ರಾಜ್ ಜೀವನದ 6 ತಿರುವುಗಳು

By Web DeskFirst Published Apr 24, 2019, 3:55 PM IST
Highlights

ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ. 

1. ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ.

ಸಾವಿನ ವದಂತಿ: ರಾಧಾ ಮಿಸ್ is fine ಎಂದ ಪತಿ ಪ್ರದೀಪ

ರಾಜಕುಮಾರ್ ನಾಯಕ ನಟರಾಗಿ ಚಿತ್ರರಂಗ ಪ್ರವೇಶಿಸಿದ್ದು 1954 ರಲ್ಲಿ, ‘ಬೇಡರ ಕಣ್ಣಪ್ಪ’ ಅವರ ಮೊದಲ ಚಿತ್ರ. ಆದಾಗಲೇ ಅವರು ಬಾಲನಟನಾಗಿ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿದ್ದು ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ. ಆಗಲೇ ಕನ್ನಡಕ್ಕೊಬ್ಬ ಹೀರೋ ಸಿಕ್ಕ ಅಂತ ಜನ ಮಾತನಾಡಿದರು. ಅದು ‘ರಾಜಕುಮಾರ್’ ಸಿನಿ ಬದುಕಿನ ಮಹತ್ತರ ತಿರುವು.

2. ಕನ್ನಡ ಚಿತ್ರರಂಗಕ್ಕೆ ದಾಖಲೆ ಎನ್ನುವ ಹಾಗೆ ರಾಜಕುಮಾರ್ ನಾಯಕ ನಟರಾಗಿ 100 ಚಿತ್ರಗಳನ್ನು ಪೂರೈಸಿದ್ದು ಅವರ ಬದುಕಿನ ಇನ್ನೊಂದು ಮೈಲುಗಲ್ಲು. ಆಗಲೇ ಅವರಿಗೆ ‘ನಟಸಾರ್ವಭೌಮ’ ಬಿರುದು ಬಂತು. ಅದಕ್ಕೂ ಮುನ್ನ ಅವರನ್ನು ‘ವರನಟ’ ಅಂತಲೂ ಅಭಿಮಾನಿಗಳು ಕರೆಯುತ್ತಿದ್ದರು. ಆದರೆ ನಟ ಸಾರ್ವಭೌಮ ಅಂತ ಬಿರುದು ಸಿಕ್ಕಿದ್ದು ಹೀರೋ ಆಗಿ ನೂರು ಚಿತ್ರಗಳನ್ನು ಪೂರೈಸಿದ ನಂತರ. ಆ ಹೊತ್ತಿನ ಸಂದರ್ಭವೇ ವಿಶೇಷವಾಗಿತ್ತು. ಯಾಕೆಂದರೆ ಅಲ್ಲಿವರೆಗೂ ಕನ್ನಡದ ಯಾವುದೇ ನಟನೂ ಹೀರೋ ಆಗಿ ನೂರು ಸಿನಿಮಾ ಪೂರೈಸಿರಲಿಲ್ಲ.

ನೋಡಲೇಬೇಕಾದ ಡಾ. ರಾಜ್ 5 ಚಿತ್ರಗಳು

ಆ ದಾಖಲೆ ರಾಜಕುಮಾರ್ ಅವರಿಂದ ಸಾಧ್ಯವಾಯಿತು. ‘ಭಾಗ್ಯದ ಬಾಗಿಲು’ ರಾಜ್ ಅಭಿನಯದ ನೂರನೇ ಚಿತ್ರ. ಈ ಚಿತ್ರ ತೆರೆ ಕಂಡಾಗ ಮೈಸೂರಿನಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಹಾಗೆಯೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸಮಾರಂಭ ನಡೆಯಿತು. ಅಭಿಮಾನಿಗಳು ಅವರಿಗೆ ‘ನಟ ಸಾರ್ವಭೌಮ’ ಬಿರುದು ನೀಡಿ ಸನ್ಮಾನಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಬಿರುದು ಸನ್ಮಾನ ಸಮಾರಂಭ ಅವರೊಳಗಿನ ಸಮಾಜಮುಖಿ ಗುಣದ ಅನಾವರಣಕ್ಕೆ ವೇದಿಕೆ ಆಯಿತು. ಅವರ ಆಸಕ್ತಿಯಂತೆ ‘ರಾಜ ಕುಮಾರ್ ಶಿಕ್ಷಣ ಸಮಿತಿ’ ಆಸ್ಥಿತ್ವಕ್ಕೆ ಬಂತು. ಅದಕ್ಕೆ ಸಿವಿಎಲ್ ಶಾಸ್ತ್ರಿ ಅಧ್ಯಕ್ಷರಾದರು. ರಾಜಕುಮಾರ್ ಮೊದಲ ಬಾರಿಗೆ 10 ಸಾವಿರ ದೇಣಿಗೆ ಇಟ್ಟು, ಸಮಿತಿಗೆ ಚಾಲನೆ ಕೊಟ್ಟರು. ಅಲ್ಲಿ ತನಕ ನಟರಾಗಿದ್ದ ರಾಜಕುಮಾರ್, ಅಲ್ಲಿಂದ ಸಮಾಜಮುಖಿಯಾದರು.

3. ರಾಜ್ ಕುಮಾರ್ ಬದುಕಿನ ಮಹತ್ವದ ಘಟ್ಟಗಳಲ್ಲಿ ದಾದಾ ಫಾಲ್ಕೆ ಪ್ರಶಸ್ತಿ ಪುರಸ್ಕಾರವೂ ಒಂದು. ಕನ್ನಡಕ್ಕೆ ಈಗಲೂ ಅವರೊಬ್ಬರೇ ಫಾಲ್ಕೆ ಪ್ರಶಸ್ತಿ ಪುರಸ್ಕೃತರು. ಅದಕ್ಕೂ ಮುಂಚೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂತು. ಈ ಪ್ರಶಸ್ತಿ ಬಂದಾಗ ರಾಜಕುಮಾರ್ ಅವರ ನಿಜವಾದ ವ್ಯಕ್ತಿತ್ವ ಹೊರ ರಾಜ್ಯದವರಿಗೂ ಗೊತ್ತಾಯಿತು.

ವಿಶೇಷವಾಗಿ ಹಿಂದಿ ಚಿತ್ರರಂಗದಿಂದಲೂ ರಾಜ ಕುಮಾರ್ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿತು. ಧರ್ಮೇಂದ್ರ, ಸಂಜೀವ್ ಕುಮಾರ್ ಸೇರಿದಂತೆ ಹಲವು ಹಿರಿಯ ನಟರು ಬೆಂಗಳೂರಿಗೆ ಬಂದು ರಾಜ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಿದರು. ದಕ್ಷಿಣ ಭಾರತ ಚಿತ್ರರಂಗ ಕೂಡ ಅವರನ್ನು ಗೌರವಿಸಿ ಕೊಂಡಾಡಿತು. ಅಲ್ಲಿ ತನಕ ಕನ್ನಡಕ್ಕಷ್ಟೇ ಎನ್ನುವಂತಿದ್ದ ರಾಜಕುಮಾರ್ ಅವರ ಕೀರ್ತಿ ಹೊರ ರಾಜ್ಯದಲ್ಲೂ ಪ್ರಜ್ವಲಿಸಿತು. ಭಾರತೀಯ ಚಿತ್ರರಂಗದಲ್ಲೇ ರಾಜ ಕುಮಾರ್ ಅಪರೂಪದ ನಟರಾಗಿ ಕಾಣಿಸಿಕೊಂಡಿದ್ದು, ಕನ್ನಡ ಚಿತ್ರೋದ್ಯಮವೇ ಹೆಮ್ಮೆ ಪಡುವಂತಾಯಿತು.

4. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಭಿಮಾನಿಗಳನ್ನು ‘ದೇವರು’ ಎಂದಿದ್ದು ರಾಜ ಕುಮಾರ್ ಮಾತ್ರ. ಅಲ್ಲಿಂದಲೇ ಇವತ್ತಿಗೂ ಸ್ಟಾರ್‌ಗಳು ಅಭಿಮಾನಿಗಳೇ ದೇವರು ಎನ್ನುವುದು ವಾಡಿಕೆಯಂತಾಗಿರುವುದು ಹೌದು. ಆದರೆ ಅವತ್ತು ರಾಜಕುಮಾರ್ ಅಭಿಮಾನಿಗಳನ್ನು ದೇವರು ಎಂದು ಸಂಭೋಧಿಸಿದ್ದ ಸಂದರ್ಭವೇ ವಿಶೇಷ. ಆಗ ರಾಜ್ಯದಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಕುವೆಂಪು ಮತ್ತು ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿತು.

ವಿಧಾನ ಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ. ಕುವೆಂಪು ಅವರು ಅನಾರೋಗ್ಯದ ಕಾರಣ ಅವತ್ತಿನ ಸಮಾರಂಭಕ್ಕೆ ಹಾಜರಾಗಲಿಲ್ಲ. ರಾಜ ಕುಮಾರ್ ಅವರಿಗೆ ಮಾತ್ರ ಸಮಾರಂಭ ಏರ್ಪಡಾಗಿತ್ತು. ಪ್ರಶಸ್ತಿ ಪ್ರಧಾನಕ್ಕೂ ಮುನ್ನ ಬಂಗಾರಪ್ಪ ಯಾರೇ ಕೂಗಾಡಲಿ, ಊರೇ ಹೋರಾಡಲಿ... ಹಾಡು ಹೇಳುತ್ತಿದ್ದರು. ವೇದಿಕೆ ಮುಂಭಾಗದಲ್ಲಿದ ಸಭಿಕರು ಕೂಗಾಡಿದರು. ಕುರ್ಚಿಗಳನ್ನು ಕಿತ್ತು ಬಿಸಾಕಿದರು. ಆಗ ವೇದಿಕೆಯಲ್ಲಿದ್ದ
ರಾಜ ಕುಮಾರ್ ಎದ್ದು ನಿಂತು, ಅಭಿಮಾನಿ ದೇವರುಗಳೇ.... ಶಾಂತರಾಗಿ ಎಂದರು. ಆ ನಂತರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

5. ನಟರಾಗಿ ಗುರುತಿಸಿಕೊಂಡ ರಾಜ ಕುಮಾರ್, ಗಾಯಕರಾಗಿದ್ದು ಕೂಡ ಅವರ ಸಿನಿ ಬದುಕಿನ ಇನ್ನೊಂದು ಮಹತ್ತರ ತಿರುವು. ಅವರು ಪೂರ್ಣ ಪ್ರಮಾಣದಲ್ಲಿ ಗಾಯಕರಾಗಿ ಹಾಡಿದ್ದು ‘ಸಂಪತ್ತಿಗೆ ಸವಾಲ್’ ಚಿತ್ರದ ಎಮ್ಮೆ ನಿನಗೆ ಸಾಟಿ ಇಲ್ಲ.. ಹಾಡು. ಅಲ್ಲಿ ತನಕ ಅವರೊಳಗಿನ ಗಾಯಕ ಎಲೆಮರೆಯ ಕಾಯಿ ಅಂತೆಯೇ ಇದ್ದ. ಸಂಪತ್ತಿಗೆ ಸವಾಲ್ ಚಿತ್ರದ ಎಮ್ಮೆ... ಹಾಡಿನ ಮೂಲಕ ಅವರು ಗಾಯಕರಾಗಿಯೂ ಹೊರ ಹೊಮ್ಮಿದ್ದು ವಿಶೇಷ. ಆ ಸಂದರ್ಭವೂ ತುಂಬಾ ಆಕಸ್ಮಿಕ. ಹೆಸರಾಂತ ಗಾಯಕ ಪಿ.ಬಿ. ಶ್ರೀನಿವಾಸ್ ಆ ಹಾಡು ಹಾಡಬೇಕಿತ್ತು.

ಆ ದಿನ ಸ್ಟುಡಿಯೋ ಕೂಡ ಫಿಕ್ಸ್ ಆಗಿತ್ತು. ಆದರೆ ಪಿಬಿಎಸ್ ಬರಲಿಲ್ಲ. ಸ್ಟುಡಿಯೋ ಕ್ಯಾನ್ಸಲ್ ಮಾಡುವುದಕ್ಕೆ ಆಗಲ್ಲ ಅಂತ ಜಿ.ಕೆ. ವೆಂಕಟೇಶ್ ಅವರು ನೀನೆ ಹಾಡಯ್ಯ ಅಂತ ರಾಜ ಕುಮಾರ್ ಅವರಿಗೆ ಒತ್ತಾಯಿಸಿದರು. ಅವರು ಹಾಡೇ ಬಿಟ್ಟರು. ಅಲ್ಲಿಂದ ಪೂರ್ಣ ಪ್ರಮಾಣದ ಗಾಯಕರಾದ ರಾಜ ಕುಮಾರ್, ನಾದಮಯ... ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗೆ ಪುರಸ್ಕೃತರಾದರು.

6. ಗೋಕಾಕ್ ಚಳವಳಿಯ ಪ್ರವೇಶ ರಾಜ ಕುಮಾರ್ ಬದುಕಿನ ಮತ್ತೊಂದು ಮೈಲುಗಲ್ಲು. ಹೋರಾಟದಿಂದ ಗೋಕಾಕ್ ವರದಿ ಅನುಷ್ಟಾನಕ್ಕೆ ಬರಲಿಲ್ಲ. ಕೋರ್ಟ್‌ನಲ್ಲಿ ಅದು ಬಿದ್ದು ಹೋಗಿದ್ದು ಒಂದೆಡೆಯಾದರೆ, ರಾಜ ಕುಮಾರ್ ಪ್ರವೇಶದಿಂದ ಗೋಕಾಕ್ ಚಳವಳಿಯ ಸ್ವರೂಪ ಬದಲಾಯಿತು. ಅವರ ಊರೂರು ಪ್ರವಾಸ ಕನ್ನಡದ ಅಲೆ ಎಬ್ಬಿಸಿತು.

ನಟಸಾರ್ವಭೌಮನ ಅಪರೂಪದ ಫೋಟೋಗಳಿವು

ಇಡೀ ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗುವಂತಾಯಿತು. ಹಳ್ಳಿಯ ಜನರನ್ನು ರಾಜ ಕುಮಾರ್ ಅವರು ಹತ್ತಿರದಿಂದ ಕಂಡು, ಅವರ ಪ್ರೀತಿ ಕಾಣುವಂತಾಯಿತು. ರಾಜ ಕುಮಾರ್ ಅವರ ಮಾನವೀಯ ಮನಸ್ಸು ಅನಾವರಣಕ್ಕೂ ಕಾರಣವಾಯಿತು. ಅಲ್ಲಿಂದಲೇ ಪ್ರವಾಹ ಪೀಡಿತರ ಪರವಾಗಿ ಪ್ರವಾಸ ಮಾಡಿ, ದೇಣಿಗೆ ಸಂಗ್ರಹಿಸಿ, ಸರ್ಕಾರಕ್ಕೆ ನೀಡುವವೆರೆಗೂ ಅವರನ್ನು ನೆಲ, ಜಲ ಪರವಾದ ಹೋರಾಟಗಾರರನ್ನಾಗಿ ಮಾಡಲು ಆ ಚಳವಳಿ ನಾಂದಿ ಹಾಡಿತು. ಈಗಲೂ ಗೋಕಾಕ್ ಚಳುವಳಿ ಎಂದರೆ ತಕ್ಷಣ ನೆನಪಾಗುವುದು ಡಾ. ರಾಜ್ ಕುಮಾರ್ ಅವರ ಹೆಸರು. 

click me!
Last Updated Apr 24, 2019, 3:57 PM IST
click me!