Assembly election: ಮತದಾರರ ಪಟ್ಟಿ ಪರಿಷ್ಕರಣೆ ಕೇಂದ್ರ ಚುನಾವಣಾ ಆಯೋಗದಿಂದಲೇ ಉಸ್ತುವಾರಿ

By Sathish Kumar KHFirst Published Jan 3, 2023, 8:49 PM IST
Highlights

ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ  ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಚುನಾವಣಾ ಪೂರ್ವ ತಯಾರಿ ನಡೆಸಿದರು.

ವರದಿ- ಆನಂದ ಬೈದನಮನೆ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಬೆಂಗಳೂರು (ಜ.03): ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿ ಜೋರಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪವಾಗಿದೆ ಅನ್ನೋ ಕಾರಣಕ್ಕೆ ಕುತೂಹಲದ ಕೇಂದ್ರವಾಗಿರುವ ರಾಜ್ಯ ಚುನಾವಣಾ ಅಯೋಗ ಬಿರುಸಿನಿಂದ ಚುನಾವಣಾ ತಯಾರಿ ನಡೆಸುತ್ತಿದೆ. ಯಾವುದೇ ಅನುಮಾನಕ್ಕೆ ಅವಕಾಶವಾಗದಂತೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯದಲ್ಲಿ ಠಿಕಾಣಿ ಹಾಕಿದ್ದು, ಪೂರ್ವತಯಾರಿ ಮುಂದುವರಿಸಿದ್ದಾರೆ. 

ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ  ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಚುನಾವಣಾ ಪೂರ್ವ ತಯಾರಿ ನಡೆಸಿದರು. ಸೋಮವಾರ  ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ  ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರದ ಅಧಿಕಾರಿಗಳು, ಮಂಗಳವಾರದಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಗೆ ವರ್ಚ್ಯುಯಲ್ ಮೂಲಕ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. 

ಮತದಾರರ ಪಟ್ಟಿಯಲ್ಲಿ ಡಬಲ್ ಎಂಟ್ರಿ ಮಾಡಿದಲ್ಲಿ ಜೈಲು ಶಿಕ್ಷೆ- ಕಲಬುರಗಿ ಡಿಸಿ ಎಚ್ಚರಿಕೆ

ಸಭೆಯಲ್ಲಿ ಮುಖ್ಯವಾಗಿ ಇದೇ ತಿಂಗಳು ಪ್ರಕಟವಾಗಲಿರುವ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚರ್ಚಿಲಾಯಿತು. ಅದರಲ್ಲೂ ಮುಖ್ಯವಾಗಿ ಅಂತಿಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಮೃತ ಪಟ್ಟವರ ಹೆಸರುಗಳನ್ನು ತೆಗೆದು ಹಾಕುವುದು, ವಿಳಾಸ ಬದಲಾದವರ ಹೆಸರುಗಳ ವರ್ಗಾವಣೆ ಮತ್ತು ಹೊಸ ಯುವ ಮತದಾರರ ಹೆಸರುಗಳ ಸೇರ್ಪಡೆ ಕುರಿತಂತೆ ಅನುಸರಿಸಬೇಕಾದ ವಿಧಾನಗಳ ಕುರಿತು ಹೆಚ್ಚು ಒತ್ತು ನೀಡುವಂತೆ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಮತದಾರರ ಪರಿಷ್ಕರಣೆ ಸಂಬಂಧ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಎಚ್ಚರಿಕೆಯ ಕ್ರಮದತ್ತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಅಂತಿಮ ಮತದಾರರ ಪಟ್ಟಿಯಲ್ಲಿ ಮುಖ್ಯವಾಗಿ ಸಾರ್ವಜನಿಕರ ಮಾಹಿತಿ ಸರಿಯಾಗಿರಬೇಕು ಜೊತೆಗೆ ಯಾವುದೇ ಕಾರಣದಿಂದ ಇರುವವರ ಹೆಸರುಗಳನ್ನು ಕೈ ಬಿಡದಂತೆ ಜಾಗೃತಿವಹಿಸಬೇಕು, ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಖುದ್ದು ಬೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ಮನೆ-ಮನೆಗೆ ಬೇಟಿ ನೀಡಿ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿರುವ ಬಗ್ಗೆ ನಿಗಾವಹಿಸಬೇಕು  ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್ ಭಾದೂ ಖಡಕ್ ಸೂಚನೆ ನೀಡಿದರು. 

ಬೆಂಗಳೂರು: ಮತದಾರರ ಮಾಹಿತಿ ಕದ್ದ ಚಿಲುಮೆ ಕಪ್ಪು ಪಟ್ಟಿಗೆ ಸೇರ್ಪಡೆ

ಅಂತಿಮ ಮತದಾರರ ಪಟ್ಟಿಯ ತಯಾರಿಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಸೇರ್ಪಡೆಗೊಂಡಿರುವ (Addition) ಮತ್ತು ತೆಗೆದುಹಾಕಿರುವ (Deletion) 10 ಮತಕೇಂದ್ರಗಳನ್ನು ಗುರುತಿಸಿ ಅವುಗಳಿಗೆ ಸಕಾರಾಣಗಳನ್ನು ಗುರುತಿಸಿ ಸರಿಮಾಡುವಂತೆ ಸೂಚಿಸಿದರು. ಕಳೆದ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಶೇಕಡಾವಾರು ಮತದಾನವನ್ನು ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳುವುದು ಹಾಗೂ ಮತದಾರರ ಜಾಗೃತಿಗಾಗಿ ಹೆಚ್ಚಿನ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಜಯ್ ಭಾದೂ ಸಲಹೆ ನೀಡಿದರು. 

ಇದಲ್ಲದೇ, ಚುನಾವಣಾ ಕಾರ್ಯಕ್ಕಾಗಿ ಅವಶ್ಯವಿರುವ ಮಾನವ ಸಂಪನ್ಮೂಲ ಕುರಿತು ಸಹ ಚರ್ಚಿಸಿದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು,  ತಮಗೆ ಅವಶ್ಯವಿರುವ ಸ್ಥಾನಗಳ ಕುರಿತು ಕೂಡಲೇ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಗಮನಕ್ಕೆ ತರಲು ಸೂಚಿಸಿದರು.

click me!