ಬಿಜೆಪಿ ಸರ್ಕಾರದಿಂದ ಯಶಸ್ವಿ ಆಡಳಿತ: ಸಚಿವ ಸೋಮಣ್ಣ

By Kannadaprabha NewsFirst Published Mar 27, 2023, 1:58 PM IST
Highlights

ರಾಜ್ಯದ ಜನರ ಆಶಯದಂತೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. 

ಗುಂಡ್ಲುಪೇಟೆ (ಮಾ.27): ರಾಜ್ಯದ ಜನರ ಆಶಯದಂತೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕಳೆದ 4 ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 64ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್‌ ಖಾತೆಗೆ ಸಹಾಯ ಧನ,ಪ್ರೋತ್ಸಾಹ ಧನ ಮತ್ತು ಸೌಲಭ್ಯಸಿಗುತ್ತಿವೆ ಎಂದರು.

ಯಾವುದೇ ಅಭಿವೃದ್ಧಿ ಕಾರ್ಯಗಳು ಜನರ ಸಕ್ರಿಯ ಸಹಭಾಗಿತ್ವ ಮತ್ತು ಸಹಕಾರವಿಲ್ಲದೆ ಪೂರ್ಣವಾಗುವುದಿಲ್ಲ. ಬಲಿಷ್ಟಭಾ ರತ ನಿರ್ಮಾಣದ ಸಂಕಲ್ಪ ತೊಟ್ಟು ದಿನದ 24ಗಂಟೆ ಪ್ರಜಾ ಸೇವಕರಂತೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಜೊತೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಕ್ತಿ ಶಾಲಿ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.

ಮೀಸಲಾತಿ ವಿಚಾರದಲ್ಲಿ ನಾನು ಸ್ವಾಮೀಜಿಗಳಿಗೆ ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ

ಸದೃಢ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್‌ ಭೀಮಾ, ರಾಷ್ಟ್ರೀಯ ಕೃಷಿ ವಿಕಾಸ್‌, ಕೃಷಿ ಸಿಂಚಾಯಿ, ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ, ಉಜ್ವಲ್‌, ನ್ಯಾಷನಲ್‌ ಹೆಲ್ತ್‌ ಮಿಷನ್‌, ಪ್ರಧಾನ ಮಂತ್ರಿ ಅವಾಸ್‌, ಸಮಗ್ರ ಶಿಕ್ಷಾ ಅಭಿಯಾನ, ಅಕ್ಷರ ದಾಸೋಹ, ಗ್ರಾಮೀಣ ಸಡಕ್‌, ಸ್ವಚ್ಛ ಭಾರತ್‌, ಜಲ ಜೀವನ್‌ ಮಿಷನ್‌, ನರೇಗಾ ಯೋಜನೆ, ಡಿಜಿಟಲ್‌ ಇಂಡಿಯಾ, ಪ್ರಧಾನ ಮಂತ್ರಿ ಕೌಸಲ್ಯ ವಿಕಾಸ, ಆದರ್ಶ ಗ್ರಾಮ, ಅಮೃತ ನಗರೋತ್ಥಾನ, ಸ್ಮಾರ್ಚ್‌ ಸಿಟಿ ಮಿಷನ್‌, ಬೇಟಿ ಬಚಾವೋ, ಭೇಟಿ ಪಡಾವೋ, ಮಾತೃ ವಂದನಾ, ಕಿಸಾನ್‌ ಸಮ್ಮಾನ್‌ ನಿಧಿ ಸೇರಿದಂತೆ ಹತ್ತು ಹಲವಾರು ಯೋಜನೆ ಜಾರಿಗೆ ತಂದು ಅನುಷ್ಠಾನಗೊಳಿಸಿದೆ ಎಂದರು.

ಗಡಿ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಕಳೆದ ಡಿ. 13ರಂದು ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ಸುಮಾರು 1099 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ವಿವಿಧ ವಸತಿ ಯೋಜನೆಯಡಿ ಪ್ರಸಕ್ತ ಸಾಲಿಗೆ 4920 ಫಲಾನುಭವಿಗಳ ಆಯ್ಕೆಯ ಗುರಿ ನಿಗಧಿಪಡಿಸಿದ್ದು ಈ ಪೈಕಿ 4663 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗಿದೆ ಎಂದರು. ಪ್ರಗತಿಯಲ್ಲಿದ್ದ 11,667 ಮನೆಗಳ ಪೈಕಿ ಈ ಸಾಲಿನಲ್ಲಿ 11,173 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಸಿಎಂ ಗ್ರಾಮೀಣ ನಿವೇಶನ ಯೋಜನೆಯಡಿ ಜಿಲ್ಲೆಯಲ್ಲಿ 60 ಎಕರೆ ಜಮೀನು ಲಭ್ಯವಿದೆ. 1200 ನಿವೇಶನ ರಹಿತರಿಗೆ ನಿವೇಶನ ಹಂಚಲಾಗುತ್ತಿದೆ ಎಂದರು.

ಗ್ರಾಮ ಒನ್‌ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ 121 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ 2.64 ಲಕ್ಷ ಸೇವೆ ಒದಗಿಸಲಾಗಿದೆ ಎಂದರು. ಸುತ್ತು ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2432 ಸ್ವ ಸಹಾಯ ಸಂಘಗಳಿಗೆ 35.79 ಕೋಟಿ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ಯೋಜನೆಯಡಿ ಇಲ್ಲಿಯವರೆಗೆ 2 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದರು.

ಜಲಜೀವನ್‌ ಮಿಷನ್‌ ಯೋಜನೆಯಡಿ 2.18 ಕೋಟಿ ವೆಚ್ಚದಲ್ಲಿ 929 ಅಂಗನವಾಡಿ ಹಾಗೂ 236 ಶಾಲೆಗಳಿಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಜೆಜೆಎಂನ 1ನೇ ಹಂತದಲ್ಲಿ ಚಾ.ನಗರ 58208, ಗುಂಡ್ಲುಪೇಟೆ 35414, ಕೊಳ್ಳೇಗಾಲ 6676 ಸೇರಿದಂತೆ 1,00,298 ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ಶೇ.99.93ರಷ್ಟುಗುರಿ ಸಾಧಿಸಲಾಗಿದ್ದು 2ನೇ ಹಂತದಲ್ಲಿ 43842 ಗುರಿಗೆ 28774 ನಳ ಸಂಪರ್ಕ ಕಲ್ಪಿಸುವ ಮೂಲಕ ಶೇ.65 ಪ್ರಗತಿ ಸಾಧಿಸಲಾಗಿದೆ ಎಂದರು.

ಕೆರೆಗಳಿಗೆ ನೀರು ತುಂಬಿಸಲು 1494 ಕೋಟಿ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ 1ನೇ ಹಂತದ 745 ಕೋಟಿ ಜೊತೆಗೆ 2ನೇ ಹಂತದಲ್ಲಿ 749ಕೋಟಿ ವೆಚ್ಚದಲ್ಲಿ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಸಚಿವ ಸೋಮಣ್ಣ ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಗ್ರಂಥಾಲಯ ನಿರ್ಮಾಣಕ್ಕೆ 1ಕೋಟಿಯಿಂದ 5ಕೋಟಿಗೆ ಹೆಚ್ಚಿಸಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ 108ಅಡಿ ಪ್ರತಿಮೆ ಲೋಕಾರ್ಪಣೆಯಾಗಿದೆ ಹಾಗೂ ಬೆಳ್ಳಿ ರಥ ನಿರ್ಮಾಣವಾಗಿದೆ ಎಂದರು. 

ಚಾಮರಾಜನಗರ ತಾಲೂಕಿನ ವಿಸಿ ಹೊಸೂರು, ಬಸವನಪುರ, ಅಂಕಶೆಟ್ಪಿಪುರ, ನಾಗವಳ್ಳಿ, ಚಂದಕವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ಡಾ.ರಾಜ್‌ಕುಮಾರ್‌ ರಂಗಮಂದಿರ ಲೋಕಾರ್ಪಣೆ, ಚಾಮರಾಜೇಶ್ವರ ರಥೋತ್ಸವ, ಬಿಳಿಗಿರಿ ರಂಗನಾಥ ಜಾತ್ರೆ, ಮಹದೇಶ್ವರ ಜಾತ್ರಾ ಮಹೋತ್ಸವಗಳಿಗೆ ಚಾಲನೆ ದೊರೆತಿದೆ. ಚಾಮರಾಜನಗರದ ಹೊರ ಭಾಗಕ್ಕೆ ಸ್ಥಳಾಂತರಗೊಂಡಿದ್ದ ಜಿಲ್ಲಾ ಆಸ್ಪತ್ರೆಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ನಗರಕ್ಕೆ ಸ್ಥಳಾಂತರ ಮಾಡಲಾಗಿದೆ. ಚಾಮುಲ್‌, ಎಪಿಎಂಸಿ, ಹಾಪ್‌ಕಾಮ್ಸ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಜಾಗೇರಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ. ಅರಿಶಿನ ಬೆಳೆಗಾರ ರೈತರಿಗೆ ಕನಿಷ್ಠ ಬೆಲೆ ನಿಗಧಿಗೆ ಕ್ರಮವಾಗಿದೆ ಎಂದರು.

ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್‌

ಸರ್ಕಾರದ ಯೋಜನಗಳ ಬಗ್ಗೆ ಸೋಮಣ್ಣ ಹೇಳಿದ್ದು
*ಕೃಷಿ ಇಲಾಖೆಯ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಲ್ಲಿ 1.11 ಲಕ್ಷ ರೈತರಿಗೆ 220 ಕೋಟಿ ನೀಡಲಾಗಿದೆ.

*ಮುಖ್ಯಮಂತ್ರಿ ವಿದ್ಯಾನಿ​ಧಿ 11200 ವಿದ್ಯಾರ್ಥಿಗಳಿಗೆ 4 ಕೋಟಿ ವಿದ್ಯಾರ್ಥಿ ವೇತನ ಮಂಜೂರು

*ರೇಷ್ಮೆ ಇಲಾಖೆಯ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 127 ರೈತರಿಗೆ 1.20 ಕೋಟಿ ಸಹಾಯ ಧನ

*ತೋಟಗಾರಿಕೆ ಇಲಾಖೆಯ ಎನ್‌ಎಚ್‌ಎಂ ನಡಿ 1895 ಮಂದಿ ರೈತರಿಗೆ 8.5 ಕೋಟಿ ಸಹಾಯಧನ ನೀಡಲಾಗಿದೆ.

*ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳ ಯೋಜನೆಯಡಿ 2442 ಸಂಘಗಳಿಗೆ 36 ಕೋಟಿ ಬಂಡವಾಳ ವಂತಿಕೆ ನೀಡಲಾಗಿದೆ

*ಪ್ರಧಾನಮಂತ್ರಿ ಜನ ಆರೋಗ್ಯ 2.75 ಲಕ್ಷ ಜನರಿಗೆ ಆಯುಷ್ಮಾನ್‌ ಕಾರ್ಡ್‌ ನೀಡಲಾಗಿದ್ದು ತಲಾ 5 ಲಕ್ಷದವರೆಗೆ ವೈದ್ಯಕೀಯ ವೆಚ್ಚದ ನೆರವು ಸಿಗಲಿದೆ.

*ಸಮಾಜ ಕಲ್ಯಾಣ ಇಲಾಖೆಯ 96530 ಮಂದಿ ವಿದ್ಯಾರ್ಥಿಗಳಿಗೆ 37 ಕೋಟಿ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ.

*ಪ್ರಥಮ ಯತ್ನದಲ್ಲಿ ಪಾಸಾದ 4128 ಮಂದಿ ವಿದ್ಯಾರ್ಥಿಗಳಿಗೆ 8 ಕೋಟಿ ಫ್ರೋತ್ಸಾಹ ಧನ ನೀಡಲಾಗಿದೆ.

*ಪರಿಶಿಷ್ಟವರ್ಗಗಳ ಜಿಲ್ಲೆಯ 1273 ಮಂದಿ ವಿದ್ಯಾರ್ಥಿಗಳಿಗೆ 3.18 ಕೋಟಿ

*9898 ವಿದ್ಯಾರ್ಥಿಗಳ ವೇತನಕ್ಕಾಗಿ 18 ಕೋಟಿ ಮಂಜೂರು.

*ಬಿಸಿಎಂ ಯೋಜನೆಯಡಿ 12046 ಮಂ​ ವಿದ್ಯಾರ್ಥಿಗಳಿಗೆ 1.40 ಕೋಟಿ ಮಂಜೂರು.

*ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ 117 ಮಂದಿ ವಿದ್ಯಾರ್ಥಿಗಳಿಗೆ 21 ಲಕ್ಷ

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 60811 ವಿದ್ಯಾರ್ಥಿಗಳಿಗೆ 12.42 ಕೋಟಿ ನೀಡಲಾಗಿದೆ.

click me!