VHP, ಬಜರಂಗದಳ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ

Published : Apr 01, 2022, 03:37 PM IST
VHP, ಬಜರಂಗದಳ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ

ಸಾರಾಂಶ

* VHP, ಬಜರಂಗದಳ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ * VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು ಎಂದ ಎಚ್‌ಡಿಕೆ * ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ ಎಂದು ಸ್ಪಷ್ಟನೆ

ಬೆಂಗಳೂರು, (ಏ.01): ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿರುವ ಕುಮಾರಸ್ವಾಮಿ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ” ಎಂದು ಅವರು ಕಿಡಿ ಕಾರಿದ್ದಾರೆ.

ಧರ್ಮೋ ರಕ್ಷತಿ ರಕ್ಷಿತಃʼ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ʼಒಡೆದ ಮಡಿಕೆʼ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು” ಎಂದು ಅವರು ಹೇಳಿದ್ದಾರೆ.

'ಕುಮಾರಸ್ವಾಮಿಯವರಿಗೆ ಒಂದೆರಡಲ್ಲ, ಮೂರು-ಮೂರು ಕಡೆ ಗಂಡಸ್ತನ ತೋರಿಸುವುದು ಗೊತ್ತು'

“ವಿಶ್ವ ಹಿಂದೂ ಪರಿಷತ್‌, ʼವಿಶ್ವ ವಿನಾಶಕ ಪರಿಷತ್‌ʼ ಅಥವಾ ʼಧರ್ಮ ವಿನಾಶಕ ಪರಿಷತ್‌ʼ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ?” ಎಂದು ಎಂದು ಅವರು ಪ್ರಶ್ನಿಸಿದ್ದಾರೆ.

“ಕೊರೋನಾ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ʼಶವ ಸಂಸ್ಕಾರದಲ್ಲೂ ಕೀರ್ತಿʼಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ? ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಶ್ರೀ ಸುರೇಶ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ” ಎಂದು ಅವರು ಹೇಳಿದ್ದಾರೆ.

Halal Row ಗಂಡಸ್ತನ ಹೇಳಿಕೆಗೆ ಎಚ್‌ಡಿ ಕುಮಾರಸ್ವಾಮಿ ವಿಷಾದ!

“ಅಂದು ಕೇಂದ್ರ-ರಾಜ್ಯ ಸರಕಾರಗಳ ವೈಫಲ್ಯಗಳು ಯಾವ ಮಟ್ಟದಲ್ಲಿದ್ದವು? ಬೆಂಗಳೂರಿನಲ್ಲಿ ಯಾರೆಲ್ಲ ಶವ ಸಂಸ್ಕಾರ ಮಾಡಿದರು ಎನ್ನುವುದನ್ನು ನಾವೂ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಆಗ ಇವರೆಲ್ಲ ಎಲ್ಲಿದ್ದರೋ ನನಗಂತೂ ಗೊತ್ತಿಲ್ಲ. ಡಿಜೆ ಹಳ್ಳಿ ಗಲಭೆ ಕಾರಣದ ಬಗ್ಗೆ ನೀವು ಏಕೆ ದನಿಯೆತ್ತುವುದಿಲ್ಲ? ಠಾಣೆಗೆ ಬೆಂಕಿ ಬಿದ್ದಾಗ ಅದರಲ್ಲಿ ಚಳಿ ಕಾಯಿಸಿಕೊಂಡವರು ನೀವು. ಧರ್ಮದ ಪಾಠ ಮಾಡುವ ನೀವು, ಧರ್ಮಗುರುಗಳಿಗೆ ಗೌರವ ಕೊಡಬೇಕು ಎನ್ನುವುದನ್ನೂ ತಿಳಿದಿರಬೇಕಲ್ಲವೇ? ನೀವು ಬಾಲಂಗೋಚಿ ಆಗಿರುವ ಸರಕಾರದ ಬೇಹುಗಾರಿಕೆ ವಿಭಾಗ ನಿದ್ದೆ ಮಾಡುತ್ತಿತ್ತು, ಏಕೆ?” ಎಂದು ಅವರು ಕೇಳಿದ್ದಾರೆ.

“ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144‌ ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಾಬ್‌ ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ ʼಅಶಾಂತಿಯ ಅಶ್ವಮೇಧʼ ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ” ಎಂದು ಅವರು ಹೇಳಿದ್ದಾರೆ.

“ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ʼಭಾವನೆಗಳ ದಾಳಗಳುʼ ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. “ಹಿಂದೂ ಎಂದರೆ ಎಲ್ಲರೂ ಒಂದು” ಎನ್ನುವ ಆದರ್ಶ & ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌