
ಚಿಕ್ಕಬಳ್ಳಾಪುರ (ಜ.30): ಮಾಜಿ ಸಿಎಂ ಸಿದ್ದರಾಮಯ್ಯನವರ ರೀತಿಯಲ್ಲಿ ತಾವು ಸುಳ್ಳು ಹೇಳುವುದಿಲ್ಲ. ಅವರು ಸುಳ್ಳನ್ನು ಗಟ್ಟಿಯಾಗಿ ಹೇಳುತ್ತಾರೆ. ಅವರು ಸುಳ್ಳು ಹೇಳಿದಷ್ಟೂಕಾಂಗ್ರೆಸ್ ಹಿಂದೆ ಹೋಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು. ಪಿಕಾರ್ಡ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಾಳೇಗೌಡರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳುವುದೆಲ್ಲಾ ಸುಳ್ಳಾಗುತ್ತದೆ. ಹಾಗಾಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಕಾರ್ಯಕರ್ತರು ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಕರೆ ನೀಡಿದ ಸಚಿವ ಸುಧಾಕರ್, ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಹೇಳಿದ್ದೆಲ್ಲ ಉಲ್ಟಾಆಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದರು. ಆದರೆ ಇವರೇ ಅವರ ಮನೆ ಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದೇ ಇಲ್ಲ ಎಂದರು, ಅದೂ ಉಲ್ಟಾಆಯಿತು ಎಂದರು.
Chikkaballapur: ಸೋಲು, ಗೆಲುವು ಮತದಾರರ ಕೈಯಲ್ಲಿ: ಸಚಿವ ಸುಧಾಕರ್
ಈಗ ಸಿದ್ದರಾಮಯ್ಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಅದೂ ಉಲ್ಟಾಆಗಲಿದೆ. ಸಿದ್ದರಾಮಯ್ಯ ಅವರ ತಪ್ಪು ಈವರೆಗೂ ಯಾರೂ ಎತ್ತಿ ತೋರಿಸಿರಲಿಲ್ಲ, ಆದರೆ ತಾವು ತೋರಿಸಿದ ಕಾರಣಕ್ಕೆ ಅವರಿಗೆ ಸಿಟ್ಟು ಬಂದಿದೆ. ಆರ್ಎಸ್ಎಸ್ ನವರು ಹೇಳಿಸಿದ್ದಾರೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದವರು ಮಾತಾಡಿಸಿದರೆ ತಪ್ಪೇನು, ಅವರನ್ನೂ ಮಾತನಾಡಿಸುತ್ತಿರುವುದು ಕಾಂಗ್ರೆಸ್ ನವರೇ ಅಲ್ಲವೇ ಎಂದು ತಿರುಗೇಟು ನೀಡಿದರು.
ಯಾರು ಎಲ್ಲಿಂದಲಾದರೂ ಬರಲಿ: ಯಾರು ಎಲ್ಲಿಂದ ಆದರೂ ಬರಲಿ ಯೋಚನೆ ಬೇಡ, ಜನ ಸಾಮಾನ್ಯರು ಈಗಾಗಲೇ ತೀರ್ಮಾನ ಮಾಡಿದ್ದಾರೆ, ಯಾರು ಏನೇ ಆಮಿಷ ತೋರಿದರೂ ಕ್ಷೇತ್ರದಲ್ಲಿ ಗೆಲ್ಲುವುದೇ ನಾವೇ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಯಾರು ಏನೇ ನೀಡಲಿ, ಪಡೆದು ಮತ ಮಾತ್ರ ತಮಗೇ ನೀಡಲಿದ್ದಾರೆ. ತಮ್ಮನ್ನು ವಿರೋಧಿಸಿದಷ್ಟೂತಮಗೆ ಹೆಚ್ಚು ಮತ ಬರಲಿದೆ, ಸರ್ವೇ ಮಾಡಿಸಿ ಅವರಿಗೆ ಅಭ್ಯಾಸ ಇಲ್ಲ, ಸರ್ವೇ ಮಾಡಿಸಿದರೆ ಗೊತ್ತಾಗಲಿದೆ ಸತ್ಯಾಂಶ ಏನು ಎಂದು ಹೇಳಿದರು.
ಅಧ್ಯಕ್ಷರ ಆಯ್ಕೆ ಕಷ್ಟಕರವಾಗಿತ್ತು: ಈ ಬಾರಿಯ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಕಷ್ಟಕರವಾಗಿತ್ತು, ಇರುವ ನಿರ್ದೇಶಕರೆಲ್ಲರೂ ಆಕಾಂಕ್ಷಿಗಳಾಗಿದ್ದರು, ಅಲ್ಲದೆ ಎಲ್ಲರಿಗೂ ಅಧ್ಯಕ್ಷರಾಗುವ ಅರ್ಹತೆ ಇತ್ತು. ಆದರೆ ಕಾಳೇಗೌಡರ ವ್ಯಕ್ತಿತ್ವ, ಆದರ್ಶ ಮತ್ತು ನಾಯಕತ್ವ ಗುಣದಿಂದಲೇ ಅವರನ್ನು ಆಯ್ಕೆ ಮಾಡಲಾಗಿದೆ. 15 ವರ್ಷ ನಿರಂತರವಾಗಿ ಅವರು ಒಂದೇ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ, ಹಾಗಾಗಿ ಅವರನ್ನು ಹುದ್ದೆ ವರಿಸಿದೆ. ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ನಂದಿ ಹೋಬಳಿಯವರೇ ಆಗುತ್ತಿದ್ದರು, ಹಾಗಾಗಿ ಈ ಬಾರಿ ಕಸಬಾ ಹೋಬಳಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದರು. ಎಲ್ಲರೂ ಸೇರಿದರೆ ಒಗ್ಗಟ್ಟಿನ ಶಕ್ತಿಗೆ ಜಯ ಒಲಿದು ಬರಲಿದೆ. ಪಿಎಲ್ಡಿ ಬ್ಯಾಂಕ್ ನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ.
ನಂದಿ ಭಾಗಕ್ಕೆ ಉತ್ತಮ ರಾಜಕೀಯ ಪ್ರಾತಿನಿಧ್ಯ ನೀಡಲು ಹೆಚ್ಚು ಶ್ರಮಿಸಲಾಗಿದೆ ಎಂದರು. ಪಿಎಲ್ ಡಿ ಬ್ಯಾಂಕ್ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ, ದ್ರಾಕ್ಷಿ ತೋಟಗಳು ಉಳಿಯಲು ಈ ಬ್ಯಾಂಕ್ ಕಾರಣ. ಕಳೆದ 50 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ನಾವು ಐದು ವರ್ಷದಲ್ಲಿ ಮಾಡಿ ತೋರಿಸಲಾಗಿದೆ. ಆಡಳಿತದಲ್ಲಿ ತಾವು ಎಂದೂ ಹಸ್ತಕ್ಷೇಪ ಮಾಡುವುದಿಲ್ಲ, ಸಹಕಾರ ಮಾತ್ರ ಸದಾ ಇರುತ್ತದೆ. ಅಧಿಕಾರ ಬಂದ ಮೇಲೆ ನಮ್ಮ ಕಾರ್ಯಕರ್ತರನ್ನು ಗುರ್ತಿಸಬೇಕು ಎಂಬುದಷ್ಟೇ ತಮ್ಮ ಅಪೇಕ್ಷೆ ಎಂದರು. ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ರಾಮಸ್ವಾಮಿ, ಕೇಶವರೆಡ್ಡಿ, ನಾರಾಯಣಸ್ವಾಮಿ, ಬೈರೇಗೌಡ, ರಾಜಣ್ಣ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ಕಾಂಗ್ರೆಸ್ನಲ್ಲಿ ಬೆರಳೆಣಿಕೆಯಷ್ಟು ನಾಯಕರು: ಕಾಂಗ್ರೆಸ್ ನಲ್ಲಿ ಬೆರಳೆಣಿಕೆಯಷ್ಟುಮಾತ್ರ ನಾಯಕರಿದ್ದಾರೆ, ಆದರೆ ನಮ್ಮಲ್ಲಿ ನೂರಾರು ಮಂದಿ ನಾಯಕರಿದ್ದಾರೆ. ನೀವು ಇದ್ದ ಕಡೆ ನಿಮ್ಮ ನಾಯಕತ್ವವನ್ನು ನಿರೂಪಿಸಬೇಕು, ರಾಜಕಾರಣ ನಿರಂತರವಾಗಿರುವುದು, ಸರ್ಕಾರದ ಬಗ್ಗೆ ಯಾರೇ ಮಾತನಾಡಲಿ, ನಾಯಕರ ಬಗ್ಗೆ ಮಾತನಾಡಿದರೆ ತೀಕ್ಷ$್ಣವಾದ ಉತ್ತರ ನೀಡಬೇಕು, ಯಾವುದೇ ಚುನಾವಣೆಯಲ್ಲಿ ಯಾರೇ ಬರಲಿ ಅಧಿಕಾರ ನಮ್ಮದೇ ಎಂದು ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.