
ಕೊಪ್ಪಳ (ಮಾ.15): ಈ ಬಾರಿ ನನಗೆ ಯಾಕೆ ಟಿಕೆಟ್ ತಪ್ಪಿದೆ ಎಂದು ಗೊತ್ತಿಲ್ಲ. ಪಕ್ಷದ ವರಿಷ್ಠರು ಈವರೆಗೂ ನನ್ನ ಜೊತೆಗೆ ಮಾತನಾಡಿಲ್ಲ. ರೈಲ್ವೇ ಯೋಜನೆಯ ಕೆಲ ಕಾರ್ಯಕ್ರಮಗಳು ಇದ್ದು, ಅವುಗಳಲ್ಲಿ ಎರಡು ದಿನ ಭಾಗವಹಿಸುತ್ತೇನೆ. ಅದಾದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಟಿಕೆಟ್ ತಪ್ಪಿದ್ದಕ್ಕೆ ನನಗೇನೂ ನೋವಿಲ್ಲ, ಪಕ್ಷದ ವರಿಷ್ಠರು ಯಾಕೆ ಟಿಕೆಟ್ ನೀಡಿಲ್ಲ ಎಂಬುದು ಗೊತ್ತಿಲ್ಲ. ಪಕ್ಷ ನನಗೆ ಈವರೆಗೂ ಕೊಡಬೇಕಾಗಿರುವುದನ್ನು ಕೊಟ್ಟಿದೆ.
ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಮತ್ತು ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸುತ್ತೇನೆ ಎಂದರು. ಪಕ್ಷದ ವರಿಷ್ಠರು ಸಹ ನನ್ನೊಂದಿಗೆ ಈವರೆಗೂ ಮಾತನಾಡಿಲ್ಲ. ಬೇರೆ ಪಕ್ಷದವರು ನನ್ನ ಮೇಲಿನ ಪ್ರೀತಿಯಿಂದ ಮಾತನಾಡಿದ್ದಾರೆ. ಟಿಕೆಟ್ ತಪ್ಪಬಾರದಿತ್ತು ಎಂದಿದ್ದಾರೆ. ಹಾಗಂತ ಅವರು ಪಕ್ಷಕ್ಕೆ ಕರೆದಿದ್ದಾರೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ನಡೆದುಕೊಂಡ ರೀತಿಯಿಂದ ಟಿಕೆಟ್ ತಪ್ಪಿದೆ. 2018ರಲ್ಲಿ ಪುತ್ರನಿಗೆ ಟಿಕೆಟ್ಗೆ ಪಟ್ಟು ಹಿಡಿದಿದ್ದು ಮತ್ತು 2023ರಲ್ಲಿ ಸೊಸೆಗೆ ಟಿಕೆಟ್ ಪಡೆದಿದ್ದೇ ಕಾರಣ ಎಂದು ಮಾಧ್ಯಮದಲ್ಲಿ ಹೇಳಲಾಗಿದೆ. ನನಗೂ ಹಾಗೆ ಅನಿಸುತ್ತದೆ. ಆದರೆ, ವಾಸ್ತವವೇ ಬೇರೆ ಇದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದ ಯಾರಿಗೂ ಟಿಕೆಟ್ ಬೇಡ ಎಂದರೂ ಪಕ್ಷದವರು ಒತ್ತಾಯ ಮಾಡಿ ನಮ್ಮ ಸೊಸೆಗೆ ಟಿಕೆಟ್ ನೀಡಿದ್ದಾರೆ. ಹೀಗಿದ್ದಾಗ್ಯೂ ಆರೋಪ ಮಾಡಿದರೆ ಏನು ಮಾಡಲು ಸಾಧ್ಯ? ಎಂದರು.
Loksabha Elections 2024: ಬಿಜೆಪಿಯಲ್ಲಿ ಬೇಗುದಿ ತಣ್ಣಗೆ, ಸಂಸದ ಸಂಗಣ್ಣ ಕರಡಿ ನಿರಾಳ!
ನಾನು ಈಗಲೇ ಮುಂದಿನ ನಿರ್ಧಾರ ಏನೆಂದು ಹೇಳಲ್ಲ, ಹಾಗಂತ ಪಕ್ಷ ತೊರೆಯುವುದಿಲ್ಲ. ಈಗ ನನ್ನ ಕನಸಿನ ಯೋಜನೆಗಳು ಜಾರಿಯಾಗಿದ್ದು, ಅವುಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ನಂತರ ಮುಂದಿನ ತೀರ್ಮಾನದ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇನೆ. ಈಗ ಆಕ್ರೋಶಗೊಂಡಿದ್ದರಿಂದ ಹಾಗೆ ಮಾಡುತ್ತಿದ್ದಾರೆ. ಒಂದೆರಡು ದಿನ ಆಗುತ್ತಿದ್ದಂತೆ ಸಮಾಧಾನವಾಗುತ್ತಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.