ ಗೊತ್ತಿರುವ ಹೆಸರಿನ ಧಾರಾವಾಹಿ.
  • ಈಗಾಗಲೇ ಪ್ರಸಾರ ಶುರುವಾಗಿದೆ. ರವಿ ಜೋಷಿ ಮತ್ತು ತಂಡ ತುಂಬಾ ಚೆನ್ನಾಗಿ ಇಡೀ ಕತೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಹೀಗೆ ಹಲವು ಕಾರಣಗಳಿಗಾಗಿ ತಮ್ಮನ್ನು ‘ನಂದಿನಿ’ ಧಾರಾವಾಹಿಗೆ ನಿರ್ಮಾಪಕರಾಗುವಂತೆ ಮಾಡಿತು ಎಂಬುದು ಸ್ವತಃ ರಮೇಶ್ ಅರವಿಂದ್ ಅವರೇ ಹೇಳಿಕೊಳ್ಳುವ ಮಾತುಗಳು. ಇನ್ನು ಈ ಕತೆಯಲ್ಲಿ ಸಾಕಷ್ಟು ತಿರುವುಗಳಿವೆ. ಅಷ್ಟಾವಕ್ರನ ಕ್ರೂರತನಕ್ಕೆ ಗಂಗಾ ಸಂಸಾರ ಬಲಿಯಾಗುತ್ತದೆ. ಎಲ್ಲರೂ ಬಲಿಯಾಗಿ ಕೊನೆಗೆ ಉಳಿಯುವವರೇ ನಾಯಕ ಅರುಣನ ತಾಯಿ ಮತ್ತು ಮಗಳು ದೇವಸೇನಾ. ಗರ್ಭವತಿಯಾದ ಗಂಗಾ ತನ್ನ ಮಗುವಿಗೆ ಜನನ ನೀಡಿದ ನಂತರ ತೀರಿಕೊಂಡಿದ್ದು ದೇವಸೇನಾ ಹರೆಯಕ್ಕೆ ಬಂದಾಗ ತಿಳಿಯುತ್ತದೆ. ಗುರುಕುಲದಲ್ಲಿಬೆಳೆಯುತ್ತಿರುವ ಮುಗ್ಧೆ ಜನನಿಯನ್ನು ಬೆಂಗಳೂರಿಗೆ ಕರೆತರುತ್ತಾರೆ, ಕಾಲೇಜಿಗೆ ಸೇರಿಸುತ್ತಾರೆ. ಪಕ್ಕಾ ಹಳ್ಳಿಯಲ್ಲಿ ಸಂಪ್ರದಾಯಸ್ಥ ಆಶ್ರಮದಲ್ಲಿ ಬೆಳೆದ ಜನನಿಗೆ ಪಟ್ಟಣದ ವಾತಾವರಣ ಒಗ್ಗದೇ ಒದ್ದಾಡುತ್ತಾಳೆ. ಅದು ಕೆಲವೊಮ್ಮೆ ಹಾಸ್ಯಮಯವಾದರೆ, ಮತ್ತೊಮ್ಮೆ ಭಾವುಕವಾಗಿರುತ್ತದೆ. ಹೀಗೆ ಹಲವು ದಾರಿಗಳಲ್ಲಿ ಧಾರಾವಾಹಿ ಪಟ್ಟಣದಲ್ಲಿ ಸಾಗುತ್ತದೆ. ಗಂಗಾ ಪಾತ್ರದಿಂದ ಜನಮನ ಸೆಳೆದಿದ್ದ ನಿತ್ಯಾರಾಮ್ ಅವರೇ ಜನನಿಯಾಗಿ ಬರುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದ ನಟಿ, ನಿರೂಪಕಿ ಕಾವ್ಯಶಾಸ್ತ್ರಿ ದೇವಸೇನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಮೊದಲ ಸಲ ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಪರಿಚಯಗೊಳ್ಳುತ್ತಿದ್ದೇನೆ. ನಂದಿನಿಯ ಮೂಲ ಕತೆಯೇ ನನ್ನನ್ನು ಆಕರ್ಷಿಸಿತ್ತು. ನೈಜ ಕತೆಗಳಲ್ಲಿ ನಟಿಸಿ, ನಿರ್ದೇಶಿಸಿದ ನನಗೆ ಈ ತರಹದ ಫ್ಯಾಂಟಸಿ ಕಥೆ ಹೊಸತು ಎನಿಸಿತು. ಆ ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ಹಾವುಗಳು, ಪ್ರೇತಾತ್ಮಗಳು ವಿಶೇಷ ಶಕ್ತಿಗಳಾಗುವುದು, ಕುಟುಂಬದ ಭಾವನಾತ್ಮಕ ಸಂಬಂಧಗಳು. ಇವೆಲ್ಲವೂ ಈ ನಂದಿನಿ ಧಾರಾವಾಹಿಯನ್ನು ನಿರ್ಮಾಣ ಮಾಡಲು ನನ್ನನ್ನು ಪ್ರೇರೇಪಿಸಿತು. ನಿತಿನ್ ಅವರು ನಿರ್ದೇಶಕರಾಗಿ ಬಂದಿದ್ದಾರೆ.- ರಮೇಶ ಅರವಿಂದ್

 

 

click me!