Loksabha Elections 2024: ರಸ್ತೆ ಬದಿ ಕೂತು ಚಹಾ ಸೇವಿಸಿದ ರಾಜವಂಶಸ್ಥ ಯದುವೀರ್

By Govindaraj SFirst Published Mar 15, 2024, 6:03 AM IST
Highlights

ಯದುವೀರ್ ಅವರು ರಾಜವಂಶಸ್ಥರಾದರೂ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಆಗುತ್ತಿದ್ದಂತೆ ಜನ ಸಾಮಾನ್ಯರಂತೆ ಸಾರ್ವಜನಿಕವಾಗಿ ಗುರುವಾರ ಕಾಣಿಸಿಕೊಂಡರು. 

ಮೈಸೂರು (ಮಾ.15): ಯದುವೀರ್ ಅವರು ರಾಜವಂಶಸ್ಥರಾದರೂ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಆಗುತ್ತಿದ್ದಂತೆ ಜನ ಸಾಮಾನ್ಯರಂತೆ ಸಾರ್ವಜನಿಕವಾಗಿ ಗುರುವಾರ ಕಾಣಿಸಿಕೊಂಡರು. ನಗರದ ಖಾಸಗಿ ಹೊಟೇಲ್‌ಗೆ ಪಕ್ಷದ ಮುಖಂಡರ ಜತೆ ಭೇಟಿ ನೀಡಿದ ಅವರು ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತು ಚಹಾ ಸವಿದರು. ರಾಜವಂಶಸ್ಥರಾದ ಯದುವೀರ್ ಅವರು ಈವರೆಗೆ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅಭ್ಯರ್ಥಿಯಾಗಿ ಹೆಸರು ಪ್ರಕಟವಾಗುತ್ತಿದ್ದಂತೆ ನಗರದ ಬಿಜೆಪಿ ಕಚೇರಿಗೆ ಮತ್ತು ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದರು. 

ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಎಸ್.ಎ. ರಾಮದಾಸ್ ಮನೆಗೆ ಭೇಟಿ ನೀಡಿದರು. ಬಳಿಕ ಪಕ್ಷದ ನಾಯಕರ ಜತೆ ತೆರಳಿ ಹೊಟೇಲ್‌ ಹೊರಗೆ ಕುಳಿತು ಚಹಾ ಸವಿದರು. ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ ಕುಮಾರ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಅರುಣ್ ಬೋಗಾದಿ, ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಬಿ.ಎಂ.ರಘು, ಮಹೇಶ್ ಮಡವಾಡಿ, ಮುಖಂಡರಾದ ನಂದೀಶ್‌ ಬೆಳ್ಳಯ್ಯ, ಡಾ. ರವಿ, ಸಮೀರ್ ಇದ್ದರು.

ಮೈಸೂರು ರಾಜವಂಶಸ್ಥ ಯದುವೀರ್‌ ರಾಜಕೀಯ ಪ್ರವೇಶ: ಈ ಹಿಂದೆಯೂ 4 ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಾಜವಂಶಸ್ಥರು

ರಾಜಕೀಯ ಪ್ರವೇಶ: ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಕುತುಹಲ ಕೆರಳಿಸಿದ್ದ ಮೈಸೂರು- ಕೊಡಗು ಲೊಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೊನೆಗೂ ಹೊರಬಿದ್ದಿದ್ದು, ನಿರೀಕ್ಷೆಯಂತೆ ರಾಜವಂಶಸ್ಥ ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಎರಡು ಬಾರಿ ಗೆದ್ದಿರುವ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರ ಬದಲು ಈ ಬಾರಿ ರಾಜವಂಶಸ್ಥರಿಗೆ ಮಣೆ ಹಾಕಲಾಗಿದೆ. ಹಾಗೆ ನೋಡಿದರೆ ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥರು ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಇದೇ ಮೊದಲಲ್ಲ. ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 

ತಲಾ ಒಂದು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಸೋತಿದ್ದರು ಕೂಡ. ಆದರೆ 2009ರ ಪುನರ್ ವಿಂಗಡಣೆ ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣ ಬದಲಾಗಿ ಹೋಗಿದೆ. ಪುನರ್ ವಿಂಗಡಣೆಗೆ ಮೊದಲು ಎಚ್.ಡಿ.ಕೋಟೆ ಹಾಗೂ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. 2009ರಿಂದ ಎಚ್.ಡಿ. ಕೋಟೆಯು ಚಾಮರಾಜನಗರ ಕ್ಷೇತ್ರ, ಕೆ.ಆರ್.ನಗರವು ಪಕ್ಕದ ಮಂಡ್ಯ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಇಡೀ ಕೊಡಗು ಜಿಲ್ಲೆ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬಂದಿದೆ. ಇದಲ್ಲದೇ ಮೈಸೂರು ತಾಲೂಕಿನ ಭಾಗಶಃ ಪ್ರದೇಶಗಳು ವರುಣ ವಿಧಾನಸಭಾ ಕ್ಷೇತ್ರವಾಗಿ ಚಾಮರಾಜನಗರ ಕ್ಷೇತ್ರಕ್ಕೆ ಸೇರಿವೆ.

Loksabha Elections 2024: ಬಿಜೆಪಿಯಲ್ಲಿ ಬೇಗುದಿ ತಣ್ಣಗೆ, ಸಂಸದ ಸಂಗಣ್ಣ ಕರಡಿ ನಿರಾಳ!

ಇದರಿಂದಾಗಿ ಈಗ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿವೆ. 1984ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2,47,754 ಮತಗಳನ್ನು ಪಡೆದು ಗೆದ್ದಿದ್ದರು. ಜನತಾಪಕ್ಷದ ಕೆ.ಪಿ. ಶಾಂತಮೂರ್ತಿ- 1,83,144 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

click me!