
ಬೆಂಗಳೂರು(ಏ.07): ನಟ ಕಿಚ್ಚ ಸುದೀಪ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನು ಬೆಂಬಲಿಸುತ್ತೇನೆ ಅನ್ನೋ ಘೋಷಣೆ ಹೊರಬಿದ್ದ ಬೆನ್ನಲ್ಲೇ ಪರ ವಿರೋಧಗಳು ಹೆಚ್ಚಾಗಿದೆ. ಸುದೀಪ್ ನಿರ್ಧಾರ ತಪ್ಪು ಎಂದು ಹಲವರು ಸರಣಿ ಟ್ವೀಟ್ ಮಾಡಿದ್ದಾರೆ. ಸುದೀಪ್ ತಮ್ಮನ್ನು ರಾಜಕೀಯ ಪಕ್ಷಕ್ಕೆ ಮಾರಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ ಬೆದರಿಕೆ ಪತ್ರಗಳು ಬಂದಿದೆ. ಇದೀಗ ಕಿಚ್ಚ ಸುದೀಪ್ ಅವರ ಚಿತ್ರಗಳ ಪ್ರಸಾರ, ಜಾಹೀರಾತುಗಳ ಪ್ರಸಾರಕ್ಕೆ ತಡೆ ಕೋರಬೇಕೆಂದು ಜೆಡಿಎಸ್, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಸುದೀಪ್ ಅವರ ಯಾವುದೇ ಚಿತ್ರ, ಜಾಹೀರಾತು, ಫೀಚರ್ ಫೀಲ್ಮ್ ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ.
ಕನ್ನಡದ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನೆಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರಲಿದೆ.ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ, ಚಲನಚಿತ್ರ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕು ಎಂದು ಜನತಾದಳ(ಜೆಡಿಎಸ್) ಕಾನೂನು ವಿಭಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಖಾಸಗಿ ವಿಡಿಯೋ ಲೀಕ್ ಮಾಡ್ತೀವಿ; ರಾಜಕೀಯಕ್ಕೆ ಕಾಲಿಡುವ ಮುನ್ನ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ
ಜೆಡಿಎಸ್ಗೂ ಮೊದಲು ಶಿವಮೊಗ್ಗದ ವಕೀಲ ಕೆಪಿ ಶ್ರೀಪಾಲ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಿಚ್ಚ ಸುದೀಪ್ ಬೆಜಿಪಿಗೆ ಬೆಂಬಲ ಘೋಷಿಸಿದ ದಿನವೇ ಶ್ರೀಪಾಲ, ಆಯೋಗಕ್ಕೆ ಪತ್ರ ಬರೆದಿದ್ದಾರೆ. ಕಿಚ್ಚ ಸುದೀಪ್ ರವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಅವರ ನಟನೆಯ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ, ಟಿವಿಗಳಲ್ಲಿ ಪ್ರದರ್ಶನವಾಗಬಾರದು. ಸುದೀಪ್ ನಡೆಸಿಕೊಡುವ ಟಿವಿ ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು ಎಂದು ಶ್ರೀಪಾಲ ದೂರಿನಲ್ಲಿ ಉಲ್ಲೇಖಿಸಿದ್ದರು.
ಸುದೀಪ್ ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುವುದಾಗಿ ಸ್ವತಃ ಸುದೀಪ್ ಘೋಷಿಸಿದ್ದಾರೆ. ಇದೀಗ ಸುದೀಪ್ ನಟನೆಯ ಚಲನ ಚಿತ್ರಗಳು, ಟಿವಿ ಶೋ ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಹೀಗಾಗಿ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು ಶ್ರೀಪಾಲ್ ಮನವಿ ಮಾಡಿದ್ದರು.
‘ಬೊಮ್ಮಾಯಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವುದರಿಂದ ಅವರನ್ನು ಪ್ರೀತಿಯಿಂದ ‘ಮಾಮ’ ಎಂದು ಕರೆಯುತ್ತೇನೆ. ತಪ್ಪು ತಿಳಿದುಕೊಳ್ಳಬೇಡಿ. ಅವರನ್ನು ಹಾಗೆಯೇ ಕರೆಯುತ್ತೇನೆ. ಚಿತ್ರರಂಗದ ಕಷ್ಟದಿನಗಳಲ್ಲಿ ನನ್ನ ಜತೆ ಕೆಲವೇ ಕೆಲವರು ನನ್ನ ಜತೆ ನಿಂತಿದ್ದು, ಅದರಲ್ಲಿ ಒಂದು ಮುಖ್ಯವಾದ ವ್ಯಕ್ತಿ ಪ್ರೀತಿಯ ಬಸವರಾಜ ಬೊಮ್ಮಾಯಿ ಮಾಮ. ಒಳ್ಳೆಯ ಪ್ರೀತಿಯಾದ ವ್ಯಕ್ತಿಗೆ ಚಿರುಋುಣಿ ಎಂದು ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಬಂದಿದ್ದು ಬೊಮ್ಮಸಂದ್ರದಿಂದ: ಮಾಜಿ ಕಾರು ಚಾಲಕನ ಮೇಲೆ ಶಂಕೆ
‘ನಿಮ್ಮ ಪರ ನಿಂತುಕೊಳ್ಳುತ್ತೇನೆ ಎಂದು ಹೇಳಲು ಇಂದು ಇಲ್ಲಿಗೆ ಬಂದೆ. ನಾವು ಬೆಳೆದು ಬಂದ ಹಾದಿಯಲ್ಲಿ ಗಾಡ್ ಫಾದರ್ ಪ್ರತಿಯೊಂದು ವಿಚಾರದಲ್ಲಿ ಇರುತ್ತಾರೆ. ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಗಾಡ್ ಫಾದರ್ ಇರಲಿಲ್ಲ. ಗಾಡ್ ಆ್ಯಂಡ್ ಫಾದರ್ ಇದ್ದರು. ಕೆಲವರು ಪ್ರೀತಿಗಾಗಿ ನಿಂತಿದ್ದರು. ‘ಮಾಮ’ ಅವರು ಆಗ ರಾಜಕೀಯ ಎಂಟ್ರಿ ಕೊಡುತ್ತಿದ್ದರು. ಅವಾಗಿನಿಂದ ಪರಿಚಯ. ಅವರ ವ್ಯಕ್ತಿತ್ವಕ್ಕೆ ತಲೆ ಬಾಗುತ್ತೇನೆ ಎಂದು ಸುದೀಪ್ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.