
ಮೈಸೂರು (ಜೂ.30): ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಸಿದ್ದರಾಮಯ್ಯ ಅಪ್ಪಟ ಶಿಷ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು. ಇಲ್ಲಿನ ಜಲದರ್ಶಿ ಅಥಿತಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಡಾ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಮಾತನಾಡಿದರು. ಮೈಸೂರು ಮಹಾರಾಜರು ಕಟ್ಟಿದ ಸಂಸ್ಥೆ ಇದು. ಕಾಲಾನುಕಾಲದಲ್ಲಿ ಮುಡಾ ಆಯ್ತು. ಮೈಸೂರನ್ನು ಯೋಜನಾ ಬದ್ದವಾಗಿ ಕಟ್ಟಲಿಕ್ಕಾಗಿ ಮಾಡಿದ ಒಂದು ಸಂಸ್ಥೆ. ಇಂದು ರಾಜಕಾರಣಿಗಳು, ಅಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿ ಹದಗೆಟ್ಟುಹೋಗಿದೆ. ಸಭೆಗಳಲ್ಲಿ ಏನು ಚರ್ಚೆ ಆಗುತ್ತೆ ಏನು ಎತ್ತ ಅಂತ ಏನೂ ಗೊತ್ತಾಗುತ್ತಿಲ್ಲ. ಇವರು ಆಡಿದ್ದೇ ಆಟ. ಈಗ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ ಎಂದರು.
ನಾನೂ ಕೂಡ ಮುಡಾ ಅಧ್ಯಕ್ಷನಾಗಿದ್ದವನೆ. ಇವತ್ತು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸರ್ಕಾರವೇ ಮುಳುಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ. ಅವನನ್ನ ನಗರಾಭಿವೃದ್ಧಿ ಸಚಿವನನ್ನಾಗಿ ಮಾಡಿ ಎಲ್ಲವನ್ನ ಕುಲಗೆಡಿಸುಬಿಟ್ಟಿದ್ದಾನೆ. ಇವನು ಸಿಎಂ ಸಿದ್ದರಾಮಯ್ಯ ಅಪ್ಪಟ ಶಿಷ್ಯ. ಮುಡಾದ ಬಗ್ಗೆ ಬಹಳ ಅಭಿಮಾನ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ. ಇಂದು ಅವರ ಶಿಷ್ಯ ಎಲ್ಲವನ್ನ ಕುಲಗೆಡಿಸಿದ್ದಾನೆ. ಕಮಿಷನರ್ ದಿನೇಶ್ ಗೆ ವರ್ಗಾವಣೆ ಆಗಿದ್ದರು ಮತ್ತೆ ಅಲ್ಲಿಗೆ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಯತೀಂದ್ರ ಅಂಡ್ ಗ್ಯಾಂಗ್ ಕಾರಣ ಎಂದು ಆರೋಪಿಸಿದರು.
ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸಲೀಂ ಅಹ್ಮದ್ ತಿಳಿದುಕೊಳ್ಳಲಿ: ಸಂಸದ ಬೊಮ್ಮಾಯಿ
ಈ ಗ್ಯಾಂಗಲ್ಲಿ ಯತೀಂದ್ರ, ಶಾಸಕ ಕೆ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ, ಇಂದಿನ ಕಮಿಷನರ್ ದಿನೇಶ್, ಅಧ್ಯಕ್ಷ ಮರೀಗೌಡ, ರಾಕೇಶ್ ಪಾಪಣ್ಣ, ದಿನೇಶ್ ಬಾಮೈದ ತೇಜಸ್ ಗೌಡ ಸೇರಿದಂತೆ ಎಲ್ಲಾ ಸೇರಿದ್ದಾರೆ. ಔಟ್ ಸೋರ್ಸಸ್ ಸಿಬ್ಬಂದಿ ಇಟ್ಟುಕೊಂಡು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎಂಎಲ್ಸಿ ಮಂಜೇಗೌಡ ಮುಡಾದ ಒಬ್ಬ ಅಟೆಂಡರ್ ತರ ವರ್ತಿಸುತ್ತಿದ್ದಾನೆ. ಇವರೆಲ್ಲರೂ ಸೇರಿ ಸುಮಾರು 5 ಸಾವಿರ ಕೋಟಿ ವಂಚನೆ ಮಾಡಿದ್ದಾರೆ. ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಒಬ್ಬೊಬ್ಬರಿಗೆ 20, 30 ಸೈಟು ಕೊಟ್ಟಿದ್ದಾರೆ. ಸಿದ್ದರಾಮಯ್ಯನ ಶಿಷ್ಯ ಮರೀಗೌಡ ಅಧ್ಯಕ್ಷನಾಗಿದ್ದಾನೆ. ಅವರೇ ಹೇಳಿ ಮಾಡಿಸುತ್ತಿರಬಹುದು ಎಂದರು.
ಸಿಎಂ ಸಿದ್ದರಾಮಯ್ಯನೇ ಇದರಲ್ಲಿ ಭಾಗಿಯಾಗಿರಬಹುದು. 1990, 92 ರಲ್ಲಿ ಕೆಸರೆನಲ್ಲಿ ಸೆವರ್ವೆ ನಂಬರ್ 464 ರಲ್ಲಿ 3.14 ಗುಂಟೆ ಸಿದ್ದರಾಮಯ್ಯ ಅವರ ಮಡದಿ ಸಂಬಂಧಿ ಮಲ್ಲಣ್ಣ ಎಂಬುವರು ಕ್ರಯಕ್ಕೆ ತೆಗೆದುಕೊಂಡಿದ್ದಾರೆ. 1998 ಡೀನೋಟಿಫಿಕೇಷನ್ ಆಗಿದೆ. ಅವಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ರು. ಮಲ್ಲಣ್ಣ ಅಕ್ಕ ಪಾರ್ವತಮ್ಮ ಅವರಿಗೆ ದಾನಪತ್ರ ಮಾಡ್ತಾರೆ. ಇದಕ್ಕೆ ಪರಿಹಾರ ಕೊಟ್ಟಿದ್ದಾರೆ. ಪ್ರಾಧಿಕಾರದವರು ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ನೇರ ಹೊಣೆ ಇದೆ ಎಂದು ತಿಳಿಸಿದರು.
ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಖುರ್ಚಿಯಲ್ಲಿ ಕುಳಿತಿದ್ದಾರೆ: ಸಚಿವ ಜಮೀರ್ ಅಹ್ಮದ್ ಖಾನ್
ಮುಡಾ ಉಳಿಯುವುದಕ್ಕೆ ಕೆಲವು ಶಾಸಕರಿಗೆ ಬೇಕಾಗಿಲ್ಲ. ಇದರಲ್ಲಿ ಎಲ್ಲರೂ ಫಲಾನುಭವಿಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಒಂದು ದರೋಡೆ ನಡೆಯುತ್ತಿದೆ. ಇದರಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೇರ ಜವಾಬ್ದಾರರು. ಇದರಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಪಾತ್ರನೂ ಇದೆ. ಇದು ಬಹಳ ದೊಡ್ಡ ಕ್ರೈಮ್ ಹೀಗಾಗಿ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ. ಯಾರು ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಅವರನ್ನೆಲ್ಲ ಬಂಧಿಸಬೇಕು ಎಂದು ವಿಶ್ವನಾಥ್ ಹೇಳಿದದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.