ಬಿಎಸ್‌ವೈ ಜತೆ ಮೋದಿ ಮಾತುಕತೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೀತಾ ಚರ್ಚೆ..?

By Suvarna NewsFirst Published Jan 17, 2023, 12:54 PM IST
Highlights

ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ 9 ರಾಜ್ಯಗಳ ಚುನಾವಣಾ ಕಾರ್ಯತಂತ್ರವು ನವದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಕಾರ್ಯಕಾರಿ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ 16 ರಿಂದ 2 ದಿನಗಳ ಕಾಲ ಪ್ರಮುಖ ಬಿಜೆಪಿ ಕಾರ್ಯಕಾಋನಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುತ್ತಿದೆ ಎಂದೂ ತಿಳಿದುಬಂದಿದೆ. ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸೋಮವಾರ 15 ನಿಮಿಷಗಳ ಕಾಲ ಸಭೆ ನಡೆಸಿದ್ದಾರೆ. ಈ ಹಿನ್ನೆಲೆ ಮಾಜಿ ಸಿಎಂ ಹಾಗೂ ಪ್ರಸ್ತುತ ಬಿಜೆಪಿಯ ಕೇಂದ್ರ ಸಂದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ಅವರೊಂದಿಗಿನ ಮಾತುಕತೆಯಲ್ಲಿ ಯಾವ ವಿಚಾರಗಳು ಚರ್ಚೆ ನಡೆದಿದೆ ಎಂಬುದು ಹಲವರಲ್ಲಿ ಕುತೂಹಲ ಕೆರಳಿಸಿದೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳು, ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಮಾತುಕತೆ ನಡೆದಿರೋದು ಪ್ರಮುಖ ಎನಿಸಿಕೊಂಡಿದೆ.  

ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ 9 ರಾಜ್ಯಗಳ ಚುನಾವಣಾ ಕಾರ್ಯತಂತ್ರವು ನವದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಕಾರ್ಯಕಾರಿ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಪಕ್ಷದ ಪ್ರಮುಖ ನಾಯಕರು ಹಾಗೂ ಕೇಂದ್ರ ಸಚಿವರು ಭಾಗವಹಿಸುತ್ತಿದ್ದಾರೆ. ಇನ್ನು, ಯಡಿಯೂರಪ್ಪ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಅವರು ಪಕ್ಷದೊಂದಿಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಆದರೆ, ಬಿಜೆಪಿಗೆ ಕರ್ನಾಟಕ ಅನಿವಾರ್ಯ ಎನಿಸಿಕೊಂಡಿದೆ. ಏಕೆಂದರೆ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಮಲ ಅರಳಿದೆ. 

ಇದನ್ನು ಓದಿ: ಸಂಪುಟ ವಿಸ್ತರಣೆ ಚರ್ಚೆಗೆ ಮರುಜೀವ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ಗುಟ್ಟು ಏನು?

 ಅಲ್ಲದೆ, ರಾಜ್ಯ ಚುನಾವಣೆ ಗೆಲ್ಲಲು ಲಿಂಗಾಯತರು ಪ್ರಮುಖ ಎನಿಸಿಕೊಂಡಿದ್ದು, ಬಿಎಸ್‌ವೈ ಈ ಸಮಾಜದ ದೊಡ್ಡ ಮಟ್ಟದ ಬೆಂಬಲ ಹೊಂದಿದ್ದಾರೆ. ಈ ಹಿನ್ನೆಲೆ, ದಕ್ಷಿಣದಲ್ಲಿ ಬಿಜೆಪಿಯ ಅಧಿಕಾರಕ್ಕೆ ಕಾರಣವಾದ ಪ್ರಮುಖ ಹಾಗೂ ಪ್ರಬಲ ವ್ಯಕ್ತಿ ಬಿಎಸ್‌ವೈ ಅವರನ್ನು ಸಂಸದೀಯ ಮಂಡಳಿಗೆ- ಅಂದರೆ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಸದಸ್ಯ ಸ್ಥಾನಮಾನ ನೀಡಿದೆ.

ಇನ್ನು, ಪ್ರಧಾನಿ ಮೋದಿಯವರೊಂದಿಗೆ ಯಡಿಯೂರಪ್ಪ ಭೇಟಿಯಾಗಿರುವುದು ಕರ್ನಾಟಕದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಗೆ ಮತ್ತೆ ಅದೃಷ್ಟದ ತಿರುವು ಸಿಗುತ್ತಾ ಅನ್ನೋ ಊಹಾಪೋಹ ಹುಟ್ಟುಹಾಕಿದೆ. ಯಾಕೆಂದರೆ ಯಡಿಯೂರಪ್ಪನವರ ಉತ್ತರಾಧಿಕಾರಿ ಅಂದರೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರಿ ಎನ್ನುವುದಕ್ಕಿಂತ ತಪ್ಪು ಕಾರಣಗಳಿಗಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಮೆಗಾ ರೋಡ್‌ಶೋ: ದೆಹಲಿಯಲ್ಲಿ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭ

ಪ್ರತಿಪಕ್ಷಗಳು ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೇರಿ PayCM ಅಭಿಯಾನ ಪ್ರಾರಂಭಿಸಿದ್ದರಿಂದ ಬೊಮ್ಮಾಯಿ ಅವರ ಅಧಿಕಾರಾವಧಿಯು ಕಳೆದ ವರ್ಷ ಅಲುಗಾಡುತ್ತಿತ್ತು. ಆದರೂ, ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಅವರ ನೇತೃತ್ವದಲ್ಲಿಯೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಪಕ್ಷವು ಸಮರ್ಥಿಸಿಕೊಂಡಿದೆ.

ಬಿಜೆಪಿಯ ಪ್ರಮುಖ ಕಾರ್ಯತಂತ್ರಗಾರ ಹಾಗೂ ಚುನಾವಣಾ ಚಾಣಕ್ಯ ಎನಿಸಿಕೊಂಡಿರುವ ಅಮಿತ್ ಶಾ ಅವರು ಕರ್ನಾಟಕ ಘಟಕಕ್ಕೆ "ಮಿಷನ್ 136" ಟಾರ್ಗೆಟ್‌ ನೀಡಿದ್ದಾರೆ. ಅಂದರೆ,  ರಾಜ್ಯದ 224 ವಿಧಾನಭಾ ಕ್ಷೇತ್ರಗಳಲ್ಲಿ 136 ಸ್ಥಾನಗಳನ್ನು ಗೆಲ್ಲುವುದು. ಆದರೆ ದೇಶದಲ್ಲಿ ಗಟ್ಟಿಯಾಗಿರುವ ಕೆಲವೇ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಕಾಂಗ್ರೆಸ್‌ ಸವಾಲು ಸಹ ಇರುವುದರಿಂದ ಬಿಜೆಪಿಗೆ ಈ ಟಾರ್ಗೆಟ್‌ ಸುಲಭವಾಗೇನೂ ಇಲ್ಲ. 

ಇದನ್ನೂ ಓದಿ: 9 ರಾಜ್ಯದಲ್ಲಿ ಅಶ್ವಮೇಧಕ್ಕೆ ಬಿಜೆಪಿ ಸಜ್ಜು: ಕಾರ್ಯಕಾರಿಣಿಯಲ್ಲಿ ತೀರ್ಮಾನ

ಕಳೆದ ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರವು ಪತನಗೊಂಡ ಬಳಿಕವೇ ಬಿಜೆಪಿ ಮೂರನೇ ಬಾರಿಗೆ ದಕ್ಷಿಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಮೈತ್ರಿ ಸರ್ಕಾರದ ಭಾಗವಾಗಿದ್ದ ಹಲವು ಶಾಸಕರು ಬಿಜೆಪಿಗೆ ವಲಸೆ ಬಂದ ಬಳಿಕ ಇದು ಸಾದ್ಯವಾಗಿದ್ದು, ಈ ಹಿನ್ನೆಲೆ ಬಿಜೆಪಿಯು ಆಪರೇಷನ್ ಕಮಲ ನಡೆಸಿ ತಮ್ಮ ಸರ್ಕಾರ ಉರುಳಿಸಿದೆ ಎಂದು ಮೈತ್ರಿಕೂಟ ಆರೋಪಿಸಿತ್ತು. 

ಇನ್ನೊಂದೆಡೆ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.  

ಇದನ್ನೂ ಓದಿ: ಇಂದು, ನಾಳೆ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ: ರಾಜ್ಯ ಸೇರಿ 9 ಅಸೆಂಬ್ಲಿ ಚುನಾವಣೆ ಬಗ್ಗೆ ಚರ್ಚೆ

click me!