ಸರ್ಕಾರ ಬಂದು 20 ದಿನ ಆಗಿಲ್ಲ, ಯಾವ ಕಮಿಷನ್‌ ತೆಗೆದುಕೊಳ್ಳುವುದು: ಎಚ್‌ಡಿಕೆ ವಿರುದ್ಧ ಸಚಿವ ವೆಂಕಟೇಶ್‌ ಕಿಡಿ

By Kannadaprabha NewsFirst Published Jun 14, 2023, 9:23 PM IST
Highlights

ಸರ್ಕಾರ ಬಂದು 20 ದಿನ ಆಗಿಲ್ಲ. ಯಾವ ಕಮಿಷನ್‌ ತೆಗೆದುಕೊಳ್ಳುವುದು ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಕಿಡಿಕಾರಿದರು. 

ಚಾಮರಾಜನಗರ (ಜೂ.14): ಸರ್ಕಾರ ಬಂದು 20 ದಿನ ಆಗಿಲ್ಲ. ಯಾವ ಕಮಿಷನ್‌ ತೆಗೆದುಕೊಳ್ಳುವುದು ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಕಿಡಿಕಾರಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರ ಬಂದು 20 ದಿನ ಆಗಿಲ್ಲ, 45% ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಅವರು ತಿಳಿವಳಿಕೆಯಿಂದ ಮಾತನಾಡುತ್ತಾರೋ ಇಲ್ದೇ ಮಾತಾಡ್ತರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದವರು, ಜವಾಬ್ದಾರಿಯಿಂದ ಮಾತನಾಡಲಿ ಎಂದಷ್ಟೇ ನಾವು ಕೇಳುವುದು ಎಂದರು. ಇನ್ನು, ವಿದ್ಯುತ್‌ ದರ ಏರಿಕೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಅವರು ಅನೂಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ, ಅವರಿದ್ದಾಗ ದರ ಏರಿಸಿ ಈಗ ಇಳಿಸಿ ಎಂದು ನಮಗೆ ಹೇಳುತ್ತಿದ್ದಾರೆ, ಚುನಾವಣೆ ವೇಳೆಯೇ ಬಿಜೆಪಿ ಅವರು ದರ ಏರಿಕೆ ಮಾಡಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Latest Videos

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ಕೊಟ್ಟಮಾತು ಉಳಿಸಿಕೊಳ್ಳುತ್ತೇವೆ: ಐದು ಕಾರ್ಯಕ್ರಮ ಅನುಷ್ಠಾನ ಮಾಡ್ತಕ್ಕಂತ ಸರ್ಕಾರಕ್ಕೆ ಎಷ್ಟೇ ಹೊರೆಯಾದರೂ ಪರವಾಗಿಲ್ಲ ನಾವು ಜನರಿಗೆ ಮಾತು ಕೊಟ್ಟಿದ್ದೇವೆ ಜನರಿಗೆ ಕೊಟ್ಟಂತ ಮಾತು ಉಳಿಸಿಕೊಳುಳುತ್ತೇವೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಅವರು ಹೇಳಿದರು. ನಗರದ ಬಸ್‌ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಆಯೋಜಿಸಲಾಗಿರುವ ಕರ್ನಾಟಕ ರಾಜ್ಯಾದ್ಯಂತ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್‌ ಘೋಷಣೆಗಳನ್ನು ಅನುಷ್ಠಾನ ಮಾಡುವುದಿಲ್ಲ, ಕಾಂಗ್ರೆಸ್‌ ಪಕ್ಷ ಸುಳ್ಳು ಭರವಸೆ ಕೊಟ್ಟಿದ್ದಾರೆ. ಸುಳ್ಳು ಹೇಳಿ ಓಟು ಹಾಕಿಸಿಕೊಂಡಿದ್ದಾರೆ ಎಂದು ಹೇಳಿ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಚುನಾವಣೆ ಸಂದರ್ಭದಲ್ಲಿ ಮಾಡಿದ ಐದು ಘೋಷಣೆಯನ್ನು ಇವತ್ತೇ ಮಾಡಿ ಇವತ್ತೇ ಮಾಡಿ ಎನ್ನುತ್ತಾ ಬಹಳಷ್ಟುಜನ ವಿರೋಧ ಪಕ್ಷದವರು ಒತ್ತಾಯ ಮಾಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ಒಂದು ಪ್ರಶ್ನೆ ಕೇಳುತ್ತೇನೆ. ನಾವು ಯಾರಿಗೆ ಕೊಡಬೇಕು ಎಂದು ತೀರ್ಮಾನ ಮಾಡದೇ ಯಾರಿಗೆ ಕೊಡೋದು? ಯಾರಿಗೆ ಕೊಡಬೇಕು ಎನ್ನುವುದು ಗೊತ್ತಾಗಬೇಕಲ್ಲ? ಡಿಗ್ರಿ ಮಾಡಿರುವವರು ಯಾರು?, ಮನೆ ಮಹಿಳೆಯರು ಯಾರು? ಇವೆಲ್ಲಾ ತೀರ್ಮಾನವಾಗಬೇಕಲ್ಲ, ಅದೆಲ್ಲ ತೀರ್ಮಾನವಾದ ಮೇಲೆ ತಾನೇ ನಾವು ಜನಕ್ಕೆ ಕೊಡಬೇಕು ಎಂದರು.

ಪ್ರಧಾನಿ ಮೋದಿಗೆ ಪರ್ಯಾಯ ನಾಯಕ ಸಿದ್ದರಾಮಯ್ಯ: ಪುಟ್ಟರಂಗಶೆಟ್ಟಿ

ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತೀರ್ಮಾನ ಮಾಡಿ, ಅನುಷ್ಠಾನ ಮಾಡಲು ಈಗಾಗಲೇ ಕ್ರಮ ಕೈಗೊಂಡು ಮೊದಲನೇಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು. ಈ ಯೋಜನೆಗಳು ಬಡವರಿಗಾಗಿ ಮಾಡಿರುವಂತಹ ಕಾರ್ಯಕ್ರಮ ಬಡವರಿಗೆ ಸಹಾಯವಾಗಲಿ ಅವರ ಬದುಕಿಗೆ ಸಹಾಯವಾಗಬೇಕು ಎಂದು ಮಾಡಿದ್ದೇವೆ. ನಿಮ್ಮ ಕಷ್ಠದಲ್ಲಿ ಸರ್ಕಾರ ಭಾಗಿಯಾಗಬೇಕು. ನಿಮ್ಮ ಕಷ್ಠ ಕಡಿಮೆ ಮಾಡಬೇಕು ಎಂಬ ದೃಷ್ಠಿಯಿಂದ ಈ ಕಾರ್ಯಕ್ರಮಗಳು ಜಾರಿಯಾಗಿವೆ ಎಂದರು.

click me!