
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾದ ಮೇಲೆ ಕಾನೂನು ಹೋರಾಟದಲ್ಲಿ ಒಂದಾದ ಮೇಲೊಂದರಂತೆ ಹಿನ್ನಡೆ ಅನುಭವಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈಗ ಕೊನೆಗೂ ಜೈಲು ಅಧಿಕಾರಿಗಳ ಮುಂದೆ ತಲೆಬಾಗಿದ್ದಾರೆ. ಜಾಮೀನು ಸಿಗದೇ ಕಂಗೆಟ್ಟಿರುವ ದಾಸ, ಇದೀಗ ತಮ್ಮ ಕುಟುಂಬವನ್ನು ಭೇಟಿಯಾಗಲು ಹೊಸ ಹಾದಿ ತುಳಿದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಜೈಲಾಧಿಕಾರಿಗೆ ದರ್ಶನ್ ಪತ್ರವೊಂದನ್ನು ಬರೆದಿದ್ದು, ಜೈಲಿನ ಕೊಠಡಿಯೊಳಗೆ ಹೆಂಡತಿ ಮತ್ತು ಮಗನ ಭೇಟಿಗೆ (Inner Interview) ಅವಕಾಶ ನೀಡುವಂತೆ ಕಳಕಳಿಯ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್, ಈ ಹಿಂದೆ ಜೈಲಿನ ಸವಲತ್ತುಗಳಿಗಾಗಿ ಮತ್ತು ಕುಟುಂಬದವರ ಭೇಟಿಗಾಗಿ ಹಲವು ಬಾರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರತಿ ಬಾರಿಯೂ ಅವರಿಗೆ ಕಾನೂನು ಚೌಕಟ್ಟಿನಲ್ಲಿ ಹಿನ್ನಡೆಯೇ ಉಂಟಾಗಿತ್ತು. ಮೇ 15 ರಂದು ಅವರ ಜಾಮೀನು ಅರ್ಜಿ ವಜಾ ಆದ ಕೂಡಲೇ, ಅನಿವಾರ್ಯವಾಗಿ ದರ್ಶನ್, ಎಸ್ಪಿ ಅಂಶುಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಈ ಹಿಂದೆ ಕೋರ್ಟ್ ಮೂಲಕ ಒತ್ತಡ ತರಲು ಯತ್ನಿಸಿದ್ದ ದರ್ಶನ್, ಈಗ ಜೈಲು ನಿಯಮಾವಳಿಯಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತ ದರ್ಶನ್ ಜೈಲಿನಿಂದ ಪತ್ರ ಬರೆದರೆ, ಅತ್ತ ಪತ್ನಿ ವಿಜಯಲಕ್ಷ್ಮಿ ಕೂಡ ಪತಿಯನ್ನು ಭೇಟಿಯಾಗಲು ಶತಪ್ರಯತ್ನ ನಡೆಸುತ್ತಿದ್ದಾರೆ. ಮೇ 16 ರಂದು ಬೆಂಗಳೂರಿನಲ್ಲಿ ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ವಿಜಯಲಕ್ಷ್ಮಿ, ದರ್ಶನ್ ಅವರನ್ನು ಜೈಲಿನ ಕೊಠಡಿಯೊಳಗೆ ಪ್ರತ್ಯೇಕವಾಗಿ ಭೇಟಿ ಮಾಡಲು ಮತ್ತು ಮಗ ವಿನೀಶ್ನನ್ನು ಭೇಟಿ ಮಾಡಿಸಲು ಅನುಮತಿ ನೀಡುವಂತೆ ಕೋರಿದ್ದರು. ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಾಮಾನ್ಯ ಕೈದಿಗಳಿಗೆ ಇರುವ ನಿಯಮಗಳಿಗಿಂತ ಹೆಚ್ಚಿನ ರಿಯಾಯಿತಿ ಕೋರಿ ಈ ಮನವಿ ಮಾಡಲಾಗಿದೆ ಎನ್ನಲಾಗಿದೆ.
ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮನವಿ ಪತ್ರ ಈಗ ಹಿರಿಯ ಪೊಲೀಸ್ ಅಧಿಕಾರಿಗಳ ಕೈಯಲ್ಲಿದೆ. ಇಂದು (ಮೇ 18) ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಭದ್ರತಾ ದೃಷ್ಟಿಯಿಂದ ಮತ್ತು ಜೈಲು ಮ್ಯಾನ್ಯುಯಲ್ ಆಧರಿಸಿ ನಾಳೆ (ಮಂಗಳವಾರ) ದರ್ಶನ್ ಅವರಿಗೆ ತಮ್ಮ ಹೆಂಡತಿ ಮತ್ತು ಮಗನನ್ನು ಜೈಲಿನ ಒಳಗೆ ಭೇಟಿ ಮಾಡಲು 'ವಿಶೇಷ ಸಂದರ್ಶನ'ಕ್ಕೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಾರೆಯಾಗಿ, ಆರಂಭದಲ್ಲಿ ಜೈಲು ಅಧಿಕಾರಿಗಳ ಮಾತಿಗೆ ಅಷ್ಟಾಗಿ ಮನ್ನಣೆ ನೀಡದೆ ನೇರವಾಗಿ ಕೋರ್ಟ್ ಮೂಲಕ ಸವಲತ್ತು ಪಡೆಯಲು ಮುಂದಾಗಿದ್ದ ದರ್ಶನ್, ಈಗ ಪರಿಸ್ಥಿತಿಯ ಅರಿವಾಗಿ ಅಧಿಕಾರಿಗಳ ಮುಂದೆ ಮಣಿದಿದ್ದಾರೆ. ಜಾಮೀನು ಇಲ್ಲದೇ ಏಕಾಂಗಿತನ ಅನುಭವಿಸುತ್ತಿರುವ ದರ್ಶನ್ಗೆ ಮಗ ಮತ್ತು ಪತ್ನಿಯ ಭೇಟಿ ಮಾನಸಿಕವಾಗಿ ಎಷ್ಟು ಚೈತನ್ಯ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.