
ಇದು ಸೋಶಿಯಲ್ ಮೀಡಿಯಾ ಹಾಗೂ ಕಂಟೆಂಟ್ ಕ್ರಿಯೇಟರ್ಗಳ ಜಮಾನವಾಗಿದ್ದು, ಅನೇಕರು ಇದನ್ನೇ ಪ್ರಮುಖ ವೃತ್ತಿಯಾಗಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಯಾರ ಮೇಲಾಧಿಕಾರಿಗಳ ಆದೇಶಗಳಿಲ್ಲದ ಈ ಕೆಲಸದ ಮೂಲಕ ತಮಗೇ ತಾವೇ ಬಾಸ್ ಆಗ್ಬೇಕು ಅಂದುಕೊಳ್ಳುವ ಬಹುತೇಕರು ತಾವೊಬ್ಬ ಕಂಟೆಂಟ್ ಕ್ರಿಯೇಟರ್ ಆಗಬೇಕು ಎಂದು ಬಯಸುತ್ತಿದ್ದಾರೆ. ಮನೆಯಲ್ಲೇ ಕುಳಿತಿರುವುದಕ್ಕಿಂತ ಅಥವಾ ದಿನವೂ ಮಾಡಿದ ಕೆಲಸವನ್ನೇ ಮಾಡುತ್ತಾ ಹೋದ ಕಚೇರಿಗೆ ಹೋಗುವುದಕ್ಕಿಂತ ಯಾವುದಾದರು ಒಂದು ಸದಾ ಹೊಸತನವಿರುವ ಕೆಲಸಕ್ಕೆ ಮಾಡಬೇಕು ಎಂದು ಅನೇಕರು ಆಸೆ ಪಡುತ್ತಿದ್ದು, ಈ ಕಂಟೆಂಟ್ ಕ್ರಿಯೇಟರ್ ಅಥವಾ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗುವ ಕೆಲಸ ಅನೇಕರನ್ನು ಆಕರ್ಷಿಸುತ್ತಿದೆ. ಆದರೆ ಈ ಕೆಲಸ 2 ಕೋಟಿ ವೇತನವಿರುವ ಗೂಗಲ್ನಂತಹ ಪ್ರತಿಷ್ಠಿತ ಕಂಪನಿಯ ಉದ್ಯೋಗವಿರುವ ಟೆಕ್ಕಿಗಳನ್ನು ಉದ್ಯೋಗ ಬಿಡುವಂತೆ ಮಾಡುತ್ತದೆ ಎಂದರೆ ಈ ಸೋಶಿಯಲ್ ಮೀಡಿಯಾ ಕ್ರೇಜ್ ಹೇಗಿದೆ ಎಂಬುದನ್ನು ನೀವೆ ಅರ್ಥ ಮಾಡಿಕೊಳ್ಳಬಹುದು.
ಹೌದು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗುವುದಕ್ಕಾಗಿ 35 ವರ್ಷದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಗೂಗಲ್ ಕಂಪನಿಯಲ್ಲಿದ್ದ 2 ಕೋಟಿ ವೇತನದ ಕೆಲಸವನ್ನೇ ತೊರೆದಿದ್ದಾಗಿ ಹೇಳಿಕೊಂಡಿದ್ದು, ಇದು ಅನೇಕರನ್ನು ಅಚ್ಚರಿಗೀಡು ಮಾಡಿದೆ. ಉದ್ಯೋಗಿಗಳಿಗೆ ಅತ್ಯುತ್ತಮ ವಿಶ್ವ ಮಟ್ಟದ ಸವಲತ್ತುಗಳನ್ನು ಒದಗಿಸುವ ಗೂಗಲ್ ಕಂಪನಿಯಲ್ಲಿ ಕೆಲಸ ಸಿಗೋದೆ ಮಹಾನ್ ಸಾಧನೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಅಲ್ಲದೇ ಗೂಗಲ್ನಲ್ಲಿ ಕೆಲಸ ಪಡೆಯುವುದಕ್ಕೋಸ್ಕರ ಸಾಕಷ್ಟು ಶ್ರಮ ಪಡುತ್ತಾರೆ. ಆದರೆ ಈ ಯುವತಿ ಮಾತ್ರ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗುವುದಕ್ಕೋಸ್ಕರ ಇಂತಹ ಭಾರಿ ವೇತನದ ಕೆಲಸವನ್ನೇ ಬಿಟ್ಟಿದ್ದಾರೆ.
ಅಂದಹಾಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗುವುದಕ್ಕೋಸ್ಕರ ಕೆಲಸ ಬಿಟ್ಟ ಯುವತಿಯ ಹೆಸರು ಶ್ರೀಗೀತಾ ಶ್ರೀನಿವಾಸ್, ಬೆಂಗಳೂರು ಮೂಲದ ಈ ಯುವತಿ ಪ್ರಧಾನ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 2025ರ ಡಿಸೆಂಬರ್ನಲ್ಲಿ ಅವರು ಈ ಕೆಲಸವನ್ನು ತೊರೆಯುವ ಮೂಲಕ ಗೂಗಲ್ ಜೊತೆಗಿನ 10 ವರ್ಷಗಳ ಬಾಂಧವ್ಯಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಗೂಗಲ್ನಲ್ಲಿ ಉದ್ಯೋಗದಲ್ಲಿದ್ದ ಸಮಯದಲ್ಲಿ ಅವರು ಹೈದರಾಬಾದ್ಮ ಡಬ್ಲಿನ್ ಐರ್ಲೆಂಡ್ , ಮೊದಲಾದ ಕಡೆ ಕೆಲಸ ಮಾಡಿದ್ದು, ಅಲ್ಲಿ ಗೂಗಲ್ನ ಪ್ರಮುಖ ಯುರೋಪಿಯನ್ ಫ್ಯಾಷನ್ ಕ್ಲೈಂಟ್ಗಳಲ್ಲಿ ಒಂದನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ: ವೀಡಿಯೋ ವೈರಲ್
ತಾವು ಗೂಗಲ್ ಕೆಲಸ ಬಿಡುವುದನ್ನು ಕುಟುಂಬ ಹಾಗೂ ಸ್ನೇಹಿತರಿಗೆ ತಿಳಿಸುವುದಕ್ಕಾಗಿ ಅವರು ಮಾಡಿದ ವಿಡಿಯೋದಲ್ಲಿ ತನಗೆ ಇನ್ನೂ ಎಲ್ಲವೂ ಅರ್ಥವಾಗಿಲ್ಲ, ಹಾಗೂ ತನ್ನ ವೇತನದ ಚೆಕ್ ಎಲ್ಲಿಂದ ಬರುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದು ಅವರು ಹೇಳಿಕೊಂಡಿದ್ದಾಳೆ. ಈ ವೀಡಿಯೋ ಅವರಿಗಿದ್ದ 900 ಫಾಲೋವರ್ಸ್ಗಳ ಸಂಖ್ಯೆಯನ್ನು 3000ಕ್ಕೆ ಏರಿಕೆ ಮಾಡಿದೆ. ಈ ನಿರ್ಧಾರ ರಾತ್ರೋರಾತ್ರಿ ಆಗಿದ್ದಲ್ಲ, ನಿರಂತರ ಚಿಂತನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ನನಗೆ ಹಣಕಾಸಿನ ಭದ್ರತೆ ಮಾತ್ರ ಸಾಕಾಗುವುದಿಲ್ಲ, ಅದರಾಚೆಗಿನ ವಿಸ್ತಾರವಾದ ಬೆಳವಣಿಗೆ ಬಯಸುತ್ತಿರುವೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪ ಇಲ್ಲದ ಕಂದನಿಗೆ ಅಮ್ಮನ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ
ಕಂಟೆಂಟ್ ಕ್ರಿಯೇಷನ್ ಆಗುವುದಕ್ಕೆ ಹಠಾತ್ ನಿರ್ಧಾರ ತೆಗೆದುಕೊಂಡಿಲ್ಲ, ಸುಮಾರು ಶ್ರೀಗೀತಾ ಸುಮಾರು ಐದು ವರ್ಷಗಳಿಂದ ತನ್ನ ಕಾರ್ಪೊರೇಟ್ ಪಾತ್ರದ ಜೊತೆಗೆ ಪ್ರಯಾಣ ಮತ್ತು ಜೀವನಶೈಲಿಯ ಮೇಲೆ ಕಂಟೆಂಟ್ ರೆಡಿ ಮಾಡುತ್ತಾ ತಮಗೊಂದು ವೇದಿಕೆ ಸಿದ್ಧಪಡಿಸಿಕೊಂಡಿದ್ದರು. ನಂತರ ಐರ್ಲೆಂಡ್ನ ವೈಲ್ಡ್ ಅಟ್ಲಾಂಟಿಕ್ ವೇಯಲ್ಲಿ ಮಾಡಿದ ಪ್ರವಾಸವೊಂದು ತನ್ನ ಈ ಮಹತ್ವಾಕಾಂಕ್ಷೆಗೆ ಮುನ್ನುಡಿ ಬರೆಯಿತು ಎಂದು ಅವರು ಹೇಳಿಕೊಂಡಿದ್ದಾರೆ. ತನ್ನ ಈ ಯೋಚನೆ ನಾನು ಬೆಳೆದು ಬಂದ ರೀತಿಗೆ ಸಂಪೂರ್ಣ ವಿರುದ್ಧವಾಗಿತ್ತು. ಏಕೆಂದರೆ ಭಾರತೀಯ ಮನೆಗಳಲ್ಲಿ, ನೀವು ಯಾವಾಗಲೂ ಕಂಪನಿಯ CEO ಆಗಬೇಕೆಂದು ಹೇಳುತ್ತಾರೆ. ಕುಟುಂಬದ ಪಾಲಿಗೆ ಅದು ಯಶಸ್ಸು ಎಂದು ಅವರು ಹೇಳಿದ್ದಾರೆ. ಶ್ರೀಗೀತಾ ಅವರು ಈಗ ಗೂಗಲ್ನಿಂದ ಹೊರಬಂದ ನಂತರ ಜೀವನವನ್ನು ಪುನರ್ನಿರ್ಮಿಸುವುದು ಹೇಗೆ ಎಂಬ ವಿಚಾರದಲ್ಲಿ ವೀಡಿಯೋ ಮಾಡುತ್ತಿದ್ದಾರೆ.
ಅವರ ವೀಡಿಯೋ ವೈರಲ್ ಆಗಿದ್ದು, ಅನೇಕರು ಅವರಿಗೆ ಶುಭ ಹಾರೈಸಿಸುವ ಜೊತೆಗೆ ಅಚ್ಚರಿ ಆಘಾತ ವ್ಯಕ್ತಪಡಿಸಿದ್ದಾರೆ.