Chamarajanagar: ಪ್ರತಿ ವಾರ ಜನಸಂಪರ್ಕ ಸಭೆ ನಡೆಸುವೆ: ಶಾಸಕ ಎ.ಆರ್‌.ಕೃಷ್ಣಮೂರ್ತಿ

Published : Jun 03, 2023, 09:03 PM IST
Chamarajanagar: ಪ್ರತಿ ವಾರ ಜನಸಂಪರ್ಕ ಸಭೆ ನಡೆಸುವೆ: ಶಾಸಕ ಎ.ಆರ್‌.ಕೃಷ್ಣಮೂರ್ತಿ

ಸಾರಾಂಶ

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ಮೂರು ತಾಲೂಕುಗಳನ್ನು ಒಳಗೊಂಡಿದ್ದು, ಮೂರು ತಾಲೂಕುಗಳಲ್ಲೂ ವಾರಕ್ಕೆ ಒಂದೊಂದು ತಾಲೂಕಿನಂತೆ ಒಂದೊಂದು ವಾರ ಜನಸಂಪರ್ಕ ಸಭೆ ನಡೆಸಲಿದ್ದು, ಒಂದು ವಾರ ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಸಭೆ ನಡೆಸುತ್ತೇನೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ತಿಳಿಸಿದರು. 

ಚಾಮರಾಜನಗರ (ಜೂ.03): ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ಮೂರು ತಾಲೂಕುಗಳನ್ನು ಒಳಗೊಂಡಿದ್ದು, ಮೂರು ತಾಲೂಕುಗಳಲ್ಲೂ ವಾರಕ್ಕೆ ಒಂದೊಂದು ತಾಲೂಕಿನಂತೆ ಒಂದೊಂದು ವಾರ ಜನಸಂಪರ್ಕ ಸಭೆ ನಡೆಸಲಿದ್ದು, ಒಂದು ವಾರ ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಸಭೆ ನಡೆಸುತ್ತೇನೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾನು ಹಿಂದೆ ಸಂತೇಮರಹಳ್ಳಿ ಕ್ಷೇತ್ರದ ಶಾಸಕನಾಗಿದ್ದಾಗ ಪ್ರತಿ ವಾರ ಒಂದೊಂದು ಹೋಬಳಿ ಕೇಂದ್ರದಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅದನ್ನು ಮುಂದುವರಿಸುತ್ತೇನೆ ಎಂದರು.

ವಿಧಾನಸಭಾ ಅಧಿವೇಶನಕ್ಕೆ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 31 ಗ್ರಾಪಂಗಳು ಇದ್ದು, ದಿನಕ್ಕೆ 2 ಗ್ರಾಪಂಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದ್ದೇನೆ. ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಮತದಾರರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಕೆಲಸ ಹಾಗೂ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು. ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಜನರು ನನ್ನ ಗೆಲ್ಲಿಸುವ ಮೂಲಕ 19 ವರ್ಷದ ರಾಜಕೀಯ ವನವಾಸವನ್ನು ಅಂತ್ಯಗೊಳಿಸಿದ್ದಾರೆ. ಒಂದು ಮತದ ಅಂತರದಲ್ಲಿ ಸೋತಿದ್ದು ಇತಿಹಾಸ ಸೃಷ್ಟಿಸಿತ್ತು ಇಡೀ ಜಗತ್ತಿಗೆ ಉದಾಹರಣೆಯಾಗಿತ್ತು. ರಾಮನಿಗೆ 14 ವರ್ಷ ವನವಾಸವಾಗಿದ್ದರೆ ನನಗೆ 19 ವರ್ಷ ರಾಜಕೀಯ ವನವಾಸವಾಯಿತು ಎಂದರು.

ಮಕ್ಕಳ ದಾಖ​ಲಾ​ತಿಗೆ ವಾಮ​ಮಾರ್ಗ ಹಿಡಿದ ಪೋಷ​ಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ

ಎರಡು ಲೋಕಸಭೆ ಚುನಾವಣೆ ಸೇರಿದಂತೆ 9 ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 6 ಚುನಾವಣೆಯಲ್ಲಿ ಸೋತು 3 ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇನೆ. ಜನರ ಪ್ರೀತಿ ವಿಶ್ವಾಸ ಈ ಬಾರಿ ಸಿಕ್ಕಿದ್ದರಿಂದ ಗೆದ್ದಿದ್ದೇನೆ. ಕನಸ್ಸು ಮನಸ್ಸಿನಲ್ಲೂ ಇಷ್ಟುಅಂತರದ ಗೆಲುವು ಪಡೆಯುತ್ತೇನೆ ಎಂದು ಊಹಿಸಿರಲಿಲ್ಲ ಎಂದರು. ಕೊಳ್ಳೇಗಾಲ ಕ್ಷೇತ್ರದಲ್ಲಿ 1,08,363 ಮತಗಳು ಸಿಕ್ಕಿದ್ದು, 59 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಿಕ್ಕಿದೆ. ಸಂತೇಮರಹಳ್ಳಿ ಕ್ಷೇತ್ರ ನನಗೆ ಚಿನ್ನದ ಕ್ಷೇತ್ರವಾಗಿತ್ತು. ಈಗ ಕೊಳ್ಳೇಗಾಲ ಕ್ಷೇತ್ರದ ಮತದಾರರು ಚಿನ್ನದಂತೆ ಅಧಿಕಾರ ಕೊಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದಕ್ಕೆ ಅನುಗುಣವಾಗಿ ಜನಸೇವಕನಾಗಿ ಕೆಲಸ ನಿರ್ವಹಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾಗಿ ಡಿ.ಕೆ. ಶಿವಕುಮಾರ್‌ ಅವರು ಸರ್ಕಾರ ರಚನೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅನುದಾನ ನೀಡಲಿದ್ದು, ಕ್ಷೇತ್ರ ಅಭಿವೃದ್ಧಿ ಪಥಕ್ಕೆ ಕೊಂಡ್ಯೊಯುವ ನಿರೀಕ್ಷೆಯಲ್ಲಿದ್ದೇನೆ. ಮೈ ಎಲ್ಲಾ ಕಣ್ಣಾಗಿ ಕೆಲಸ ಮಾಡಿ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು. ಕ್ಷೇತ್ರದಲ್ಲಿ ಬಡವರಲ್ಲೂ ಬಡವರಾಗಿ ಇದ್ದಾರೆ ಅವರ ಮೆಲೆತ್ತುವ ಕೆಲಸವನ್ನು ಮಾಡಲು ಅಧಿಕಾರಿಗಳ ಸಭೆಗಳನ್ನು ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಕಚೇರಿಗೆ ಅರ್ಜಿ ಹಾಕಲು ಬರುವ ಬಡವರಾಗಲಿ ಶ್ರೀಮಂತರಾಗಲಿ ಯಾವುದೇ ಲೋಪವಾಗದಂತೆ ಸ್ಪಂದಿಸಿ ಕೆಲಸ ಮಾಡಬೇಕು ಯಾರು ಸಹ ಅಲೆದಾಡಿಸಬಾರದು ಎಂದು ಎಚ್ಚರಿಕೆ ನೀಡಿದ್ದೆನೆ ಎಂದರು. ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ , ಪ್ರಧಾನ ಕಾರ್ಯದರ್ಶಿ ಗೌಡಳ್ಳಿ ಮಹೇಶ್‌ ಇದ್ದರು.

ಆಕ್ಸಿಜನ್‌ ದುರಂತದಲ್ಲಿ ಮೃತರಾದ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ: ಕೋವಿಡ್‌ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಆಕ್ಸಿಜನ್‌ ದುರಂತದಲ್ಲಿ ಮೃತರಾದ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಭರವಸೆ ನೀಡಿತ್ತು. ಸದನದಲ್ಲಿ ಚರ್ಚಿಸುವೆ ಎಂದು ಕೊಳ್ಳೇಗಾಲ ವಿಧಾನಸಭೆ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರು ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಕೋವಿಡ್‌ ಸಂದರ್ಭದಲ್ಲಿ ಉಂಟಾಗಿದ್ದ ಆಕ್ಸಿಜನ್‌ ದುರಂತದಲ್ಲಿ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಆರೋಗ್ಯ ಮಂತ್ರಿ ಡಾ. ಕೆ. ಸುಧಾಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಸುರೇಶ್‌ ಕುಮಾರ್‌ ಸುಳ್ಳು ವರದಿ ನೀಡಿದ್ದರು.

ಮೂಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಶಾಸಕ ಬಾಲ​ಕೃ​ಷ್ಣ

ಘಟನೆ ಆದ ಮರುದಿನ ಆಸ್ಪತ್ರೆಗೆ ಭೇಟಿ ನೀಡಿದ ಇಂದಿನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ದುರಂತದಲ್ಲಿ ಮೃತರಾದವರು ಮೂವರಲ್ಲ 36 ಮಂದಿ ಎಂದು ಗಂಭೀರವಾಗಿ ಆರೋಪ ಮಾಡಲಾಗಿತ್ತು. ಈ ಘಟನೆ ಕುರಿತು ಅಂದು ಕೇಂದ್ರ ಹಾಗೂ ರಾಜ್ಯದ ಸಭೆಗಳಲ್ಲೂ ಪ್ರಸ್ತಾಪ ಮಾಡಿದಾಗ ಅಲ್ಲೂ ಕೇವಲ ಮೂರು ಮಂದಿ ಮಾತ್ರ ಎಂದು ಹೇಳಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದರಿಂದ ಈ ಆಕ್ಸಿಜನ್‌ ದುರಂತ ಪ್ರಕರಣವನ್ನು ನಮ್ಮ ಸರ್ಕಾರ ಈ ಬಾರಿ ಮತ್ತೆ ಮರು ತನಿಖೆಗೆ ಆದೇಶ ಮಾಡಿದೆ ಎಂದರು.

ಆಕ್ಸಿಜನ್‌ ದುರಂತದಲ್ಲಿ ಮೃತರಾದ 36 ಕುಟುಂಬಗಳಿಗೆ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು ವೈಯಕ್ತಿಕವಾಗಿ ಭೇಟಿ ನೀಡಿ ತಲಾ ಒಂದು ಲಕ್ಷ ರು. ಪರಿಹಾರ ನೀಡಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಭರವಸೆಯನ್ನು ಈಡೇರಿಸಲು ನಾನು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು