
ಶಿವಮೊಗ್ಗ (ಏ.13): ಚುನಾವಣೆಯಲ್ಲಿ ಗೆಲ್ಲಲು ಶ್ರೀರಾಮನನ್ನು ಬೀದಿಗೆ ತಂದ ಬಿಜೆಪಿಯವರಿಗೆ ರಾಮನ ಶಾಪ ಖಂಡಿತಾ ತಟ್ಟುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀರಾಮ ಎಲ್ಲರಿಗೂ ದೇವರೇ. ನಮಗೂ ಶ್ರೀರಾಮ ದೇವರು. ಆದರೆ, ಈ ಬಿಜೆಪಿಯವರು ಶ್ರೀರಾಮನ ಹೆಸರು ಹೇಳಿಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಸಂವಿಧಾನವೇ ಗೊತ್ತಿಲ್ಲ. ಭಾವನಾತ್ಮಕ ಸಂಬಂಧಗಳು, ಸರ್ಜಿಕಲ್ ಸ್ಟ್ರೈಕ್, ಪಾಕಿಸ್ತಾನದ ವಿಷಯ, ರಾಮನ ಜಪ, ಮುಂತಾದ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತಾರೆ ಎಂದು ಕುಟುಕಿದರು.
ದೆಹಲಿಯಲ್ಲಿ ಮುಷ್ಕರನಿರತರಾಗಿದ್ದ ರೈತರ ಮೇಲೆ ಡ್ರೋಣ್ ಮೂಲಕ ವಿಷದ ಗಾಳಿ ಬಿಡುತ್ತಾರೆ ಎಂದರೆ ಇವರ ಮನಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಸಂಕಷ್ಟವಾದರೂ ಕೇಂದ್ರಕ್ಕೆ ಕರುಣೆ ಬರಲಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನ ಕೇಳಲು ಕೋರ್ಟ್ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಠಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದರೂ ಇವರಿಗೆ ನಾಚಿಕೆ ಇಲ್ಲ ಎಂದು ಕಿಡಿಕಾರಿದರು.
ಈ ಚುನಾವಣೆ ಧರ್ಮಯುದ್ಧ ಅಲ್ಲ: ಸರ್ವಜ್ಞನ ವಚನದ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್
ಕರ್ನಾಟಕದ ಬಿಜೆಪಿ ಸಂಸದರು ರಾಜ್ಯದ ಪರಿಸ್ಥಿತಿ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಕೂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ 1.56 ಲಕ್ಷ ಕೋಟಿ ರೂ.ಗಳನ್ನು ನೀಡಿಲ್ಲ. ಇದಕ್ಕೆಲ್ಲ ಮತದಾರ ಚುನಾವಣೆಯಲ್ಲಿ ಉತ್ತರ ಕೊಡುತ್ತಾನೆ ಎಂದರು. ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕಕ್ಕೆ ಬಂದು ಮತ ಕೇಳುವ ಹಕ್ಕೂ ಇಲ್ಲ. ಬಿಜೆಪಿಯವರೇ 15 ಲಕ್ಷಕ್ಕೆ ಕಾದು ಕುಳಿತಿದ್ದಾರೆ. ಆದರೆ, ಆ ಹಣವೂ ಬಂದಿಲ್ಲ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿದ್ದು ಇದು ಬಡವರಿಗೆ ಅನುಕೂಲವಾಗಿದೆ ಎಂದು ಕುಟುಕಿದರು.
ಇನ್ನು, ಗೀತಾ ಅವರ ಬಗ್ಗೆ ಮಾತನಾಡುವ ಮೊದಲು ಕೆ.ಎಸ್.ಈಶ್ವರಪ್ಪನವರಿಗೆ ಮೊದಲು ಉತ್ತರ ಕೊಡಲಿ. ಈಶ್ವರಪ್ಪ ಅವರನ್ನು ನೋಡಿದರೆ ಕನಿಕರ ಬರುತ್ತದೆ. ಈ ಸ್ಥಿತಿಗೆ ಅವರನ್ನು ತರಬಾರದಿತ್ತು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಕಲೀಂ ಪಾಶಾ, ಶರತ್ ಮರಿಯಪ್ಪ, ಶಿವಕುಮಾರ್, ಆರಿಫ್, ಕಲಗೋಡು ರತ್ನಾಕರ್ ಮುಂತಾದವರಿದ್ದರು.
ಬಿಜೆಪಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಜೆಡಿಎಸ್ಗೆ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಏ.15ಕ್ಕೆ ಗೀತಾ ನಾಮಪತ್ರ ಸಲ್ಲಿಕೆ: ಏ.15 ರಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭ ಡಿಸಿಎಂ ಡಿ.ಕೆ.ಶಿವಕುಮಾರ್, ಬೈಂದೂರಿನ ಮಾಜಿ ಶಾಸಕ ಸುಕುಮಾರ ಶೆಟ್ಟಿ, ಗೋಪಾಲ ಪೂಜಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು, ಮುಖಂಡರು ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10.30 ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗಾಂಧಿ ಬಜಾರ್, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಸಾವಿರಾರು ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.