
ಹಿರಿಯೂರು (ಜೂ.04): ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿ ಮಾಡಿರುವ ಐದು ಗ್ಯಾರಂಟಿಗಳು ದೇಶದಲ್ಲಿಯೇ ಕ್ರಾಂತಿಕಾರಕ ಹೆಜ್ಜೆಯೆಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಹೇಳಿದರು. ಸಚಿವರಾದ ಮೇಲೆ ಮೊದಲ ಬಾರಿಗೆ ಹಿರಿಯೂರು ನಗರಕ್ಕೆ ಶನಿವಾರ ಆಗಮಿಸಿದ ಅವರು ಅಭಿಮಾನಿಗಳು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡುವುದೇ ನನ್ನ ಗುರಿ ಎಂದರು. ಅಧಿಕಾರಕ್ಕೆ ಬಂದ ಕೇವಲ ಒಂದೇ ವಾರದಲ್ಲಿ ಕೊಟ್ಟಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಬಿಜೆಪಿಯವರ ಅನುಮಾನಗಳಿಗೆ ಉತ್ತರ ಕೊಟ್ಟಿದ್ದೇವೆ. ಅಸಾಧ್ಯ ಎನ್ನುತ್ತಿದ್ದ ಗ್ಯಾರಂಟಿಗಳನ್ನು ಜಾರಿ ಮಾಡಿ ಐತಿಹಾಸಿಕ ದಾಖಲೆ ಬರೆದಿದ್ದೇವೆ.
ಸುಮಾರು 60 ಸಾವಿರ ಕೋಟಿಯ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು ರಾಜ್ಯದ ಜನರಿಗೆ ಅರ್ಪಿಸಿದ್ದೇವೆ. ಇದೇ ತಿಂಗಳ 11 ರಂದು ಉಚಿತ ಬಸ್ ಪ್ರಯಾಣ, ಜುಲೈ 1ರಂದು ಅನ್ನಭಾಗ್ಯ, ಆಗಸ್ವ್ 15ರಂದು ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್, ಯುವನಿಧಿ ಜಾರಿಯಾಗಲಿವೆ ಎಂದರು. ಜಿಲ್ಲೆಯ ಎಲ್ಲಾ ಶಾಸಕರು ಕೂತು ಚರ್ಚಿಸಿದ್ದೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಈ ಎಲ್ಲಾ ಉಚಿತ ಯೋಜನೆಗಳನ್ನು ನೀಡಿದರೆ ದಿವಾಳಿಯಾಗಬೇಕಾಗುತ್ತದೆ ಎಂದು ವಿರೋಧಿಗಳು ಹೇಳುತ್ತಾರೆ. ಆದರೆ ಇವು ಯಾವನ್ನೂ ನೀಡದೇ ಬಿಜೆಪಿಗರು ರಾಜ್ಯವನ್ನು ದಿವಾಳಿ ಎಬ್ಬಿಸಿದ್ದಾರೆ. ಜನರಿಗೆ ಉಪಯೋಗ, ಅನುಕೂಲ ಮಾಡುವುದೇ ವಿರೋಧಿಗಳಿಗೆ ಇಷ್ಟವಾಗುತ್ತಿಲ್ಲವೆಂದರು.
ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು: ಶಾಸಕ ವೆಂಕಟಶಿವಾರೆಡ್ಡಿ
ಉಸ್ತುವಾರಿ ವಿಚಾರ ಸಿಎಂ ಬಿಟ್ಟಿದ್ದು: ಜಿಲ್ಲಾ ಉಸ್ತುವಾರಿ ಸಚಿವರು ಯಾರು ಆಗಬೇಕೆಂಬುದರ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ತಾಲೂಕಿನಲ್ಲಿ ರಸ್ತೆ ಅಗಲೀಕರಣಕ್ಕೆ 2018ರಲ್ಲೇ ವರ್ತಕರನ್ನು ಒಪ್ಪಿಸಿ ಎಲ್ಲದನ್ನೂ ಒಂದು ಹಂತಕ್ಕೆ ತಂದಿದ್ದೆ. 34 ಕೋಟಿ ಅನುದಾನವಿತ್ತು. ಆದರೆ ಆಮೇಲೇನಾಯಿತು ಎಂದು ನಿಮಗೇ ಗೊತ್ತು. ಅಪ್ಪರ್ ಭದ್ರಾ ವಿಚಾರದಲ್ಲಿ ಸಂಬಂಧಪಟ್ಟಸಚಿವರನ್ನು ಭೇಟಿ ಮಾಡಿಸಿ ಸ್ಥಗಿತಗೊಂಡಿರುವ ಕೆಲಸಕ್ಕೆ ಚಾಲನೆ ನೀಡಿ, ವೇಗ ನೀಡಬೇಕು. ಜಿಲ್ಲೆಯಲ್ಲಿನ ಮೆಡಿಕಲ ಕಾಲೇಜಿಗೆ ಶಂಕು ಸ್ಥಾಪನೆ ನೆರವೇರಿಸಿ ಶೀಘ್ರವಾಗಿ ಕಾಲೇಜ… ತೆರೆಯಬೇಕು. ಎಲ್ಲಾ ಅಕ್ರಮ ದಂಧೆಗಳಿಗೂ ಕಡಿವಾಣ ಹಾಕಿ ಶಾಂತಿ ಮತ್ತು ನೆಮ್ಮದಿಯಿಂದ ಜನ ಬದುಕುವಂತಾಗಬೇಕು. ಇದೆಲ್ಲದರ ಜೊತೆಗೆ ತಾಲೂಕಿಗೆ ಯಾವುದಾದರೂ ವಿಶೇಷ ಯೋಜನೆಗಳನ್ನು ತರಲು ಪ್ರಯತ್ನಿಸುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.
ಕೇಂದ್ರದ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ: ಸಂಸದ ಮುನಿಸ್ವಾಮಿ
ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯರಾದ ಗೀತಾ ನಾಗಕುಮಾರ್, ನಾಗೇಂದ್ರ ನಾಯ್ಕ, ನಗರಸಭೆ ಸದಸ್ಯರಾದ ಅಜಯಕುಮಾರ್, ಸುರೇಖಾ ಮಣಿ, ವಿಠ್ಠಲ ಪಾಂಡುರಂಗ, ಅನಿಲ ಕುಮಾರ್, ಮುಖಂಡರಾದ ಸುರೇಶ ಬಾಬು, ಶಿವರಂಜಿನಿ, ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಟ್ಟಿಹರೀಶ್, ಗೌರೀಶ್ ನಾಯಕ, ರಾಕ್ ಮಂಜುನಾಥ್, ಯಲ್ಲದಕೆರೆ ಮಂಜುನಾಥ್, ರಜಿಯಾ ಸುಲ್ತಾನ್ , ಗುರುಪ್ರಸಾದ್, ರತ್ನಮ್ಮ, ಕವಿತಾ ಮುಂತಾದವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.