ದತ್ತರವರ ನೇತೃತ್ವದಲ್ಲಿ ಕಾರ್ಯಕರ್ತರ ಸಜ್ಜುಗೊಳಿಸಲು ಸಂಸದ ಪ್ರಜ್ವಲ್‌ ಕರೆ

By Kannadaprabha NewsFirst Published May 17, 2023, 10:04 PM IST
Highlights

ಕ್ಷೇತ್ರದಲ್ಲಿ ವೈಎಸ್‌ವಿ ದತ್ತರವರ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷವನ್ನು ಮತ್ತೆ ಕಟ್ಟುವ ಮೂಲಕ ಬರಲಿರುವ ಚುನಾವಣಾ ಯುದ್ದಗಳನ್ನು ಎದುರಿಸಲು ಕಾರ್ಯಕರ್ತರು ಮತ್ತು ಯುವ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಎಂದು ಸಂಸದ ಪ್ರಜ್ವಲ್‌ ಕರೆ ನೀಡಿದರು. 

ಕಡೂರು (ಮೇ.17): ಕ್ಷೇತ್ರದಲ್ಲಿ ವೈಎಸ್‌ವಿ ದತ್ತರವರ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷವನ್ನು ಮತ್ತೆ ಕಟ್ಟುವ ಮೂಲಕ ಬರಲಿರುವ ಚುನಾವಣಾ ಯುದ್ದಗಳನ್ನು ಎದುರಿಸಲು ಕಾರ್ಯಕರ್ತರು ಮತ್ತು ಯುವ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಎಂದು ಸಂಸದ ಪ್ರಜ್ವಲ್‌ ಕರೆ ನೀಡಿದರು. ಅವರು ತಾಲೂಕಿನ ಯಗಟಿಯ ವೈ ಎಸ್‌ ವಿ ದತ್ತರವರ ನಿವಾಸದಲ್ಲಿ ನಡೆದ ಜೆಡಿಎಸ್‌ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು. ಸೋಲು ಮುಂದಿನ ಕಾರ್ಯಗಳಿಗೆ ದಾರಿಯಾಗಬೇಕು. ಈ ನಿಟ್ಟಿನಲ್ಲಿ ದತ್ತಣ್ಣ ಅವರು ಸೋತಿರಬಹುದು. ಆದರೆ ಅವರೊಳಗಿನ ಉತ್ಸಾಹ ಸೋತಿಲ್ಲ. 

ಪಕ್ಷ ಕಟ್ಟುವ ಕಾರ್ಯದಲ್ಲಿ ಕಾರ್ಯ ಕರ್ತರು ಧೃತಿಗೆಡದೆ ಪಕ್ಷಕ್ಕೆ ಪುನರ್ಜನ್ಮ ನೀಡಬೇಕು. ಪಕ್ಷದ ಸಮಿತಿ ಪುನರ್‌ ರಚನೆ ಮಾಡಿ, ಪ್ರತೀ ಸಮುದಾಯಕ್ಕೂ ಅವಕಾಶ ನೀಡಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ದತ್ತ ಅವರು ಮುಂದಾಗಬೇಕು ಎಂದರು. ಒಂದು ಮುಖ್ಯ ವಿಚಾರವನ್ನು ಎಲ್ಲರೂ ಗಮನಿಸಬೇಕು. ಬಿಜೆಪಿ ಪಕ್ಷಕ್ಕೆ ಇದ್ದ ಜನವಿರೋಧಿ ಅಲೆ ಕಾಂಗ್ರೆಸ್‌ ಪಕ್ಷಕ್ಕೆ ಲಾಭವಾಗಿದೆಯೇ ವಿನಃಹ ಬೇರೆ ವಿಶೇಷವಿಲ್ಲ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ ಮತ್ತು ಎಲ್ಲ ಕಾಂಗ್ರೆಸ್‌ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಲೇ ಸರ್ಕಾರದ ಅಥವಾ ಬೇರಾವುದೋ ವಿಚಾರದ ಚರ್ಚೆಗೆ ಸೂಕ್ತ ಸಮಯ ಇದಲ್ಲ. 

ಮೇಲುಕೋಟೆ ಅಭಿವೃದ್ಧಿಗೆ ಪ್ರಾಧಿಕಾರ: ದರ್ಶನ್‌ ಪುಟ್ಟಣ್ಣಯ್ಯ

ಆರು ತಿಂಗಳು ಕಳೆದ ನಂತರ ಅವರ ಪ್ರಣಾಳಿಕೆಯ ಅಂಶಗಳ ಅನುಷ್ಟಾನದ ಆಧಾರದಲ್ಲಿ ಸರ್ಕಾರದ ಮೌಲ್ಯಮಾಪನವಾಗುತ್ತದೆ. ಹಾಗಾಗಿ ಈಗ ಪಕ್ಷಕ್ಕೆ ನವಚೇತನ ನೀಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯದತ್ತ್ರ ಗಮನ ಹರಿಸೋಣ. ತಮ್ಮೆಲ್ಲರ ಜೊತೆ ನಾವೆಲ್ಲರೂ ಇರುತ್ತೇವೆ ಎಂದರು. ವೈ. ಎಸ್‌.ವಿ ದತ್ತ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅದರಿಂದ ಕಾರ್ಯಕರ್ತರು ಹತಾಶರಾಗಬಾರದು. ಕಡೂರಿನಲ್ಲಿ ಸೊನ್ನೆಯಿಂದ ಇಲ್ಲಿ ಪಕ್ಷ ಕಟ್ಟಿದ್ದೇವೆ. ಅದಕ್ಕೆ ಪುನಶ್ಚೇತನ ಮಾಡಬೇಕಿದೆ. ಸಧ್ಯದಲ್ಲೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳು ಎದುರಿಗಿವೆ. ಅದರಲ್ಲಿ ನಮ್ಮ ಪಕ್ಷ ದೊಡ್ಡ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತರು ಕೆಲಸ ಮಾಡಬೇಕು. ದೇವೇಗೌಡರು, ಸಂಸದ ಪ್ರಜ್ವಲ್‌ ನಮ್ಮ ಜೊತೆಯಿದ್ದಾರೆ.

ಯಾವುದೇ ಹತಾಶೆಗೆ ಕಾರಣವಿಲ್ಲ. ಯಾರೂ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಈ ಚುನಾವಣೆಯನ್ನು ಸಮರ್ಥವಾಗಿಯೇ ಎದುರಿಸಿದ್ದೇವೆ. ಅದಕ್ಕೆ ಸಹಕಾರ ಕೊಟ್ಟದೇವೇಗೌಡರ ಕುಟುಂಬ ಮತ್ತು ಪಕ್ಷದ ಪ್ರತೀ ಕಾರ್ಯಕರ್ತನಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಸಭೆಯಲ್ಲಿ ಪಕ್ಷದ ಮುಖಂಡರಾದ ಕೆ.ಎಂ.ಮಹೇಶ್ವರಪ್ಪ,ಬಿದರೆ ಜಗದೀಶ್‌, ಕುಂಕಾನಾಡು ಶಿವಕುಮಾರ್‌, ಪ್ರೇಮ್‌ ಕುಮಾರ್‌.ಬಿ.ಟಿ. ಗಂಗಾಧರನಾಯ್ಕ, ಬಿ.ಪಿ.ನಾಗರಾಜ್‌, ಬೀರೂರು ಕೆ.ಎಂ.ವಿನಾಯಕ್‌ , ಡಿ.ಪ್ರಶಾಂತ್‌ ,ವೈ.ಎಂ. ರವಿಪ್ರಕಾಶ್‌ ,ಕೆ.ವಿ ಮಂಜುನಾಥ್‌ ,ರಾಂಪುರ ಮಹೇಶ್‌ ಹಾಗು ನೂರಾರು ಕಾರ್ಯಕರ್ತರು ಇದ್ದರು.

ಚುನಾವಣಾ ರಾಜಕಾರಣ ಅಂತ್ಯ: ಸಭೆಯಲ್ಲಿ ವೈ.ಎಸ್‌.ವಿ.ದತ್ತ ಮಾತನಾಡಿ, ಇದು ನನ್ನ ಕಡೆ ಚುನಾವಣೆ ಎಂದು ಪ್ರಚಾರ ಸಮಯದಲ್ಲಿ ಹೇಳಿದ್ದೆ. ಅದರಂತೆಯೇ ಇನ್ನು ಮುಂದೆ ಚುನಾವಣಾ ರಾಜಕೀಯಕ್ಕೆ ಕೊನೆ ಹೇಳಿ ಸಕ್ರಿಯ ರಾಜಕಾರಣದಲ್ಲಿದ್ದು ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಂತೆ ಸಂಸದ ಪ್ರಜ್ವಲ್‌ ರೇವಣ್ಣ ಮಧ್ಯೆ ಪ್ರವೇಶಿಸಿ, ಚುನಾವಣೆ ರಾಜಕೀಯಕ್ಕೆ ವಿದಾಯದ ಮಾತನ್ನು ಹೇಳಬೇಡಿ. ಅದನ್ನು ಪಕ್ಷ ನಿರ್ಧರಿಸುತ್ತದೆ. ನಿವೃತ್ತಿ ಪಡೆಯಿರಿ ಎಂದು ಯಾರು ಹೇಳಿದ್ದಾರೆ? ದೇವೇಗೌಡರಾ? ಅಥವಾ ಬೇರೆ ನಾಯಕರು ಹೇಳಿದ್ದಾರಾ? ಮುಂದಿನ ಚುನಾವಣೆಯಲ್ಲೂ ನೀವೇ ನಮ್ಮ ಅಭ್ಯರ್ಥಿ. 

ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!

ನಾನು ಇರುವ ತನಕ ನೀವು ನಿವೃತ್ತಿ ಮಾತೇ ಬೇಡ ಎಂದು ಖಾರವಾಗಿಯೇ ನುಡಿದರು. ಕಡೂರು ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ನಾನಾಗಲೀ ಅಥವಾ ನಮ್ಮ ಕುಟುಂಬ ಈ ಕ್ಷೇತ್ರ ಮರೆಯಲು ಸಾಧ್ಯವಿಲ್ಲ. ಕೆಲ ತಪ್ಪುಗಳಾಗಿದೆ. ನಾನೂ ಸಹ ಹೆಚ್ಚು ಈ ಭಾಗಕ್ಕೆ ಬಾರದಿರುವುದು ಸ್ವಲ್ಪ ಹಿನ್ನೆಡೆಗೆ ಕಾರಣವಾಗಿದೆ. ಅವೆಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಆಶಯ ನನ್ನದು. ಇಲ್ಲಿನ ಸೋಲು ಕೇವಲ ದತ್ತ ಅವರ ಸೋಲಲ್ಲ.ನನ್ನದು. ನಮ್ಮೆಲ್ಲರದಾಗಿದೆ. ಎಲ್ಲರೂ ಸೇರಿ ದತ್ತ ಅವರಂಥ ಸರಳ ವ್ಯಕ್ತಿಗೆ ಸಹಕಾರ ನೀಡೋಣ ಎಂದರು.

click me!