ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

Published : Feb 10, 2019, 04:41 PM ISTUpdated : Feb 11, 2019, 08:05 AM IST
ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಸಾರಾಂಶ

2004ರಿಂದ ಬಿಜೆಪಿ ಕೋಟೆಯಾಗಿದ್ದ ಬಳ್ಳಾರಿಯಲ್ಲಿ 2018ರ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪತಾಕೆ ಹಾರಿಸಿದವರು ವಿ.ಎಸ್. ಉಗ್ರಪ್ಪ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅವರ ಸ್ಪರ್ಧೆ ಬಹುತೇಕ ಖಚಿತ. ಅವರ ಎದುರು ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಮಾಜಿ ಸಂಸದ ಬಿ. ಶ್ರೀರಾಮುಲು ಸೋದರಿ ಜೆ. ಶಾಂತಾ ಅವರನ್ನು ಉಪಚುನಾವಣೆಯಲ್ಲಿ ಉಗ್ರಪ್ಪ ಮಣಿಸಿದ್ದರು. ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗುತ್ತಾರಾ? ಹಾಗೇನಾದರೂ ಆದರೆ ಬಿಜೆಪಿ ತಂತ್ರಗಾರಿಕೆ ಏನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಮಹಾಭಾರತ ಸಂಗ್ರಾಮ: ಬಳ್ಳಾರಿ ಕ್ಷೇತ್ರ

ರಾಜ್ಯ ರಾಜಕಾರಣದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡುವ ‘ಗಣಿನಾಡು’ ಖ್ಯಾತಿಯ ಬಳ್ಳಾರಿ ಜಿಲ್ಲೆ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತಿ. ಕಳೆದ ಒಂದೂವರೆ ದಶಕದಿಂದ ಪರಿಸ್ಥಿತಿ ಬದಲಾಗಿದೆ. ಈಗ ಬಿಜೆಪಿ-ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಕಣವಾಗಿದ್ದು, ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕೈ-ಕಮಲ ನಡುವಿನ ರೋಚಕ ಕದನವಂತೂ ನಡೆಯುವ ಲೆಕ್ಕಾಚಾರವಿದೆ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಕಳೆದ ಉಪ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಹಾಲಿ ಸಂಸದ ವಿ.ಎಸ್‌.ಉಗ್ರಪ್ಪ ಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ ಕಮಲ ಪಕ್ಷದಿಂದ ಅಖಾಡ ಎದುರಿಸುವವರು ಯಾರು ಎಂಬುದೇ ಅನಿಶ್ಚಿತ!

ಉಪ ಚುನಾವಣೆಯಲ್ಲಿ 2,43,161 ಮತಗಳ ದಾಖಲೆಯ ಅಂತರದಲ್ಲಿ ಗೆಲುವು ಪಡೆದಿರುವ ವಿ.ಎಸ್‌.ಉಗ್ರಪ್ಪ ಮುಂದಿನ ಸಾರ್ವತ್ರಿಕ ಚುನಾವಣೆಯ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಎಂದು ಈಗಾಗಲೇ ಎರಡೂ ಪಕ್ಷಗಳು ಬಳ್ಳಾರಿಯಲ್ಲಿ ಜರುಗಿದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಬಹಿರಂಗವಾಗಿಯೇ ಘೋಷಣೆ ಮಾಡಿವೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವೇ ಉದ್ಭವಿಸದು ಎಂಬುದು ಕೈ ಪಾಳೆಯದ ಅಂಬೋಣ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಇನ್ನು ಉಪ ಚುನಾವಣೆಯಲ್ಲಿ ಭಾರೀ ಅಂತರದ ಸೋಲುಂಡಿರುವ ಬಿಜೆಪಿ ಯಾರನ್ನು ಸ್ಪರ್ಧೆಗೊಡ್ಡಲಿದೆ ಎಂಬ ಕುತೂಹಲವಿದೆ. ಖುದ್ದು ಶ್ರೀರಾಮುಲು ಸಹೋದರಿಯೇ ಸ್ಪರ್ಧಿಸಿದರೂ ಲಕ್ಷಾಂತರ ಮತಗಳ ಅಂತರದಲ್ಲಿ ಪರಾಭವಗೊಂಡಿರುವುದು ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಸಂಘಟನೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಡ್ಡು ಹೊಡೆಯುವ ಸಾಮರ್ಥ್ಯ ಇರುವ ಬಿಜೆಪಿಯ ಅಭ್ಯರ್ಥಿ ಆಯ್ಕೆ ಮೇಲೆಯೇ ಚುನಾವಣೆ ಕದನದ ರೋಚಕ ಹುದುಗಿದೆ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಕಾಂಗ್ರೆಸ್‌ ಶಾಸಕರ ಬಲ ಹೆಚ್ಚು

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ. ಮೂರು ಕಡೆ ಬಿಜೆಪಿ ಶಾಸಕರು ಗೆಲುವು ಪಡೆದಿದ್ದರೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಜಿಲ್ಲೆಯ ಕಾಂಗ್ರೆಸ್‌ನ 6 ಮತ್ತು ಬಿಜೆಪಿಯ 2 ಸಂಖ್ಯಾಬಲ ಮಾತ್ರವಿದೆ. ಬಳ್ಳಾರಿ ನಗರ ಹಾಗೂ ಕೂಡ್ಲಿಗಿ ಕ್ಷೇತ್ರ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿಯಲ್ಲಿ ಬಿಜೆಪಿಯಿಂದ ಗೆದ್ದಿರುವ ಎನ್‌.ವೈ.ಗೋಪಾಲಕೃಷ್ಣ 2014ರಲ್ಲಿ ಜರುಗಿದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಗೊಂಡಿದ್ದರು. ಪಕ್ಷದಿಂದ ಸ್ಪರ್ಧೆಗೆ ಅವಕಾಶ ಸಿಗದೆ ಪಕ್ಷಾಂತರ ಮಾಡಿದರು. 2013ರಲ್ಲಿ ಜೆಡಿಎಸ್‌ನಿಂದ ಗೆದ್ದು ಪಕ್ಷಾಂತರ ಮಾಡಿದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಪಡೆದರು. 2008ರಲ್ಲಿ ಬಿಜೆಪಿಯಿಂದ ಗೆದ್ದು ಕೂಡ್ಲಿಗಿ ಶಾಸಕರಾದ ಬಿ.ನಾಗೇಂದ್ರ, ಕಳೆದ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಈ ಹಿಂದೆ ಬಿಜೆಪಿಯಿಂದ ಗೆದ್ದು ಮಂತ್ರಿಯಾಗಿದ್ದ ಆನಂದಸಿಂಗ್‌ ಕಳೆದ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್‌ ಪಕ್ಷದಿಂದ ವಿಧಾನಸಭೆಗೆ ಆಯ್ಕೆಗೊಂಡರು. ಮೊದಲಿನಿಂದಲೂ ಕಾಂಗ್ರೆಸ್‌ ಪಾಳಯದಲ್ಲಿಯೇ ಗುರುತಿಸಿಕೊಂಡು ಗೆಲುವು ಪಡೆದವರು ಸಂಡೂರು ಶಾಸಕ ಇ.ತುಕಾರಾಂ ಹಾಗೂ ಹಡಗಲಿ ಶಾಸಕ ಪರಮೇಶ್ವರ ನಾಯ್ಕ ಮಾತ್ರ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಒಟ್ಟಾರೆ ಜಿಲ್ಲೆಯಲ್ಲಿ ಸದ್ಯಕ್ಕೆ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿರುವುದು ಸ್ಪಷ್ಟಗೊಳ್ಳುತ್ತದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಹೆಚ್ಚಿನ ಮತಗಳ ಅಂತರದಿಂದಲೇ ಗೆಲುವು ಸಾಧಿಸಿದ್ದು, ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸು ಹೆಚ್ಚು ಕೆಲಸ ಮಾಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನ ಕೊರತೆ?

ಜಿಲ್ಲೆಯ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಮುಖಂಡರ ನಡುವಿನ ಮುಸುಕಿನ ಗುದ್ದಾಟಗಳು ಬಿಜೆಪಿಗೆ ಅನುಕೂಲ ಒದಗಿಸಬಹುದು ಎಂಬ ಲೆಕ್ಕಾಚಾರ ಪ್ರತಿ ಚುನಾವಣೆಯಲ್ಲಿ ಕೇಳಿ ಬರುತ್ತದೆ. ಇದು ಮೇಲ್ನೋಟಕ್ಕೆ ನಿಜ ಎನಿಸಿದರೂ ಕಾಂಗ್ರೆಸ್‌ ನಾಯಕರ ಮೇಲೆ ಸೋಲು-ಗೆಲುವಿನ ನಿರ್ಧಾರ ಅವಲಂಬಿಸಿಲ್ಲ ಎಂಬುದು ಸ್ಪಷ್ಟ. ಇದನ್ನು ಅನೇಕ ಬಾರಿ ಮತದಾರರು ನಿರೂಪಿಸುತ್ತಲೇ ಬಂದಿದ್ದಾರೆ. ಲೋಕಸಭಾ ಉಪ ಚುನಾವಣೆಯಲ್ಲಿ ವಿ.ಎಸ್‌.ಉಗ್ರಪ್ಪ ಅವರು ಗೆಲ್ಲಲು ಕಾಂಗ್ರೆಸ್‌ ಮುಖಂಡರ ಒಗ್ಗಟ್ಟು ಎನ್ನುವ ಬದಲು ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೈಗೊಂಡ ರಾಜಕೀಯ ಕಾರ್ಯತಂತ್ರ ಹಾಗೂ ಜಿಲ್ಲೆಯ ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರಿಗೆ ನೀಡಿದ ಗೆಲುವಿನ ಟಾಸ್ಕ್‌ ಹೆಚ್ಚು ಕೆಲಸ ಮಾಡಿತು. ಜೊತೆಗೆ ಆಯಾ ಕ್ಷೇತ್ರಗಳ ಶಾಸಕರ ಸಂಪೂರ್ಣ ಹಿಡಿತ ಸಾಧಿಸಿದ ಡಿ.ಕೆ.ಶಿವಕುಮಾರ್‌ ಉಪ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಂಡರು ಎಂಬುದನ್ನು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಉಗ್ರಪ್ಪ ಪುನರಾಯ್ಕೆ ಸುಲಭವೇ?

ಜಿಲ್ಲೆಯಲ್ಲಿ ಪ.ಜಾ, ಪ.ಪಂ, ವೀರಶೈವ ಲಿಂಗಾಯತರು ಹಾಗೂ ಕುರುಬರು ಬಹುಸಂಖ್ಯಾತರು. ಸೋಲು-ಗೆಲುವಿನ ನಿರ್ಧಾರಕ್ಕೆ ಇವರೇ ನಿರ್ಣಾಯಕರು. ಪ್ರತಿ ಚುನಾವಣೆಯಲ್ಲಿ ಆಯಾ ಪಕ್ಷದ ವರ್ಚಸ್ಸಿನ ನಾಯಕರ ಪ್ರಭಾವ ಕೆಲಸ ಮಾಡುತ್ತಿರುವುದು ಸಾಮಾನ್ಯ ಎನಿಸಿದ್ದು, ಕಳೆದ ಉಪ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ತಲೆಕೆಳಗಾಗಿಸಿತು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರಿಂದ ವಿ.ಎಸ್‌.ಉಗ್ರಪ್ಪ ಭಾರೀ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು. ಉಪ ಚುನಾವಣೆಯಲ್ಲಿ ಪ್ರಮುಖ ಸಮುದಾಯಗಳು ಕಾಂಗ್ರೆಸ್‌ ಪಕ್ಷದತ್ತ ಮನಸ್ಸು ಮಾಡಿದ್ದು, ಶ್ರೀರಾಮುಲು ಸಹೋದರಿ ಜೆ.ಶಾಂತಾ ಸೋಲುಣ್ಣಲು ಪ್ರಮುಖ ಕಾರಣ. ಆದರೆ, ಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಪರಿಸ್ಥಿತಿಯೇ ಭಿನ್ನವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಹಾಲಿ ಸಂಸದ ವಿ.ಎಸ್‌.ಉಗ್ರಪ್ಪರದ್ದು ಒಂಟಿ ಹೋರಾಟವಾಗುತ್ತದೆ. ಕಾಂಗ್ರೆಸ್‌ ನಾಯಕರ ಒಳ ಜಗಳಗಳಿಂದ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ. ಎಲ್ಲ ಕಡೆ ಚುನಾವಣೆಗಳು ನಡೆಯುವುದರಿಂದ ಡಿ.ಕೆ.ಶಿವಕುಮಾರ್‌ ಸೇರಿದಂತೆ ಯಾವ ನಾಯಕರು ಬಳ್ಳಾರಿ ಕಡೆ ಸುಳಿಯುವುದಿಲ್ಲ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಪರಾಭವಗೊಳಿಸುವುದು ಕಷ್ಟದ ಕೆಲಸವಲ್ಲ ಎಂಬ ಅಂದಾಜಿನಲ್ಲಿದೆ ಬಿಜೆಪಿ. ಉಪ ಚುನಾವಣೆಯಲ್ಲಿ ಗೆಲುವು ಪಡೆದ ಬಳಿಕ ಹೆಚ್ಚು ಉತ್ಸುಕವಾಗಿ ಓಡಾಡುತ್ತಿರುವ ಉಗ್ರಪ್ಪ ಅವರು ಮತ್ತೊಂದು ಸುತ್ತಿನ ಗೆಲುವಿಗಾಗಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಿದ್ದಾರೆ. ಬಿಜೆಪಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ತನ್ನದಾಗಿಸಿಕೊಳ್ಳುವ ಉತ್ಸುಕದಲ್ಲಿದೆ.

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಗಣಿ ರೆಡ್ಡಿ ಸ್ಪರ್ಧಿಸಲು ಆಗದು

ಈ ನಡುವೆ, ಮಾಜಿ ಸಚಿವ ಜನಾರ್ದನ ರೆಡ್ಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸಕ್ರಿಯರಾಗಲಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ. ಇದರಿಂದ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಕಮಲ ಪಾಳಯದಲ್ಲಿದೆ. ಮೀಸಲು ಕ್ಷೇತ್ರವಾಗಿರುವುದರಿಂದ ರೆಡ್ಡಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ಗೆಲುವಿಗೆ ಬೇಕಾದ ಪೂರಕ ವಾತಾವರಣ ನಿರ್ಮಿಸಲು ರೆಡ್ಡಿ ಸಮರ್ಥರು ಎಂಬುದನ್ನು ಅಲ್ಲಗಳೆಯಲಾಗದು.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

ಸಂಭಾವ್ಯರು

ಕಾಂಗ್ರೆಸ್‌: ಸಂಸದ ವಿ.ಎಸ್‌.ಉಗ್ರಪ್ಪ,

ಬಿಜೆಪಿ: ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ.

ಜೆಡಿಎಸ್‌: ಸದ್ಯಕ್ಕೆ ಆಕಾಂಕ್ಷಿಗಳು ಕಂಡುಬರುತ್ತಿಲ್ಲ

ಸೋನಿಯಾ, ಸುಷ್ಮಾ ಸ್ವರಾಜ್‌ ಜಿದ್ದಾಜಿದ್ದಿ ನಡೆದಿದ್ದ ಕ್ಷೇತ್ರ

1999ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್‌ ಅವರ ಸ್ಪರ್ಧೆಯಿಂದ ಬಳ್ಳಾರಿ ರಾಷ್ಟ್ರದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಗೆಲುವು ಪಡೆದ ಸೋನಿಯಾ ಗಾಂಧಿ ರಾಜೀನಾಮೆ ನೀಡಿ, ಅಮೇಥಿ ಕ್ಷೇತ್ರ ಉಳಿಸಿಕೊಂಡರು. ಸುಷ್ಮಾ ಸ್ವರಾಜ್‌ ಸ್ಪರ್ಧೆ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು. ಇದರ ಫಲಿತವಾಗಿಯೇ 2004ರಲ್ಲಿ ಜಿ.ಕರುಣಾಕರ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದರು. ಇದು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿಯ ಮೊದಲ ಗೆಲುವು ಎಂದು ದಾಖಲೆಯಾಯಿತು.

ಲೋಕಸಭಾ ಚುನಾವಣೆ: ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ ಬಾಗಲಕೋಟೆ

8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್‌

ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ಲೋಕಸಭಾ ಕ್ಷೇತ್ರಗಳು ಇದ್ದು, ಆ ಪೈಕಿ 6ರಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ. ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ, ಸಂಡೂರು ಕ್ಷೇತ್ರವನ್ನು ಕಾಂಗ್ರೆಸ್ಸಿಗರು ಪ್ರತಿನಿಧಿಸುತ್ತಿದ್ದಾರೆ. ಕೂಡ್ಲಿಗಿ ಹಾಗೂ ಬಳ್ಳಾರಿ ನಗರದಲ್ಲಿ ಬಿಜೆಪಿ ಶಾಸಕರು ಇದ್ದಾರೆ.

-ಕೆ.ಎಂ.ಮಂಜುನಾಥ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!