ಲೋಕಸಭೆ ಚುನಾವಣೆಗೆ ಬಿಜೆಪಿ ರಾಮಮಂದಿರ ವಿಚಾರ ಬಳಸಿದ್ರೆ ತಪ್ಪಿಲ್ಲ: ಪೇಜಾವರ ಶ್ರೀ

By Govindaraj SFirst Published Mar 15, 2024, 5:23 AM IST
Highlights

ಲೋಕಸಭೆ ಚುನಾವಣೆಗೆ ಶ್ರೀರಾಮಮಂದಿರ ವಿಚಾರವನ್ನು ಬಿಜೆಪಿಯವರು ಬಳಸಿಕೊಂಡರೆ ತಪ್ಪೇನೂ ಇಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಮಂದಿರವನ್ನು ಮಂದಿರವಾಗಿಯೇ ಉಳಿಸುವ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದ್ದಾರೆ.
 

ದಾವಣಗೆರೆ (ಮಾ.15): ಲೋಕಸಭೆ ಚುನಾವಣೆಗೆ ಶ್ರೀರಾಮಮಂದಿರ ವಿಚಾರವನ್ನು ಬಿಜೆಪಿಯವರು ಬಳಸಿಕೊಂಡರೆ ತಪ್ಪೇನೂ ಇಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಮಂದಿರವನ್ನು ಮಂದಿರವಾಗಿಯೇ ಉಳಿಸುವ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದ್ದಾರೆ. ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ಶ್ರೀರಾಮ ಮಂದಿರ ವಿಚಾರದಲ್ಲಿ ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಕೆಲಸ ಮಾಡಿದ್ದಾರೆ. 

ಹಾಗಾಗಿ ಚುನಾವಣೆಗೆ ಮಂದಿರ ವಿಚಾರ ಚುನಾವಣೆ ವೇಳೆ ಹೇಳಿಕೊಳ್ಳುವುದರಲ್ಲಿ, ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಮಂದಿರ ನಿರ್ಮಾಣ ಕಾರ್ಯ ಒಂದು ಅವಕಾಶವಾದರೆ ತಪ್ಪೇನೂ ಇಲ್ಲ ಎಂದರು. ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾದ ಉತ್ಸಾಹದಲ್ಲಿ ನಾವ್ಯಾರೂ ಮೈಮರೆಯಬಾರದು. ರಾಮ ಮಂದಿರ ರಾಮ ಮಂದಿರವಾಗಿಯೇ ಉಳಿಯಬೇಕೆಂದರೆ ಹಿಂದುಗಳು ಹಿಂದೂಗಳಾಗಿಯೇ ಉಳಿಯಬೇಕು ಎಂದು ತಿಳಿಸಿದರು. ಹಿಂದುಗಳು ದೇಶದಲ್ಲಿ ಬಹು ಸಂಖ್ಯಾತರಾಗಿರುವಷ್ಟು ಕಾಲವೂ ಶ್ರೀರಾಮ ಮಂದಿರ ಮಂದಿರವಾಗಿಯೇ ಉಳಿಯುತ್ತದೆ. 

ರಾಮ ರಾಜ್ಯ ನಿರ್ಮಾಣವೇ ನಮ್ಮ ಕನಸು: ಪೇಜಾವರ ಶ್ರೀ

ನೆರೆಯ ಅಪಘಾನಿಸ್ತಾನದಲ್ಲಿ ಬುದ್ಧನ ವಿಗ್ರಹ ಆ ದೇಶ ಪರಕೀಯರ ಕೈವಶವಾಗುತ್ತಿದ್ದಂತೆ ಛಿದ್ರವಾಗಿ ಹೋಯಿತು. ಇಂತಹ ಅಪಾಯ ಎಲ್ಲಾ ಕಡೆ ಇದೆ. ಹೀಗಾಗಿ ನಾವೆಲ್ಲರೂ ಸದಾ ಜಾಗೃತರಾಗಿರಬೇಕು. ನಮ್ಮ ಸಂತತಿ ಹಿಂದುಗಳಾಗಿಯೇ ಉಳಿಯಲು ನಾವು ಇವತ್ತಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು. ಹುಂಡಿ ಹಣದಲ್ಲಿ ಹಸ್ತಕ್ಷೇಪ ಬೇಡ: ದೇವಸ್ಥಾನಗಳ ಕಾಣಿಕೆ ಹುಂಡಿಯ ಹಣದ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ಅದರ ಜವಾಬ್ದಾರಿಯನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಬೇಕು. ಬೇರೆ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಅದೇ ರೀತಿ ದೇವಸ್ಥಾನಗಳ ವಿಚಾರದಲ್ಲೂ ಹಸ್ತಕ್ಷೇಪ ಮಾಡಬಾರದು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು. 

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ರಾಜ್ಯದ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಪ್ರತಿಯೊಂದನ್ನೂ ಪರೀಕ್ಷೆ ಮಾಡಿಯೇ ನೀಡಲು ಸಾಧ್ಯವಾಗಲಿಕ್ಕಿಲ್ಲ. ಇದೇ ಮಾತು ಹೋಟೆಲ್‌ ಇನ್ನಿತರೆ ಕಡೆಗಳಲ್ಲಿ ಸಾರ್ವಜನಿಕವಾಗಿ ವಿತರಣೆಯಾಗುವ ಸ್ಥಳಗಳಿಗೂ ಅನ್ವಯಿಸುತ್ತದೆ. ಅವುಗಳಿಗೂ ಮಾರ್ಗಸೂಚಿ ಮಾಡುವುದು ಉತ್ತಮ ಎಂದರು. ಆಂಜನೇಯ ಜನ್ಮಸ್ಥಳ ಅಭಿವೃದ್ಧಿಗೆ ಟ್ರಸ್ಟ್‌ ರಚಿಸಿ: ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದಂತೆಯೇ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿಗೂ ಟ್ರಸ್ಟ್‌ವೊಂದನ್ನು ರಚಿಸಬೇಕು ಎಂದರು.

click me!