ಕಾಂತಾರ ಮೋಡಿ; ಪರೀಕ್ಷೆಯಲ್ಲಿ 3ನೇ ತರಗತಿ ವಿದ್ಯಾರ್ಥಿ ಉತ್ತರಕ್ಕೆ ಶಿಕ್ಷಕರು ಶಾಕ್

By Shruthi KrishnaFirst Published Dec 10, 2022, 11:59 AM IST
Highlights

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿಯ ಉತ್ತರ ನೋಡಿದರೆ ಗೊತ್ತಾಗುತ್ತದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿ ಬರೆದ ಉತ್ತರ ನೋಡಿದರೆ ಗೊತ್ತಾಗುತ್ತದೆ. ಕಾಂತಾರ ಸಿನಿಮಾ ಬಳಿಕ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಮತ್ತಷ್ಟು ಜಾಸ್ತಿ ಆಗಿದೆ. ತನ್ನ ಊರು ಬಿಟ್ಟು ದೂರದ ಊರುಗಳಲ್ಲಿ ವಾಸಿಸುತ್ತಿರುವವರು ಸಹ ಹುಟ್ಟೂರಿಗೆ ಬಂದು ದೈವಾರಾಧನೆ, ಭೂತ, ಕೋಲದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ಮಕ್ಕಳಿಂದ ದೊಡ್ಡವರ ವರೆಗೂ ಪ್ರಭಾವ ಬೀರಿದ ಸಿನಿಮಾವಾಗಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಕಾಂತಾರ ಸಿನಿಮಾವನ್ನು ನೋಡಿ ಜನ ಸಂತಸ ಪಟ್ಟಿದ್ದಾರೆ, ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದಾರೆ. ಕಾಂತಾರ ಎಫೆಕ್ಟ್ ಎಷ್ಟರ ಮಟ್ಟಿಗೆ ಇದೆ ಎಂದರೆ 3ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಕಾಂತಾರದ ಉತ್ತರ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. 

ರಿಷಬ್ ಶೆಟ್ಟಿ ಸಿನಿಮಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿಯ ಉತ್ತರನೇ ಸಾಕ್ಷಿ. ಅಷ್ಟಕ್ಕೂ ಮೂರನೇ ತರಗತಿ ವಿದ್ಯಾರ್ಥಿ ಮಾಡಿದ್ದಾದೂ ಏನು ಅಂತಿರಾ?, ಪರೀಕ್ಷೆಯಲ್ಲಿ 'ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ' ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ. ಅಲ್ಲದೇ ಆ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ವಿದ್ಯಾರ್ಥಿ ಉತ್ತರ ಹೀಗಿತ್ತು, 'ಕ್ಷೇತ್ರಪಾಲ, ಗುಳಿಗಾ ಮತ್ತು ದೈವ' ಎಂದು ಬರೆದಿದ್ದಾನೆ. ಪುಟ್ಟ ಬಾಲಕ ಪರೀಕ್ಷೆಯಲ್ಲಿ ಬರೆದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಆನೆಗುಡ್ಡೆ ದೇವಸ್ಥಾನದಲ್ಲಿ 'ಕಾಂತಾರ' ಶಿವ; ಕುಟುಂಬ ಸಮೇತ ಭೇಟಿ ನೀಡಿದ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ದೈವಾರಾಧನೆ, ಭೂತಕೋಲದ ಬಗ್ಗೆ ಸುಂದರವಾಗಿ ತೋರಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾಂತಾರ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ರಿಷಬ್. ಪ್ರಕೃತಿ ಮತ್ತು ಮನುಷ್ಯನ ನಡುವಿನ ಹೋರಾಟ, ಜಾತಿ ವ್ಯವಸ್ಥೆ ಹೀಗೆ ಅನೇಕ ಸೂಕ್ಷ್ಮ ವಿಚಾರಗಳು ಕಾಂತಾರ ಸಿನಿಮಾದಲ್ಲಿದೆ. ಸಿನಿಮಾದ ಕಥೆ, ನಿರ್ದೇಶ, ಹಾಡುಗಳು, ಪಾತ್ರವರ್ಗ ಹೀಗೆ ಪ್ರತಿಯೊಂದು ವಿಚಾರದಲ್ಲೂ ಅಭಿಮಾನಿಗಳ ಹೃದಯ ಗೆದ್ದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

𝗞𝗮𝗻𝘁𝗮𝗿𝗮 𝗶𝗺𝗽𝗮𝗰𝘁🌟

ಜನಮಾನಸದಲ್ಲಿ ಮಾಡಿರೋ ಮೋಡಿ ಎಂಥಾದ್ದು ಅನ್ನೋದನ್ನ ಒಂದು ಪ್ರಬಂಧ ಬರೆದು ಮಂಡಿಸೋ ವಿಚಾರವೇ ಸರಿ. ಇಲ್ಲಿ ಮೂರನೇ ಕ್ಲಾಸ್ ವಿದ್ಯಾರ್ಥಿ ಕೊಟ್ಟಿರೋ answer ನೋಡಿದರೆ ಸಿನಿಮಾ ಎಷ್ಟು ಪ್ರಭಾವ ಬೀರಿದೆ ಅನ್ನೋದು ಗೊತ್ತಾಗುತ್ತೆ 👏 pic.twitter.com/IVhpbPb6Ge

— 𝐍𝐀𝐌𝐂𝐈𝐍𝐄𝐌𝐀 (@NamCinema)

Kantara;'ವರಾಹ ರೂಪಂ‌' ಹಾಡು ಬಳಕೆಗೆ ಸಿಕ್ತು ಅನುಮತಿ; ಕೇಸ್ ಗೆದ್ದ ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಸ್ಯಾಂಡಲ್ ವುಡ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡುವಂತೆ ಒತ್ತಾಯ ಹೆಚ್ಚಾಯಿತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಪ್ರೇಕ್ಷಕರು ಸಹ ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದರು. ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ನೋಡಿ ಹಾಡಿಹೊಗಳಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಕಾರ್ತಿ, ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ, ನಾನಿ, ಶಿಲ್ಪಾ ಶೆಟ್ಟಿ, ಕಂಗನಾ, ಸುನಿಲ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾವನ್ನು ಹಾಡಿಹೊಗಳಿದರು.
 

click me!