ಸಿದ್ದರಾಮಯ್ಯ ಪುಕ್ಕಲುತನದಿಂದ ವರುಣಕ್ಕೆ ಆಗಮನ: ಸಂಸದ ಪ್ರತಾಪ್‌ ಸಿಂಹ

By Kannadaprabha NewsFirst Published Mar 27, 2023, 1:39 PM IST
Highlights

ಸಿದ್ದರಾಮಯ್ಯ ಅವರಿಗೆ ತಮ್ಮ ಮಗನ ನೆಲೆ ಕಳೆದು ವರುಣಗೆ ಬರುವ ಸ್ಥಿತಿ ಬಂದಿದೆ. ಎಲ್ಲೆ ನಿಂತರೂ ಸೋಲುತ್ತೇನೆ ಎಂಬ ಪುಕ್ಕಲತನದಿಂದ ವರುಣಗೆ ಬರುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಲೇವಡಿ ಮಾಡಿದರು. 

ಮೈಸೂರು (ಮಾ.27): ಸಿದ್ದರಾಮಯ್ಯ ಅವರಿಗೆ ತಮ್ಮ ಮಗನ ನೆಲೆ ಕಳೆದು ವರುಣಗೆ ಬರುವ ಸ್ಥಿತಿ ಬಂದಿದೆ. ಎಲ್ಲೆ ನಿಂತರೂ ಸೋಲುತ್ತೇನೆ ಎಂಬ ಪುಕ್ಕಲತನದಿಂದ ವರುಣಗೆ ಬರುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಲೇವಡಿ ಮಾಡಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಸಿಎಂ ನಾನೇ ಎನ್ನುವ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಹುಡುಕಿ ಕೊಳ್ಳಲಾಗಲಿಲ್ಲ. ಊರಿಗೊಬ್ಳೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಗೆ ಬಂದಿದ್ದಾರೆ ಎಂದು ಕುಟುಕಿದರು.

ಹೈಕಮಾಂಡ್‌ ಟಿಕೆಟ್‌ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಾರೆ. ಕ್ಷೇತ್ರ ಕೊಡಲು ಹೈಕಮಾಂಡ್‌ ರೆಡಿ ಇಲ್ಲವೆಂದ ಮೇಲೆ ಯಾವ ಧೈರ್ಯದ ಮೇಲೆ ಮುಂದಿನ ಸಿಎಂ ನಾನೇ ಎನ್ನುತ್ತಾರೆ?. ಟಿಕೆಟ್‌ ಕೊಡದೆ ಇದ್ದ ಪಕ್ಷ ಅವರಿಗೆ ಸಿಎಂ ಸ್ಥಾನ ಕೊಡುತ್ತಾ?. 2018 ರಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮುಗಿದು ಹೋಗಿದೆ. ಕಳೆದ ಬಾರಿ ಸಣ್ಣ ಅಂತರದಿಂದ ಸಿದ್ದರಾಮಯ್ಯ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಅವರು ಎಲ್ಲೇ ನಿಂತರೂ ಸೋಲುತ್ತಾರೆ ಎಂದು ಅವರು ಭವಿಷ್ಯ ನುಡಿದರು.

ನಾನು ಸಿಎಂ ಆಕಾಂಕ್ಷಿಯಲ್ಲ: ಕೆ.ಎಚ್‌.ಮುನಿಯಪ್ಪ ಸ್ಪಷ್ಟನೆ

ಬಿಜೆಪಿಯ ನೈಜ ಕಾಳಜಿ ಸಾಬೀತು: ಹಿಂದುಳಿದ ಜಾತಿ ಮತ್ತು ವರ್ಗಗಳ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರ ಮೈಲಿಗಲ್ಲಾಗಿದ್ದು, ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಹಿಂದುಳಿದವರ ಮತ್ತು ಪರಿಶಿಷ್ಟಜಾತಿಯ ಮೀಸಲಾತಿಯನ್ನು ವರ್ಗೀಕರಿಸುವ ಮೂಲಕ ಎಲ್ಲರ ಶ್ರೇಯೋಭಿವೃದ್ಧಿ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು. ಸಂಘ ಪರಿವಾರದವರು ಮೀಸಲಾತಿ ತೆಗೆದು ಹಾಕುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದರು. ಬಿಜೆಪಿ ಹಿಂದುಳಿದ ಜಾತಿ ಜನಾಂಗದ ಪರವಾಗಿದ್ದೇವೆ. ನಾವು ಕೇವಲ ಭಾಷಣ ಮಾಡುವುದಲ್ಲ. ಎಲ್ಲಾ ಸಮುದಾಯದ ಬೇಡಿಕೆಗಳನ್ನು ಸ್ಪಂದಿಸುವ ಕೆಲಸ ಮಾಡಿದ್ದೇವೆ. ಹೀಗಾಗಿ, ಎಲ್ಲಾ ಸಮುದಾಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಎಲ್ಲಾ ಸಮಾಜಗಳಿಗೂ ನ್ಯಾಯ ಕೊಡುವ ಪಕ್ಷ ಬಿಜೆಪಿ. ಇದನ್ನು ಬಸವರಾಜ್‌ ಬೊಮ್ಮಾಯಿ ಸಾಬೀತು ಮಾಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಂರು ಶೇ.4 ರಷ್ಟುಮೀಸಲಾತಿ ಪಡೆದುಕೊಂಡಿದ್ದರು. ಇದು ಹಿಂದುಳಿದ ವರ್ಗಕ್ಕೆ ಸಲ್ಲಬೇಕಾದ ಮೀಸಲಾತಿಯನ್ನ ಅನಧಿಕೃತವಾಗಿ ಕೊಡಲಾಗಿತ್ತು. ಇದೀಗ ನ್ಯಾಯಯುತವಾಗಿ ಮುಸ್ಲಿಂರ ಮೀಸಲಾತಿ ತೆಗೆದು ಒಕ್ಕಲಿಗ, ವೀರಶೈವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಬರೀ ಭಾಷಣ ಮಾಡುತ್ತಿದ್ದವರಿಗೆ ಈ ಮೀಸಲಾತಿ ನಿರ್ಧಾರ ಮೂಲಕ ಅವರ ಬಾಯಿ ಮುಚ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಮೇಯರ್‌ ಶಿವಕುಮಾರ್‌, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಸೋಮಸುಂದರ, ಮುಖಂಡರಾದ ಎಚ್‌.ಜಿ. ಗಿರಿಧರ್‌, ಮಹೇಶ್‌ ರಾಜೇ ಅರಸ್‌, ಕೇಬಲ್‌ ಮಹೇಶ್‌ ಇದ್ದರು.

ಕ್ಷೇತ್ರ ಹುಡುಕಿಕೊಳ್ಳುವಷ್ಟು ದಡ್ಡ ನಾನಲ್ಲ!: ವಿಧಾನಸಭೆ ಚನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ, 2029 ರವರೆಗೂ ಮೋದಿ ಅವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ. ಎಂಟು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದನ ಸ್ಥಾನ ಬಿಟ್ಟು, ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳುವಷ್ಟುದಡ್ಡ ನಾನಲ್ಲ ಎಂದು ಪ್ರತಾಪ್‌ ಸಿಂಹ ತಿಳಿಸಿದರು.

ಟಿಕೆಟ್‌ ಸಿಕ್ಕರೆ ಅಭಿನಂದನಾ ಸಮಾವೇಶ, ಸಿಗದಿದ್ದರೆ ಯದ್ವಾತದ್ವಾ ಬೈಯುವ ಪ್ರೋಗ್ರಾಂ!

ಹುಣಸೂರು ತಾಲೂಕಿನ 49 ಕೆರೆಗೆ ನೀರು: ಜಿಲ್ಲೆಯ ಹುಣಸೂರು ತಾಲೂಕಿನ ಮರದೂರು ಗ್ರಾಮದದ ಬಳಿ ಲಕ್ಷ್ಮಣತೀರ್ಥ ನದಿಯಿಂದ ಹುಣಸೂರು ತಾಲೂಕು ವ್ಯಾಪ್ತಿಯ ಬತ್ತಿ ಹೋಗಿರುವ 49 ಕೆರೆಗಳಿಗೆ ನೀರು ತುಂಬಿಸುವ . 85 ಕೋಟಿ ವೆಚ್ಚದ ಕಾಮಗಾರಿಗೆ ಕ್ಯಾಬಿನೆಟ್‌ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. ಇದಕ್ಕಾಗಿ ನಾನು ಹಲವು ಬಾರಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೆ. ಇದಕ್ಕೆ ಅನುಮೋದನೆ ನೀಡಲು ಸಹಕರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಧನ್ಯವಾದ ತಿಳಿಸುತ್ತೇನೆ. 18 ತಿಂಗಳಲ್ಲಿ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಎಲ್ಲಾ ಮನೆಗಳಿಗೂ ಟ್ಯಾಪ್‌ ಮೂಲಕ ಕುಡಿಯುವ ನೀರು ಸಿಗಲಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಆಗುತ್ತಿವೆ ಎಂದು ಅವರು ಹೇಳಿದರು.

click me!