Karnataka Election Result 2023: ತಾವರೆ ಮುದುಡಲು ಧರ್ಮ ರಾಜ'ಕಾರಣ'ವಾಯ್ತೆ?

Published : May 16, 2023, 01:54 PM IST
Karnataka Election Result 2023: ತಾವರೆ ಮುದುಡಲು ಧರ್ಮ ರಾಜ'ಕಾರಣ'ವಾಯ್ತೆ?

ಸಾರಾಂಶ

ಸುಭಾಸ ಗುತ್ತೇದಾರ್‌ ತಾವಾಯ್ತು, ಜನಸೇವೆಯಾಯ್ತೆಂದು ಇದ್ದವರು 2023ರ ಚುನಾವಣೆಯಲ್ಲಿ ರಾಜಕಾರಣದಲ್ಲಿ ಧರ್ಮ ಎಳೆದು ತಂದದ್ದೇ ಮುಳುವಾಯ್ತೆ? ಲಾಡ್ಲೇ ಮಶಾಕ್‌ ದರ್ಗಾ ಉರುಸ್‌, ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿವಾದವೇ ಗುತ್ತೇದಾರ್‌, ಬಿಜೆಪಿ ವೋಟ್‌ ಬ್ಯಾಂಕ್‌ ನಷ್ಟವಾಗುವಂತೆ ಮಾಡಿತೆ?   

ಕಲಬುರಗಿ/ಆಳಂದ(ಮೇ.16):  ಬಿಜೆಪಿ ಹಾಲಿ ಶಾಸಕರಿದ್ದ ಆಳಂದ ಈ ಬಾರಿ ಕೈವಶವಾಗಿದೆ. ಕಳೆದ 3 ವರ್ಷದಿಂದ ಆಳಂದದಲ್ಲಿ ಲಾಡ್ಲೇ ಮಶಾಕ್‌ ಉರುಸ್‌, ದರ್ಗಾ ಅಂಗಳದಲ್ಲಿರುವ ಶಿವಲಿಂಗ ಪೂಜೆಯ ವಿವಾದವೇ ಬಹುದೊಡ್ಡ ಸದ್ದು ಮಾಡಿತ್ತು. ಕೋಮು ಗಲಭೆಗೂ ಕಾರಣವಾಗಿತ್ತು. ಇದೊಂದು ಚುನಾವಣೆ ಸರಕಾಗಿ ಮಾರ್ಪಡುವ ಎಲ್ಲ ಲಕ್ಷಣಗಳು ಗೋಚರಿಸಿದ್ದವು. ಆದರೆ ಚುನಾವಣೆಯಲ್ಲಿ ಈ ವಿಚಾರ ಬಹುದೊಡ್ಡ ಸರಕನ್ನಾಗಿಸಲು ಕಾಂಗ್ರೆಸ್‌ಗಿಂತ ಬಿಜೆಪಿ ಹರಸಾಹ ಪಟ್ಟಿತಾದರೂ ವಿನಾಕಾರಣ ವಿವಾದದ ಜೊತೆ ಗಂಟು ಬೀಳುವುದರೊಂದಿಗೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡಂತಾಯ್ತು ಇಲ್ಲಿ ಬಿಜೆಪಿಯವರ ಪರಿಸ್ಥಿತಿ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ.

ಯಾವುದನ್ನ ಜನತೆ ಆಯಾ ಸಂದರ್ಭಕ್ಕೆ ತಕ್ಕಂತೆ ನಡೆದ ಬೆಳವಣಿಗೆ ಎಂದು ಮರೆತು ಬಿಟ್ಟಿದ್ದರೋ ಅದೇ ವಿಚಾರವನ್ನ ಬಹು ದೊಡ್ಡದಾಗಿ ಮಾಡಿಕೊಂಡು ಬಿಜೆಪಿ ಚುನಾವಣೆ ಅಖಾಡದಲ್ಲಿ ಇಳಿದದ್ದೇ ಇಲ್ಲಿ ಕಮಲ ಮುದುಡಲು ಕಾರಣವಾಯ್ತು ಎನ್ನಬಹುದು. ಉರುಸ್‌, ಶಿವಲಿಂಗ ಪೂಜೆಯ ವಿಚಾರ ಶಿವರಾತ್ರಿ ದಿನಕ್ಕೇ ಮಾತ್ರ ಸೀಮಿತಗೊಳಿಸಿ ಆಳಂದ ಜನತೆ ಮರೆತಿದ್ದರೂ ಅದನ್ನು ತಾನು ಮರೆತಿಲ್ಲ ಎಂಬಂತೆ ಇಲ್ಲಿನ ಬಿಜೆಪಿ ಸಂಘಟನೆ, ಹಾಲಿ ಶಾಸಕ ಸುಭಾಸ ಗುತ್ತೇದಾರ್‌ ಅದನ್ನು ಪದೇ ಪದೇ ಚರ್ಚೆಯ ಮುನ್ನೆಲೆಗೆ ತಂದಿದ್ದೇ ಅವರೊಂದಿಗೆ ಸದಾಕಾಲ ಇರುತ್ತಿದ್ದ ಅಲ್ಪಸಂಖ್ಯಾತರು ಸೇರಿದಂತೆ ಆಳಂದದ ಸಣ್ಣ ಸಣ್ಣ ವರ್ಗದ ಮತಗಳೇ ದೂರ ಸರಿದವು ಎಂಬ ಮಾತು ಕಳಿಬರುತ್ತಿವೆ.

ಕಲ್ಯಾಣ ಕರ್ನಾಟಕದಲ್ಲಿ ಸೋಲುಂಡ 20 ಹಾಲಿ ಶಾಸಕರು; ಬಿಜೆಪಿಯದ್ದೇ ಸಿಂಹಪಾಲು!

ಸುಭಾಷ ಗುತ್ತೇದಾರವರು ಅಧಿಕಾರ ಇರಲಿ ಇಲ್ಲದಿರಲಿ, ತಾವು ಹೇಗೆ ಇದ್ದರೂ ಸರಿ, ಎಲ್ಲೇ ಇದ್ದಾಗಲೂ ತಾನಾಯಿತು, ಜನಪರ ಸೇವೆಯಾಯಿತು ಎಂದುಕೊಂಡಿದ್ದವರು ಇದೇ ಮೊದಲು ಬಾರಿಗೆ ತಮ್ಮ ರಾಜಕಾರಣದಲ್ಲಿ ಧರ್ಮರಾಜಕಾರಣಕ್ಕೆ ಎಳೆದು ತರುವ ಪ್ರಯತ್ನ ತುಂಬ ಗಂಭೀರವಾಗಿ ಮಾಡಿದಕು, ರಾಜಕಾರಣದಲ್ಲಿ ಧರ್ಮ ಎಳೆ ತಂದಿದ್ದೇ ತಡ ತಮಗಿದ್ದು ವೋಟ್‌ಬ್ಯಾಂಕ್‌ನ್ನೇ ನಷ್ಟಮಾಡಿಕೊಂಡಿದ್ದು ಅವರ ಸೋಲಿಗೆ ಈ ಬೆಳವಣಿಗೆ ಪ್ರಮುಖ ಕಾರಣವಾಗಿದೆ ಎಂದು ಆಳಂದದ ಜನತೆ ವಿಶ್ಲೇಷಿಸುತ್ತಿದ್ದಾರೆ.

ಆಳಂದ ಧರ್ಮ ನಿರಪೇಕ್ಷತೆಗೆ ಹೆಸರಾದ ಅಸೆಂಬ್ಲಿ ಅಖಾಡ. ಆದಾಗ್ಯೂ ಕ್ಷೇತ್ರದಲ್ಲಿ ಧರ್ಮ ಮತ್ತು ಜಾತಿ, ಪಕ್ಷ ರಾಜಕಾರಣಕ್ಕೆ ಒತ್ತು ನೀಡದೆ ಅಭಿವೃದ್ಧಿ ಪರ ರಾಜಕಾರಣಕ್ಕೆ ಒಲವು ತೋರುತ್ತಿದ್ದ ಮತದಾರರ ಮುಂದೆ ಧರ್ಮ ರಾಜಕಾರಣದ ವಿವಾದ ಧುತ್ತನೆ ಬಂದು ನಿಂತಾಗ ಅವರು ಗೊಂದಲಕ್ಕೆ ಸಿಲುಕಿದ್ದು ಸ್ಪಷ್ಟ. ಆದಾಗ್ಯೂ ತಮ್ಮ ಆಯ್ಕೆ ಆವುದೆಂದು ಈ ಚುನಾವಣೆಯಲಲ್ಲಿ ಫಲಿತಾಂಶ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಧರ್ಮಕಾರಣಕ್ಕೆ ಮುಂದಾದ ಗುತ್ತೇದಾರರ ಸಖ್ಯ ತೊರೆದು, ಸಚ್ಚಾರಿತ್ಯ್ರದ ವ್ಯಕ್ತಿತ್ವ ಹಾಗೂ ಅಭಿವೃದ್ಧಿಗೆ ತಮ್ಮ ಸದಾಕಾಲ ಬೆಂಬಲ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಯಲ್ಲಿ ಬಿಜೆಪಿ ಪರ ಬ್ಯಾಟಿಂಗ್‌ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ರಾಘವ ಚೈತನ್ಯ ಲಿಂಗದ ಕುರಿತಾದ ನಿಲುವಿಗೆ ಮತದಾರ ಸ್ಪಂದಿಸಿದ್ದು ಅಷ್ಟಕ್ಕಷ್ಟೆ. ಕಾಂಗ್ರೆಸ್‌ಗೆ ಜೈ ಎನ್ನುವ ಮೂಲಕ ಮತದಾರರು ತಾವು ಸಾಮರಸ್ಯದ ಪರವಾಗಿರೋದನ್ನ ಸಾಬೀತು ಮಾಡಿದ್ದಾರೆಂಬ ಚರ್ಚೆಗಳೂ ಇಲ್ಲಿ ಸಾಗಿವೆ.

ಚುನಾವಣೆಯಲ್ಲಿ ಪ್ರಮುಖವಾಗಿ ಅಭಿವೃದ್ಧಿಪರ ವಿಚಾರಗಳ ಚರ್ಚೆಗಿಂತ ಇಲ್ಲಿನ ರಾಘವ ಚೈತನ್ಯ ಲಿಂಗ ಹಾಗೂ ಹಿಂದುತ್ವದ ಆಧಾರದ ಮೇಲೆ ಮತಯಾಚನೆ ನಡೆಸಿದ ಬಿಜೆಪಿ ಮತ್ತು ಪರಿವಾರದವರು ತಮ್ಮ ಗೆಲುವು ನಿಶ್ಚಿತ ಎಂದು ಮಾಡಿದ್ದ ಲೆಕ್ಕಾಚಾರ ಮತದಾರ ಬುಡಮೇಲು ಮಾಡಿದ್ದಾನೆ. ಗೆಲವು ನಿಶ್ವಿತವೆಂದು ಹಾಕಿಕೊಂಡಿದ್ದದ ಲೆಕ್ಕಾಚಾರವೆಲ್ಲ ಈ ಚನಾವಣೆಯಲ್ಲಿ ಉಲ್ಟಾಹೊಡೆದಿದೆ. ಧರ್ಮ ಕಾರಣ, ರಾಜಕಾರಣದಲ್ಲಿ ನಡೆಯೋದಿಲ್ಲವೆಂಬ ಸಂದೇಶ ಆಳಂದದಿಂದ ರವಾನೆಯಾಗಿದೆ.

Afzalpur Election Result 2023: ಅಣ್ತಮ್ಮರ ಜಗಳದಿಂದ ಕಾಂಗ್ರೆಸ್‌ಗೆ ಲಾಭ..!

ಚುನಾವಣೆಯಲ್ಲಿ ಬಿ.ಆರ್‌. ಪಾಟೀಲರ ಮೇಲೆ ಕೇಸರಿ ಪಡೆ ಹಿಂದು ವಿರೇಧಿ ಎಂಬ ಆರೋಪ ಹೊರಿಸಲು ಯತ್ನಿಸಿತ್ತಾದರೂ ಅದು ಎಲ್ಲಿಯೂ ಕೈಗೂಡಲಿಲ್ಲ. ಮತದಾರ ಅದನ್ನೊಪ್ಪದೆ ಮತದಾರರು ಪಾಟೀಲರ ಪರ ಗೆಲುವಿನ ತೀರ್ಪು ನೀಡಿದ್ದು ಅಲ್ಲದೆ, ಇದೇ ಮೊದಲು ಬಾರಿಗೆ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅದೇ ಪಕ್ಷದ ಅಭ್ಯರ್ಥಿಯನ್ನು ಸಹ ಆಯ್ಕೆ ಮಾಡಿ ಆಳಂದ ಪ್ರಗತಿಗೆ ಪೂರಕವಾಗಿ ನಿಂತಂತಾಗಿದೆ. ಸೌಹಾರ್ದತೆಗೆ ಹೆಸರಾಗಿದ್ದ ಕ್ಷೇತ್ರದಲ್ಲಿ ಕದಡಿದ ಸೌಹಾರ್ದತೆಯನ್ನು ಮತದಾರರು ಪುನರ್‌ ಸ್ಥಾಪನೆಗೆ ಈ ಫಲಿತಾಂಶ ಸಹಕಾರಿಯಾಗಲಿದೆ ಎಂದೂ ಅನೇಕರು ಹೇಳುತ್ತಿದ್ದಾರೆ.

ಆಳಂದದಲ್ಲಿ ಈ ಬಾರಿ ಮತದಾರರು ಭಾವೈಕ್ಯತೆ, ಸಾಮರಸ್ಯಕ್ಕೆ ಜೈ ಎಂದಿದ್ದಾರೆ. ಕೋಮು ಭಾವನೆ ಕೆರಳಿಸಿ ಚುನಾವಮೆ ಗೆಲ್ಲಲಾಗದು ಎಂಬುದಕ್ಕೆ ಆಳಂದದ ಬೆಳವಣಿಗೆ ಉತ್ತಮ ಉದಾಹರಣೆಯಾಗಿದೆ. ನೀರಾವರಿ, ಅಂತರ್ಜಲ, ಆರೋಗ್ಯ, ಶಿಕ್ಷಣ ರಂಗದಲ್ಲಿ ಉತ್ತಮ ಕೆಲಸಗಳಿಗೆ ಮತದಾರ ಪಾಟೀಲನ್ನು ಆರಿಸಿ ತಮ್ಮ ಆದ್ಯತೆ ತಿಳಿಸಿದ್ದಾನೆ ಅಂತ ಆಳಂದ ಕಾಂಗ್ರೆಸ್‌ ವಕ್ತಾರ ಗಣೇಶ ಪಾಟೀಲ್‌ ಹೇಳಿದ್ದಾರೆ. 

ಆಳಂದ ಮತಕ್ಷೇತ್ರ ಸದಾಕಾಲ ಶಾಂತಿ, ಸಹಬಾಳ್ವೆಯ ಪ್ರದೇಶ. ಲಾಡ್ಲೇ ಮಶಾಕ್‌, ರಾಘವ ಚೈತನ್ಯರು ಅದನ್ನೇ ಲ್ಲಿ ಸಾರಿ ಓಹಹಿದ್ದಾರೆ. ಈ ಮಹನೀಯರ ಹೆಸರಲ್ಲೇ ವಿವಾದ ಹುಟ್ಟು ಹಾಕಿ ಸಾಮರಸ್ಯ ಕದಡಬೇಕು ಎಂದು ಇದ್ದಂತಹ ಬಿಜೆಪಿ, ಮತ್ತದರ ಪರಿವರಾದ ಸಂಘಟನೆಗಳವರ ಹುನ್ನಾರ ಮತದಾರರು ಹುಸಿ ಮಾಡಿದ್ದಾರೆ. ಆಳಂದ ಮತದಾರ ಅಭಿವದ್ಧಿಗೆ ಜೈ ಎಂದಿದ್ದಾನೆ ಎಂಬುದಕ್ಕೆ ಫಲಿತಾಂಶವೇ ಕನ್ನಡಿ ಅಂತ ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಪಾಟೀಲ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್