ಸಂಸತ್‌ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್‌.ವಿಶ್ವನಾಥ್‌ ಆರೋಪ

By Kannadaprabha NewsFirst Published Jun 3, 2023, 11:41 PM IST
Highlights

ನೂತನ ಸಂಸತ್‌ ಭವನ ಉದ್ಘಾಟನಾ ಸಮಾರಂಭವು ಪ್ರಧಾನಿ ನರೇಂದ್ರಮೋದಿ ಅವರ ಪಟ್ಟಾಭಿಷೇಕದಂತೆ ನಡೆದಿದ್ದು, ಅಂಬೇಡ್ಕರ್‌ ಮತ್ತು ರಾಷ್ಟ್ರಪತಿ ಅವರಿಗೆ ಅಪಮಾನ ಮಾಡಿದಂತಿತ್ತು ಎಂದು ವಿಪ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದರು. 

ಮೈಸೂರು (ಜೂ.03): ನೂತನ ಸಂಸತ್‌ ಭವನ ಉದ್ಘಾಟನಾ ಸಮಾರಂಭವು ಪ್ರಧಾನಿ ನರೇಂದ್ರ ಮೋದಿ ಅವರ ಪಟ್ಟಾಭಿಷೇಕದಂತೆ ನಡೆದಿದ್ದು, ಅಂಬೇಡ್ಕರ್‌ ಮತ್ತು ರಾಷ್ಟ್ರಪತಿ ಅವರಿಗೆ ಅಪಮಾನ ಮಾಡಿದಂತಿತ್ತು ಎಂದು ವಿಪ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದರು. ಮೇ 28ರಂದು ನಡೆದ ಸಂಸತ್‌ ಭವನದ ಉದ್ಘಾಟನಾ ಕಾರ್ಯಕ್ರಮ ಸಂವಿಧಾನವನ್ನು ಅಣಕಿಸಿದಂತಿದೆ. ಇದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದಿರುವುದು ನೋವು ತಂದಿದೆ. ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲ. ಅಂಬೇಡ್ಕರ್‌ ಅವರಿಗೂ ಗೌರವ ಕೊಡಲಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾರ್ಯಕ್ರಮವು ಕೇವಲ ನರೇಂದ್ರ ಮೋದಿ ಅವರ ಪಟ್ಟಾಭಿಷೇಕದಂತೆ ನಡೆದಿದೆ. ದೇಶದಲ್ಲಿ ಸಂಸತ್‌ ಭವನ ಇರಲೇ ಇಲ್ಲವೇನೋ, ಯಾರೂ ದೇಶಕ್ಕೆ ಏನು ಮಾಡಲಿಲ್ಲವೇನೋ, ನಾನಷ್ಟೇ ದೇಶದ ಸಂರಕ್ಷಕ ಎಂದು ಯುವಜನತೆಯಲ್ಲಿ ಭ್ರಮೆ ಬಿತ್ತುವ ಕೆಲಸವನ್ನು ಮೋದಿ ಮಾಡಿದರು. ಇದು ದೇಶದ 140 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಅವರು ಕಿಡಿಕಾರಿದರು. ಸಂಸತ್‌ನಲ್ಲಿ ಸ್ಥಾಪನೆ ಆಗಬೇಕಿರುವುದು ರಾಷ್ಟಲಾಂಛನ. ಆದರೆ ಪ್ರಧಾನಿ ಮೋದಿ ಧರ್ಮ ಲಾಂಛನ ಸ್ಥಾಪನೆ ಮಾಡಿದ್ದಾರೆ. ಇದರಿಂದ ಧರ್ಮ ನಿರಪೇಕ್ಷತೆಗೆ ಪೆಟ್ಟು ಬಿದ್ದಿದ್ದು ಸಂವಿಧಾನಕ್ಕೆ ಅಪಚಾರ ಆಗಿದೆ. 

ವಿಪಕ್ಷಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಿದೆ: ಶಾಸಕ ಗಣೇಶ್‌ ಪ್ರಸಾದ್‌

ಒಂದು ರೀತಿಯಲ್ಲಿ ಪುರೋಹಿತ ಶಾಹಿ ವ್ಯವಸ್ಥೆ ಮರು ಸ್ಥಾಪನೆ ಆಗಿದೆ. ಧರ್ಮದ ಬಗ್ಗೆ ಗೌರವ ಇದ್ದರೆ ನಿಮ್ಮ ಮನೆಯಲ್ಲಿಟ್ಟಕೊಳ್ಳಿ. ಸಂಸತ್‌ನಲ್ಲಿ ಅಲ್ಲ ಎಂದು ಏಕವಚನದಲ್ಲಿ ಅವರು ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಅವರು 9 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಸಂಸತ್‌ ಪ್ರವೇಶಿಸಿದಾಗ ತಲೆ ಬಗ್ಗಿ ನಮಸ್ಕರಿಸಿ, ದೇಶದ ಜನತೆಯ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಈಗ ಮಾಡುತ್ತಿರುವುದೇನು, ನೀವು ಹೇಳಿದ್ದೆಲ್ಲಾ ಸುಳ್ಳೇ, ಜನ ಈ ಬಗ್ಗೆ ಯೋಚಿಸಬೇಕು. ಇದರ ಬಗ್ಗೆ ಚರ್ಚೆ ಆಗಬೇಕು ಎಂದರು. ಅಲ್ಲದೆ, ರಾಷ್ಟಪತಿ ಮುರ್ಮು ಅವರನ್ನು ದೂರದಲ್ಲಿ ನಿಲ್ಲಿಸಿ ಅಸ್ಪೃಶ್ಯತೆ ಆಚರಿಸಲಾಗಿದೆ. 

ಇದು ಶೋಷಿತ, ಶ್ರಮಿಕ ವರ್ಗಗಳಿಗೆ ಮಾಡಿದ ಅವಮಾನ. ಇಂದೋರ್‌ನ ಮಹಾರಾಣಿ ಸಂಸತ್‌ ಭವನಕ್ಕೆ ಜಾಗ ಕೊಟ್ಟಿದ್ದರು. ಅವರ ಸ್ಮರಣೆಯನ್ನೂ ಮಾಡಲಿಲ್ಲ ಎಂದು ಅವರು ಕಿಡಿಕಾರಿದರು. ನೂತನ ಸಂಸತ್‌ ಭವನದಲ್ಲಿ 1200 ಜನಕ್ಕೆ ಅವಕಾಶ ನೀಡಲಾಗಿದೆ. 2029ರ ಸಂಸತ್‌ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ದಕ್ಷಿಣಕ್ಕೆ ಅಧಿಕಾರವಾಗಲಿ ಅರ್ಥವ್ಯವಸ್ಥೆಯಾಗಲಿ ಸಮಾಧಾನಕರವಾಗಿ ಆಗುವುದಿಲ್ಲ. ಜಿಎಸ್ಟಿಸರಿಯಾಗಿ ಹಂಚಿಕೆ ಆಗುತ್ತಿಲ್ಲ. 2014ರ ಚುನಾವಣೆಯೇ ಇನ್ನೂ ಆಗಿಲ್ಲ. ಆಗಲೇ 2029ರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ ಭಾರತಕ್ಕೆ ಹೆಚ್ಚು ಅಧಿಕಾರ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದರು.

ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಸಂಸತ್‌ನಲ್ಲಿ ರಾಜದಂಡ, ಹೊರಗೆ ಕುಸ್ತಿಪಟುಗಳಿಗೆ ಪೊಲೀಸರ ದಂಡ. ಮಹಿಳಾ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗೆಗೆ ಎಸೆಯಲು ಮುಂದಾಗಿದ್ದಾರೆ ಎಂದರೆ ಅವರಿಗೆ ಎಷ್ಟುನೋವಾಗಿರಬೇಡ. ಅವರ ಕಣ್ಣೀರು ಮೋದಿಯನ್ನು ಸುಮ್ಮನೆ ಬಿಡುವುದಿಲ್ಲ. ಸುದ್ದಿಗೋಷ್ಠಿಯಲ್ಲಿ ರೇವಣ್ಣ ಸೇರಿದಂತೆ ಹಲವರು ಇದ್ದರು.

click me!