ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

By Kannadaprabha NewsFirst Published Jan 19, 2023, 10:31 AM IST
Highlights

ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಂತ್ರಿ ಮಾಡುತ್ತಾರೋ ಇಲ್ಲವೋ ಸಿಎಂ ಅವರಿಗೆ, ವರಿಷ್ಠರಿಗೆ ಬಿಟ್ಟವಿಷಯ. ವರಿಷ್ಠರು ಏನು ಆದೇಶ ಕೊಡುತ್ತಾರೆ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. 

ಬೆಳಗಾವಿ (ಜ.19): ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಂತ್ರಿ ಮಾಡುತ್ತಾರೋ ಇಲ್ಲವೋ ಸಿಎಂ ಅವರಿಗೆ, ವರಿಷ್ಠರಿಗೆ ಬಿಟ್ಟವಿಷಯ. ವರಿಷ್ಠರು ಏನು ಆದೇಶ ಕೊಡುತ್ತಾರೆ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲೇ ಉಳಿಯುತ್ತೇನೆ. 2023ಕ್ಕೆ ಪಕ್ಷಕ್ಕೆ ಎಷ್ಟುಸಾಧ್ಯವಿದೆಯೋ ಬೆಳಗಾವಿ ಜಿಲ್ಲೆ, ವರಿಷ್ಠರು ಹೇಳಿದ ಕಡೆ ಕೆಲಸ ಮಾಡಿ ಬಿಜೆಪಿ ಪೂರ್ಣ ಬಹುಮತ ತರಲು ಪ್ರಯತ್ನ ಮಾಡುತ್ತೇನೆ.  ರಮೇಶ ಜಾರಕಿಹೊಳಿ ಮಂತ್ರಿಯಾದರೆ ಸಕ್ಕರೆ ಕಾರ್ಖಾನೆಯಲ್ಲಿ ಮಾಡಿದ ಅವ್ಯವಹಾರ ಬಯಲು ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೋಸ್ಟ್‌ ವೆಲ್‌ಕಮ್‌. ಇದನ್ನು ಸ್ವಾಗತ ಮಾಡುತ್ತೇನೆ. ಇಷ್ಟುದಿನ ಯಾಕೆ ಸುಮ್ಮನೆ ಕುಳಿತಿದ್ದರು, ಮಾಡಲಿ. ವಿರೋಧಿಗಳು ಮಾಡೋರೆ ನಾವೇನೂ ಮಾಡಬೇಕು ಮಾಡುತ್ತೇವೆ. 

ಸಿದ್ದು, ಎಂಬಿಪಾ ಸುಳ್ಳು ಹೇಳೋದು ಬಿಡಲಿ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಕಾನೂನು ಬದ್ಧವಾಗಿ ಸಕ್ಕರೆ ಕಾರ್ಖಾನೆ ನನ್ನ ಮಗ ನಡೆಸುತ್ತಾನೆ. ಕಳೆದ ಆರು ವರ್ಷದಿಂದ ಕಾರ್ಖಾನೆಗೆ ನಾನು ಕಾಲಿಟ್ಟಿಲ್ಲ. ಆ ಫ್ಯಾಕ್ಟರಿ ವ್ಯವಹಾರ ನನ್ನ ಮಗ ನೋಡುತ್ತಾನೆ. ಅವನು ಅದಕ್ಕೆ ಉತ್ತರ ಕೊಡ್ತಾನೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು. ಬಿಕೆ ಹರಿಪ್ರಸಾದ 17 ಜನ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಕೆ ಹರಿಪ್ರಸಾದ ನನ್ನ ಅಂದಾಜು ತಪ್ಪು ಮಾತನಾಡಿರಬೇಕು. ಅಂತಹ ಮಾತಾಡುವ ಮನುಷ್ಯ ಅಲ್ಲ. ಏನೋ ತಪ್ಪಿ ಮಾತಾಡಿರಬೇಕು. ನಾನು ಪೂರ್ಣ ಪ್ರಮಾಣದಲ್ಲಿ ನೋಡಿಲ್ಲ ನಮ್ಮ ಮಿತ್ರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.

ಇನ್ನೂ ನೂರು ಸಿಡಿ ಬರಲಿ ಫೈಟ್‌ ಮಾಡುತ್ತೇವೆ: 17 ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂಬ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲಿ ಬಿಡಿ, ಸಿಡಿಗಳನ್ನು ಇಟ್ಟುಕೊಂಡು ಕೂರಬಾರದು. ಎಷ್ಟುಬೇಗ ಆಗುತ್ತೆ ಅಷ್ಟುಬೇಗ ಬಹಿರಂಗಪಡಿಸಿ. ಇಂಥ ನೂರು ಸಿಡಿ ಬರಲಿ. ಎಲ್ಲ ಶಾಸಕರು ಫೈಟ್‌ ಮಾಡಲು ರೆಡಿ ಇದ್ದಾರೆ. ಸಿಡಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಜನರಿಗೆ ರಾಜ್ಯದ ಜನ ಸರಿಯಾಗಿ ಉತ್ತರ ಕೊಡುತ್ತಾರೆ ಎಂದರು. ಬಿಟ್ಟು ಹೋದ ಶಾಸಕರು ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಎಂಬ ಡಿಕೆಶಿ ಹೇಳಿಕೆ ಪುನಃ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಉಳಿದವರ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಹಾಗೇ ಯಾರು ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್‌ ಪರಿಸ್ಥಿತಿ ಏನಿದೆ ಇಡೀ, ಕರ್ನಾಟಕ ರಾಜ್ಯದಲ್ಲಿ ಉಸಿರಾಡುತ್ತಿದೆ. ನಮ್ಮ ವರಿಷ್ಠರು ನಾಳೆ ದಿಲ್ಲಿಯಿಂದ ಬಂದು ಕುಳಿತ್ರೆ ಗಾಳಿಪಟ ಆಗುತ್ತೆ. ಅದಕ್ಕೆ ಭವಿಷ್ಯ ಇಲ್ಲ. ಬಿಜೆಪಿ ಇನ್ನೂ ಇಪ್ಪತ್ತು ವರ್ಷ ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿಯಿಂದ ರಾಜ್ಯಕ್ಕೆ ದೇಶಕ್ಕೆ ಹಿತ ಆಗುತ್ತೆ ಎಂದರು.

ಉತ್ತಮ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್‌ ಪಕ್ಷ ವಿಸರ್ಜನೆ: ಎಚ್‌ಡಿಕೆ

ಗಿಫ್ಟ್‌ ಒಮ್ಮೆಲೇ ಕೊಡುವುದಿದೆ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶಕ್ಕೆ ಪ್ಲ್ಯಾನ್‌ ವಿಚಾರಕ್ಕೆ ಉತ್ತರಿಸಿದ ಅವರು, ಚುನಾವಣೆ ಬಂದಾಗ ಎಲ್ಲ ಪಕ್ಷ ಸಮಾವೇಶ ಮಾಡುವುದು ಸಹಜ. ಅದರ ವಿಶೇಷ ಏನಿಲ್ಲ. ಇದರ ಬಗ್ಗೆ ತಲೆ ಕೆಡಸಿಕೊಳ್ಳಬೇಕಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಮತದಾರರಿಗೆ ಗಿಫ್ಟ್‌ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಗಲಿ... ಆಗಲಿ.. ನಾನು ಗಿಫ್ಟ್‌ ಕೊಡುವುದಿಲ್ಲ ಕೊನೆಗೆ ಒಮ್ಮೆ ಕೊಡುವುದಿದೆ. ಎಷ್ಟುಕೊಡುತ್ತಾರೆ ಅದರ ಡಬಲ್‌ಕೊಡುವುದಾಗಿ ಹೇಳಿದ್ದೀದೆ. ನೋಡೋಣ. ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತಿರುವುದು ಬಿಜೆಪಿ ಸಮಾವೇಶ ಅಲ್ಲ. ಬಿಜೆಪಿಯಿಂದ ಮಾಡುವಾಗ ಗ್ರಾಮೀಣ ಅಧ್ಯಕ್ಷರ ನೇತೃತ್ವದಲ್ಲಿ ಮಾಡುತ್ತೇವೆ. ನಾಳೆ ಆಗುತ್ತಿರುವ ಸಮಾವೇಶ ನಮ್ಮ ಟೀಂ ಮಾಡ್ತಿದೆ. ಪಕ್ಷಾತೀತವಾಗಿ ನಡೆದಿದೆ. ಗಿಫ್ಟ್‌ ಹಂಚಲಿ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ರಿಯಾಕ್ಟ್ ಮಾಡುತ್ತೇನೆ ಎಂದರು.

click me!