ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

By Kannadaprabha NewsFirst Published Sep 22, 2023, 9:12 AM IST
Highlights

2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ನಾವು ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. 

ಹುಬ್ಬಳ್ಳಿ (ಸೆ.22): 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ನಾವು ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. ಗುರುವಾರ ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಚಂದ್ರನ ಮೇಲೆಯೇ ರಾಷ್ಟ್ರಧ್ವಜ ಹಾರಿಸಿ ಬಂದಿದ್ದೇವೆ. ಈ ಮೈದಾನದಲ್ಲಿ ವರ್ಷದೊಳಗೆ ಇಡೀ ಹುಬ್ಬಳ್ಳಿ ಜನರಿಗೆ ಕಾಣುವಂತಹ ಬೃಹತ್‌ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಇದಕ್ಕೆ ಯಾರಪ್ಪನ ಒಪ್ಪಿಗೆ ಬೇಕಿಲ್ಲ. ಈ ಮೈದಾನ ಯಾರಪ್ಪನ ಆಸ್ತಿ ಅಲ್ಲ. ಇದು ಪಾಲಿಕೆ ಆಸ್ತಿ. ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ. ಗಣೇಶನ ಪ್ರತಿಷ್ಠಾಪನೆಯನ್ನೂ ಮಾಡುತ್ತೇವೆ ಎಂದರು.

ನಮ್ಮನ್ನ ಕೆಣಕಿದರೆ ಮಸೀದಿಯಲ್ಲೂ ಗಣೇಶ ಪ್ರತಿಷ್ಠಾಪಿಸುತ್ತೇವೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಹನುಮಾನ್ ಚಾಲೀಸಾ ಪಠಣ: ಅಂಜುಮನ್‌ ಇಸ್ಲಾಂ ಸಂಸ್ಥೆಯವರು ಈ ಗಣೇಶ ವಿಸರ್ಜನೆಯ ಆನಂತರ ಈ ಮೈದಾನದಲ್ಲಿ ಶೋಕಾಚರಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದು ಹೇಗೆ ಮಾಡುತ್ತಾರೆ ನಾವು ನೋಡೋಣ. ಹಾಗೇನಾದರೂ ಅವರು ಶೋಕಾಚರಣೆ ಮಾಡಿದರೆ ಈ ಮೈದಾನದ ತುಂಬೆಲ್ಲ ಗೋಮೂತ್ರ ಸಿಂಪಡಿಸಿ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ, ಯಾರು ತಡೆಯುತ್ತಾರೆ ನೋಡೋಣ ಎಂದು ಗುಡುಗಿದ ಅವರು, ಅಲ್ಲೇ ಹನುಮಾನ ಚಾಲೀಸಾ ಪಠಿಸಿ ತೋರಿಸಿದರು.

ಏಡ್ಸ್‌ ಬರುತ್ತೆ: ಈಚೆಗೆ ಡಿಎಂಕೆ ಮುಖಂಡನೋರ್ವ ಸನಾತನ ಎಂಬುದು ಡೆಂಘೀ, ಮಲೇರಿಯಾ ಇದ್ದಂತೆ ಎಂದು ಹೇಳಿಕೆ ನೀಡಿದ್ದಾನೆ. ಸನಾತನ ಧರ್ಮವನ್ನು ವಿರೋಧಿಸುವ ಎಲ್ಲರಿಗೂ ಏಡ್ಸ್ ಬಂದು ಸಾಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವವರೆಲ್ಲ ದೇಶದ್ರೋಹಿಗಳು. ಮೋದಿ ಈಗ ಪ್ರಧಾನಿಯಾಗಿರುವುದರಿಂದಲೇ ಭಾರತ ಇಂದು ಶಾಂತಿಯುತವಾಗಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಿ ಎಂದರು.

ಬಿಜೆಪಿ ವರಿಷ್ಠರು ಬಿಜೆಪಿಗರಿಗೆ ಸಿಗಲ್ಲ, ಜೆಡಿಎಸ್‌ನವರಿಗೆ ಹೇಗೆ ಸಿಗ್ತಾರೆ: ಕಾಲೆಳೆದ ಕಾಂಗ್ರೆಸ್‌

ಎಲ್ಲ ನಾಟಕ ಗೊತ್ತು: ಇಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ಮಾಡುವಂತೆ ಫೋನ್‌ನಲ್ಲಿ ಹಿಂದಿನಿಂದ ಯಾರು ನಾಟಕವಾಡುತ್ತಿದ್ದಾರೆ ಎಂಬುದು ಗೊತ್ತು. ಕ್ಷೇತ್ರದ ಜನತೆ ಈಗಾಗಲೇ ಒಂದು ಬಾರಿ ನಿಮ್ಮನ್ನು ಮನೆಗೆ ಕಳಿಸಿದ್ದಾರೆ. ಮತ್ತೆ ಮುಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನೋಡಿ ಈ ಬಾರಿಯೂ ನಿಮ್ಮನ್ನ ಜನತೆ 4.5 ಲಕ್ಷ ಮತಗಳ ಅಂತರದಿಂದ ಲಾಗಾ (ಸೋಲು) ಹೊಡೆಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಯತ್ನಾಳ ಪರೋಕ್ಷ ವಾಗ್ದಾಳಿ ನಡೆಸಿದರು.

click me!