ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು!

By Suvarna NewsFirst Published Feb 18, 2021, 4:47 PM IST
Highlights

ಫೆ.14ಕ್ಕೆ  ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಸಿನಿಮಾ ತೆರೆಗೆ ಬರುತ್ತಿದೆ. ಗಂಗಾಧರ್ ನಿರ್ಮಾಣದ ಈ ಚಿತ್ರ ನಿರೀಕ್ಷೆಗೂ ಮೀರಿ ಅದ್ದೂರಿಯಾಗಿ ಪ್ರೇಕ್ಷಕರ ಮುಂದೆ ಬರುವ ಸಂಭ್ರಮದಲ್ಲಿ ನಿರ್ದೇಶಕ ನಂದಕಿಶೋರ್ ತಮ್ಮ ಚಿತ್ರವನ್ನು ನೋಡಲು ಕೊಟ್ಟ 10 ಕಾರಣಗಳು ಇಲ್ಲಿವೆ.
 

1. ಒಂದು ದೊಡ್ಡ ಸಿನಿಮಾ ಗೆದ್ದರೆ ಮತ್ತೊಂದಿಷ್ಟು ಸಿನಿಮಾಗಳು ಚಿತ್ರಮಂದಿರಗಳಿಗೆ ಬರುತ್ತವೆ. ಚಿತ್ರರಂಗ ಎಂದಿನಂತೆ ಚೇತರಿಸಿಕೊಳ್ಳುತ್ತದೆ. ಸಿನಿಮಾ ಸಂಭ್ರಮ ಎಂದಿನಂತೆ ಎಲ್ಲ ಕಡೆ ಮನೆ ಮಾಡುತ್ತದೆ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಜಾತ್ರೆ ನೋಡಬಹುದು. ಈಗಿನ ಸಂಕಷ್ಟದಲ್ಲಿ ಕನ್ನಡ ಚಿತ್ರವನ್ನು ನೋಡುವುದು ತುಂಬಾ ಅಗತ್ಯ.

2. ಹಾಗಂತ ಹೋಗ್ಲಿ ಪಾಪ ಎಂಬ ಕನಿಕರದಿಂದ ನೋಡಬೇಕಾದ ಸಿನಿಮಾ ನಮ್ಮದಲ್ಲ. ತುಂಬಾ ಶ್ರದ್ಧೆಯಿಂದ ಮೂರುವರೆ ವರ್ಷ ಸಮಯ ತೆಗೆದುಕೊಂಡು ಪ್ರೀತಿಯಿಂದ ಮಾಡಿರುವ ಸಿನಿಮಾ ಇದು. ಚಿತ್ರ ನೋಡಿದ್ದಕ್ಕೂ ಪ್ರೇಕ್ಷಕರಿಗೆ ಸಾರ್ಥಕ ಮನೋಭಾವನೆ ಮೂಡಿಸುತ್ತದೆ. ಆ ಮಟ್ಟಿಗೆ ಚಿತ್ರ ಆಪ್ತವಾಗಿದೆ.

3. ಚಿತ್ರದ ಹಾಡು ಹಾಗೂ ಟೀಸರ್ ಮತ್ತು ಟ್ರೇಲರ್ ನೋಡಿ ಬಹುತೇಕರು ಇದು ಕೇವಲ ಮಾಸ್ ಪ್ರೇಕ್ಷಕರ ಸಿನಿಮಾ ಎನ್ನುತ್ತಿದ್ದಾರೆ. ಆ್ಯಕ್ಷನ್, ಡೈಲಾಗ್‌ಗಳ ಜತೆಗೆ ಒಂದು ಕ್ಷಣ ಕಣ್ಣುಗಳು ತೇವಗೊಳ್ಳುವಂತಹ ಎಮೋಷನಲ್ ಕತೆ ಈ ಚಿತ್ರದಲ್ಲಿದೆ. ಹೀಗಾಗಿ ಇದು ಎಮೋಷನಲ್ ‘ಪೊಗರು’ ಎನ್ನಬಹುದು.

ಪೊಗರು ಅಂತ ಗೂಗಲ್ ಮಾಡಿದ್ರೆ ಮೊದಲು ಬರೋದು ಈ 5 ಪ್ರಶ್ನೆ!

4. ಒಬ್ಬ ನಟ ಮನಸ್ಸು ಮಾಡಿದರೆ ಎಂಥ ಚಿತ್ರ ಮಾಡಬಹುದು, ಯಾವ ರೀತಿ ಆ ಚಿತ್ರಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಬಹುದು ಎಂಬುದಕ್ಕೆ ‘ಪೊಗರು’ ಸಾಕ್ಷಿ. ದೇಹ ತೂಕ ಇಳಿಸಿಕೊಂಡರು. ಇದ್ದಕ್ಕಿದಂತೆ ಮತ್ತೆ ದೇಹ ತೂಕ ಹೆಚ್ಚಿಸಿಕೊಂಡರು. ಹೈಸ್ಕೂಲ್ ಹುಡುಗನಂತೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಶಿಳ್ಳೆ- ಚಪ್ಪಾಳೆಗಳಿಗೆ ಉದ್ದೂದ್ದ ಡೈಲಾಗ್ ಹೇಳುತ್ತಾ ರೈಟ್ ಮಾಡುವ ಹೀರೋ, ಫ್ಯಾಮಿಲಿ ಪ್ರೇಕ್ಷಕರ ಭಾವುಕ ಮನಸ್ಸಿಗೆ ಹತ್ತಿರವಾಗುವುದು ತಾಯಿ ಸೆಂಟಿಮೆಂಟ್ ಮೂಲಕ.

5. ಯಾವ ಚಿತ್ರದಿಂದಲೂ ಪ್ರೇರಣೆಯಿಂದ ಮಾಡಿದ ದೃಶ್ಯಗಳು ಇಲ್ಲಿಲ್ಲ. ಇಡೀ ಚಿತ್ರದ ಪೂರ್ತಿ ಹೊಸ ಹೊಸ ದೃಶ್ಯಗಳ ಮೂಲಕವೇ ಕತೆ ಕಟ್ಟಿಕೊಟ್ಟಿದ್ದೇವೆ. ರೀಮೇಕ್, ರೀಮಿಕ್ಸ್ ಅಂತೂ ಅಲ್ಲವೇ ಅಲ್ಲ. ಪಕ್ಕಾ ನಮ್ಮತನದ ಸ್ವಮೇಕ್ ಸಿನಿಮಾ. ನಾನು ರೀಮೇಕ್ ಮಾಡಿಯೂ ಗೆದ್ದಿರುವೆ, ಸ್ವಮೇಕ್ ಚಿತ್ರದಲ್ಲೂ ಯಶಸ್ಸು ಕಂಡಿದ್ದೇನೆ. ‘ಪೊಗರು’ ನೋಡಿದರೆ ಒಂದು ಕನ್ನಡತದ ಸಿನಿಮಾ ಗೆಲ್ಲಿಸಿದ ಕೀರ್ತಿ ಪ್ರೇಕ್ಷಕರಿಗೆ ಸಲ್ಲುತ್ತದೆ.

"

6. ಒಬ್ಬ ರೈತ ಕಷ್ಟ ಮತ್ತು ಪ್ರೀತಿಯಿಂದ ಕೂಡಿದ ಶ್ರಮದಿಂದ ಬಿತ್ತನೆ ಹಾಕಿ ಬೆಳೆಗಾಗಿ ಕಾಯುತ್ತಾನೆ. ಬೆಳೆ ಕೈಗೆ ಬರಬೇಕು ಎಂದರೆ ಮೊದಲು ಮಳೆ ಸುರಿಯಬೇಕು. ಒಬ್ಬ ನಿರ್ದೇಶಕ ಕೂಡ ಈಗ ರೈತನಂತೆಯೇ. ಸಿನಿಮಾ ರೂಪದಲ್ಲಿ ಬಿತ್ತನೆ ಮಾಡಿದ್ದೇವೆ. ಪ್ರೇಕ್ಷಕರ ರೂಪದಲ್ಲಿ ಮಳೆ ಬರಬೇಕಿದೆ. ಗಳಿಕೆಯೇ ಚಿತ್ರದ ಬೆಳೆ. ಅಂಥ ಬೆಳೆಯನ್ನು ಪ್ರೇಕ್ಷಕರು ಕೊಡುತ್ತಾರೆಂಬ ನಂಬಿಕೆ ಇದೆ.

ಇಂಟರ್‌ನ್ಯಾಷನಲ್ ಬಾಡಿ ಬಿಲ್ಡರ್‌ಗಳನ್ನೇ ಪೊಗರು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣ ಬಿಚ್ಚಿಟ ಧ್ರುವ! 

7. ನಾನು ಈ ಸಿನಿಮಾ ನಿರ್ದೇಶನ ಮಾಡುವ ಮುನ್ನ ತಮಿಳಿನ ‘ವಿಐಪಿ’ ರೀಮೇಕ್ ಮಾಡಿದ್ದೆ. ಆ ಸಿನಿಮಾ ಬಂದಿದ್ದೇ ಎಷ್ಟೋ ಜನಕ್ಕೆ ಗೊತ್ತಿಲ್ಲ. ಸೋತ ನಿರ್ದೇಶಕನಿಗೆ ಗೆದ್ದ ಹೀರೋ ಕಾಲ್ ಶೀಟ್ ಕೊಡುತ್ತಾರೆ, ನಿರ್ಮಾಪಕರು ನಾನು ಇದ್ದೇನೆ ಎನ್ನುತ್ತಾರೆ ಎಂದರೆ ಈ ಕತೆಯಲ್ಲಿ ‘ಮ್ ಇದೆ ಎಂದರ್ಥ. ಒಂದು ಒಳ್ಳೆಯ ಕತೆಯನ್ನು ನೋಡಲು ಸಿನಿಮಾಗೆ ಬರಬೇಕು.

8. ಒಬ್ಬ ಹೀರೋ ಮೂರುವರೆ ವರ್ಷ ನಿರ್ದೇಶಕನ ಜತೆ ಪ್ರಯಾಣ ಮಾಡುತ್ತಾರೆ. ಅದು ಒಂದು ಚಿತ್ರಕ್ಕಾಗಿ ಎಂಬುದೇ ಈ ಚಿತ್ರದ ಪ್ಲಸ್ ಪಾಯಿಂಟ್. ಧ್ರುವ ಸರ್ಜಾ ಮನಸ್ಸು ಮಾಡಿದ್ದರೆ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸಬಹುದಿತ್ತು. ಹಾಗೆ ಮಾಡದೆ ಪ್ರಾಮಾಣಿಕವಾಗಿ ಒಂದು ಚಿತ್ರಕ್ಕಾಗಿ ದುಡಿದಿದ್ದಾರೆ.

9. ಸಿನಿಮಾ ನೋಡಿ ಹೊರ ಬಂದ ಮೇಲೆ ಪ್ರೇಕ್ಷಕರಿಗೆ ಅವರವರ ತಾಯಿ ನೆನಪಾಗುತ್ತಾರೆ. ಮಹಿಳೆಯರು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ. ಮಾಸ್ ಸಿನಿಮಾ ಅಂಥ ಬಂದವರು ‘ಅಬ್ಬಾ ಎಂಥ ಕತೆ ಹೇಳಿದ್ದಾರೆ, ಎಂಥ ಸಿನಿಮಾ ಮಾಡಿದ್ದಾರೆ’ ಎನ್ನುವ ಮೆಚ್ಚುಗೆ ಮಾತುಗಳಂತೂ ಕೇಳಿ ಬರುತ್ತದೆ.

ಕತ್ತು ಕತ್ತರಿಸೋಕೂ ರೆಡಿ, ಆದರೆ ಗತ್ ಬಿಡೋಕೆ ಮಾತ್ರ ಪೊಗರು ಶಿವ ರೆಡಿ ಇಲ್ಲ! 

10. ಸಿನಿಮಾ ತಡವಾಗಿ ಬರುತ್ತಿದೆ ಎಂದರೆ ಕತೆ ಔಟ್‌ಡೇಟ್ ಆಗಿಲ್ಲ. ಅದ್ದೂರಿ ಮೇಕಿಂಗ್ ಇದೆ. ತಾಂತ್ರಿಕತೆಯ ವಿಚಾರದಲ್ಲಿ ಬೇರೆ ಯಾವ ‘ಾಷೆಗಳಿಗೂ ಕಡಿಮೆ ಇಲ್ಲದಂತೆ ಮಾಡಿದ್ದೇವೆ. ಫುಲ್‌ಮಿಲ್ಸ್ ತಿಂದಷ್ಟೇ ಖುಷಿ ಕೊಡುವ ಸಿನಿಮಾ ಇದು.

ಧ್ರುವ ಸರ್ಜಾ ಜತೆ ಮತ್ತೆರಡು ಚಿತ್ರ
ನಿರ್ದೇಶಕ ನಂದ ಕಿಶೋರ್ ಧ್ರುವ ಸರ್ಜಾ ಅವರ ಜತೆಗೆ ಮತ್ತೆರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದಾರೆ. ಈ ಪೈಕಿ ಈಗಾಗಲೇ ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ‘ದುಬಾರಿ’ ಸಿನಿಮಾ ಸೆಟ್ಟೇರಿದೆ. ಮಾರ್ಚ್ 1ರಿಂದ ಈ ಚಿತ್ರಕ್ಕೂ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾ ಮುಗಿದ ಕೂಡಲೇ ಧ್ರುರುವ ಸರ್ಜಾ, ರಾಘವೇಂದ್ರ ಹೆಗಡೆ ನಿರ್ದೇಶನ- ನಿರ್ಮಾಣದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಂತರ ಮತ್ತೆ ನಂದ ಕಿಶೋರ್ ಹಾಗೂ ಧ್ರುವ ಸರ್ಜಾ ಜತೆಯಾಗಲಿದ್ದು, ಈ ಚಿತ್ರವನ್ನು ಗಂಗಾಧರ್ ಅವರೇ ನಿರ್ಮಿಸಲಿದ್ದಾರೆ ಎಂಬುದು ನಿರ್ದೇಶಕ ನಂದ ಕಿಶೋರ್ ಕೊಟ್ಟ ಮಾಹಿತಿ.
 

click me!