
ಬೆಳಗಾವಿ (ಫೆ.8) : ಗೋಕಾಕ ನಗರ ಸೇರಿದಂತೆ ತಾಲೂಕಿನಲ್ಲಿ ಉಸಿರುಗಟ್ಟುವ ವಾತಾವರಣವಿದೆ. ದುಡ್ಡು ಕೊಡದಿದ್ದರೆ ಯಾವುದೇ ಕೆಲಸ ಆಗುವುದೇ ಇಲ್ಲ. ಈ ವಸೂಲಿ ದಂಧೆಯ ಹಿಂದಿನ ಸೂತ್ರಧಾರಿ ಎಂಎಲ್ಸಿ ಲಖನ್ ಜಾರಕಿಹೊಳಿ ಎಂದು ಗೋಕಾಕ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಬಗ್ಗೆ ಹೊಸ ವ್ಯಾಖ್ಯಾನ ಮಾಡಿರುವ ಲಖನ್ ಜಾರಕಿಹೊಳಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಲಖನ್ ಇಂತಹ ಆಪಾದನೆ ಮಾಡುವುದನ್ನು ಬಿಡಬೇಕು. ಬೇರೆಯವರ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
Chikkamagaluru: ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಜವಾಬ್ದಾರಿಯುತ ಸ್ಥಾನದಲ್ಲಿರುವ ರಮೇಶ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದಿಸುವುದು ಅವರಿಗೆ ಶೋಭೆ ತರುವ ವಿಚಾರವಲ್ಲ. ಸ್ವಯಂ ದಿಗ್ಬಂಧನ ಹಾಕಿಕೊಳ್ಳುವಂತೆ ಹೇಳಿದ್ದರೂ ರಮೇಶ ಅದನ್ನೇ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವರ ಮೂಲಕ ರಮೇಶ ಜಾರಕಿಹೊಳಿ ಒತ್ತಾಯಿಸುತ್ತಿದ್ದಾರೆ. ಈ ಘಟನೆ ಆಗಿ ಎರಡು ವರ್ಷವಾಗುತ್ತ ಬಂದಿದೆ. ಘಟನೆ ಆದಾಗ ಸಂತ್ರಸ್ತ ಯುವತಿ ಸಂಬಂಧಪಟ್ಟಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ವೇಳೆಯೇ ರಮೇಶ ಕೂಡ ಷಡ್ಯಂತ್ರ ಪ್ರಕರಣ ದಾಖಲಿಸಿದ್ದರು. ಸಿಡಿ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವೇಳೆಯೇ ಸಿಬಿಐ ತನಿಖೆಗೆ ಒತ್ತಾಯಿಸಬೇಕಿತ್ತು. ಎಸ್ಐಟಿ ತನಿಖೆ ನಡೆಸಿ, ರಮೇಶ ಜಾರಕಿಹೊಳಿ ಕಳಂಕಿತರಲ್ಲ ಎಂದು ಬಿ ರಿಪೋರ್ಚ್ ನೀಡಿದೆ. ಒಂದು ಹಂತದಲ್ಲಿ ಪ್ರಕರಣ ಮುಗಿದಿದೆ. ಈಗ ಸಿಬಿಐ ತನಿಖೆಗೆ ವಹಿಸಬೇಕು ಒತ್ತಾಯಿಸಿರುವುದು ನೋಡಿದರೆ ಜನರ ಮನಸನ್ನು ಡೈವರ್ಚ್ ಮಾಡುತ್ತಿದ್ದಾರೆ ಎಂದರು.
ಪಕ್ಷದ ತೀರ್ಮಾನಕ್ಕೆ ಬದ್ಧ:
ವಿಧಾನಸಭೆ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ಕಾಂಗ್ರೆಸ್ ಲಕ್ಷೀ ಹೆಬ್ಬಾಳಕರ ಸೇರಿದಂತೆ ಯಾರಿಗೆ ಆಗಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ನಿರ್ಣಯಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇನೆ ಎಂದ ಪೂಜಾರಿ, ಪಂಚಮಸಾಲಿ ಹೋರಾಟಕ್ಕೆ ವೀರಶೈವ ಲಿಂಗಾಯತ ಸಮುದಾಯದ ಬೆಂಬಲವಿದೆ. ಪಂಚಮಸಾಲಿ ಹೋರಾಟ ರಾಜಕೀಯ ಹೋರಾಟವಲ್ಲ. ಎಂಎಲ್ಎ ಇಲ್ಲವೇ ಎಂಎಲ್ಸಿ ಬೆಂಬಲಿಸಬೇಕೆಂಬ ಹೋರಾಟವಲ್ಲ ಎಂದು ಹೇಳಿದರು.
ಆಡಿಯೋ ಎಡಿಟ್ ಬಗ್ಗೆ ಸ್ಪಷ್ಟನೆ ಕೊಡಲಿ:
ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ನಾನು ಮಾತನಾಡಿದ ಆಡಿಯೋ ಎಡಿಟ್ ಮಾಡಿ ಸಿಡಿ ಬಿಡುಗಡೆ ಮಾಡಲು ಷಡ್ಯಂತ್ರ ರೂಪಿಸಲಾಗಿದೆ. ಈ ಸಿಡಿ ಹೊರಗೆ ಬಂದರೆ ಜಾತಿ ಸಂಘರ್ಷವಾಗುತ್ತದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರು ಏನು ಮಾತನಾಡಿದ್ದಾರೆ, ಯಾವಾಗ ಮಾತನಾಡಿದ್ದಾರೆ, ಯಾರಿಗೆ ಮಾತನಾಡಿದ್ದಾರೆ. ಬಾಯಿ ತಪ್ಪಿ ಮಾತನಾಡಿದ್ದೇನೆ ಎಂದು ಹೇಳುತ್ತಿರುವುದು ಅವರ ಮನಸಿನಲ್ಲಿ ಅಪರಾಧ ಭಾವನೆ ಇರಬಹುದು. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪೂಜಾರಿ ಅವರು ರಮೇಶ ಜಾರಕಿಹೊಳಿ ಅವರನ್ನು ಆಗ್ರಹಿಸಿದರು.
ಸಿಬಿಐಗೆ ಸಿಡಿ ಕೇಸ್: ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ರಮೇಶ್ ಜಾರಕಿಹೊಳಿ
ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೇ ಸಕ್ಕರೆ ಕಾರ್ಖಾನೆಯ ಅವ್ಯವಹಾರದ ಆರೋಪ ಕೇಳಿಬಂದಿದೆ. ಸೌಭಾಗ್ಯ ಲಕ್ಷ್ಮೇ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಮಾಡಲು ನೂರಾರು ಕೋಟಿ ಸಾಲ ಪಡೆದಿದ್ದರೂ ವಾಸ್ತವವಾಗಿ ಅಲ್ಲಿ ಎಥೆನಾಲ್ ಘಟಕವನ್ನೇ ನಿರ್ಮಿಸಿಲ್ಲ ಎಂದು ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಆರೋಪಿಸಿದ್ದಾರೆ. ಆದರೆ, ರಮೇಶ ಜಾರಕಿಹೊಳಿ ಈವರೆಗೆ ಈ ಕುರಿತು ಸ್ಪಷ್ಟನೆ ನೀಡಿಲ್ಲ. ಇದು ಮೌನಂ ಸಮ್ಮತಿ ಲಕ್ಷಣಂ ಎಂಬ ಭಾವನೆ ಜನರಲ್ಲಿ ಬಂದಿದೆ. ಕೂಡಲೇ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಅಶೋಕ ಪೂಜಾರಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.