ಸಿದ್ದು, ಎಂಬಿಪಾ ಸುಳ್ಳು ಹೇಳೋದು ಬಿಡಲಿ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

By Kannadaprabha NewsFirst Published Jan 19, 2023, 10:01 AM IST
Highlights

ನಾರಾಯಣಪುರ ಎಡದಂತೆ ಕಾಲುವೆ ಯೋಜನೆ ತಮ್ಮ ಕಾಲದ್ದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತಿರುಗೇಟು ನೀಡಿದೆ.

ಬೆಂಗಳೂರು (ಜ.19): ನಾರಾಯಣಪುರ ಎಡದಂತೆ ಕಾಲುವೆ ಯೋಜನೆ ತಮ್ಮ ಕಾಲದ್ದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತಿರುಗೇಟು ನೀಡಿದೆ. ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ನಮ್ಮದೆಂದು ಬೀಗುತ್ತಿರುವ ಎಂ.ಬಿ.ಪಾಟೀಲ್‌ ಅವರೇ, ಸುಳ್ಳು ಹೇಳುವ ಚಾಳಿಯನ್ನು ಬಿಡಿ. ದಾಖಲೆಗಳು ಇಲ್ಲಿವೆ, ಕಣ್ತೆರೆದು ನೋಡಿ ಎಂದು ದಾಖಲೆಗಳ ಸಮೇತ ಚಾಟಿ ಬೀಸಿದೆ.

ನಾರಾಯಣ ಎಡದಂಡೆ ಕಾಲುವೆ ಯೋಜನೆಯ ಮೂರನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಡಬಲ್‌ ಎಂಜಿನ್‌ ಸರ್ಕಾರದ ಕಡೆಯಿಂದ ಭೂಸ್ವಾಧೀನ, ಪುನರ್‌ವಸತಿ ಮತ್ತು ಪುನಶ್ಚೇತನ ಕಾಮಗಾರಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ. 2011-12ನೇ ಸಾಲಿನಲ್ಲಿ ರಾಷ್ಟ್ರೀಯ ಜಲ ಮಿಷನ್‌ ಅಡಿಯಲ್ಲಿ ಅಂದಿನ ರಾಜ್ಯದ ಬಿಜೆಪಿ ಸರ್ಕಾರದ ಕನಸಿನ ಕೂಸಾಗಿದ್ದ ಎನ್‌ಎಲ್‌ಬಿಸಿ ಆಧುನಿಕ ಯೋಜನೆಗೆ ಅನುಮೋದನೆ ಪಡೆದಿತ್ತು. ಇದು ಅಂದಿನ ಬಿಜೆಪಿ ಸರ್ಕಾರದ ಕನಸಿನ ಯೋಜನೆಯಾಗಿದ್ದು, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದರು ಎಂದು ಹೇಳಿದೆ.

ಕಲ್ಯಾಣ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಇಂದು ಮೋದಿ ಮೇನಿಯಾ: ಪ್ರವಾಸದ ಬಗ್ಗೆ ಹೆಚ್ಚಿದ ಕುತೂಹಲ

ಎಸ್‌ಸಿಎಡಿಎ ಹಂತ -2ರ ಬಹುತೇಕ ಕಾಮಗಾರಿಯು ಪ್ರಸಕ್ತ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅನುಷ್ಠಾನಗೊಂಡಿರುತ್ತದೆ. ಬಿಜೆಪಿ ಸರ್ಕಾರದ ಕನಸಿನ ಕೂಸಾಗಿರುವ ಎನ್‌ಎಲ್‌ಬಿಸಿ-ಇಆರ್‌ಎಂ ಯೋಜನೆಗೆ ಕೇಂದ್ರವು ಪಿಎಂಕೆಎಸ್‌ವೈ ಅಡಿ ಧನ ಸಹಾಯ ನೀಡಿ ಯೋಜನೆ ಸಾಕಾರಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾಗುತ್ತಿರುವುದು ರಾಜ್ಯದ ಸೌಭಾಗ್ಯ ಎಂದು ತಿಳಿಸಿದೆ.

2014-15ರವರೆಗೆ ಹಿಂದಿನ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇಂದ್ರದ ಯುಪಿಎ ಸರ್ಕಾರದಿಂದ ಯಾವುದೇ ಧನ ಸಹಾಯ ಪಡೆಯುವಲ್ಲಿ ವಿಫಲವಾಗಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ 2015ರಲ್ಲಿ ಎನ್‌ಎಲ್‌ಬಿಸಿ-ಇಆರ್‌ಎಂ ಯೊಜನೆಯನ್ನು ಪಿಎಂಕೆಎಸ್‌ವೈ (ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆ) ಯೋಜನೆಯಡಿ ಪರಿಗಣಿಸಿ ಯೋಜನೆಗೆ ಒಂದು ಸಾವಿರ ಕೋಟಿ ರು. ಕೇಂದ್ರ ಸಹಾಯ ನೀಡಿದೆ ಎಂದಿದೆ.

ಹರಿಪ್ರಸಾದರಿಗೆ ಗ್ರಾಪಂ ಸದಸ್ಯರಾಗಲು ಶಕ್ತಿ ಇಲ್ಲ: ಗ್ರಾಪಂ ಸದಸ್ಯನಾಗಲು ಶಕ್ತಿ ಇಲ್ಲದವರಿಗೆ ಬಿಜೆಪಿ ಸಚಿವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ನೀವು ಯಾವ ಸೀಮೆ ನಾಯಕ? ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ವಿರುದ್ಧ ಹರಿಹಾಯ್ದರು. ಬುಧವಾರ ತಾಲೂಕಿನ ಸಿರಿವಾರ ಗ್ರಾಮದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ ವಸತಿನಿಲಯದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ಮಾಧ್ಯಮದವರ ಜತೆ ಮಾತನಾಡಿದರು.

ಕಾಂಗ್ರೆಸ್‌ನ ಹರಿಪ್ರಸಾದ ಜ. 17ರಂದು ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಸಚಿವ ಆನಂದ ಸಿಂಗ್‌ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅಲ್ಲದೆ ಶಾಸಕರನ್ನು ವೇಶ್ಯೆಗೆ ಹೋಲಿಸಿ, ಸ್ಥಾನ ಮಾರಾಟ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.  ಹರಿಪ್ರಸಾದ ಅವರಿಗೇ ಗ್ರಾಪಂ ಸದಸ್ಯನಾಗುವ ಸಾಮರ್ಥ್ಯ ಇಲ್ಲ. ಹೀಗಿರುವಾಗ ಬಿಜೆಪಿಯವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕಿಂತ ಮುಂಚೆ ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು. 

ನನ್ನ ಟ್ವೀಟರ್‌ ಖಾತೆ ಹ್ಯಾಕ್‌ ಆಗಿದೆ: ಸಚಿವ ಶ್ರೀರಾಮುಲು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ 17 ಶಾಸಕರ ಪೈಕಿ ಆನಂದ ಸಿಂಗ್‌ ಒಬ್ಬರು. ಆನಂದ ಸಿಂಗ್‌ ಸಜ್ಜನ ರಾಜಕಾರಣಿಯಾಗಿದ್ದರಿಂದ ಹೊಸಪೇಟೆ ಜನ ಮೂರು ಬಾರಿ ಆಯ್ಕೆ ಮಾಡಿ, ಶಾಸಕರನ್ನಾಗಿಸಿದ್ದಾರೆ. ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿರುವ ಸಿಂಗ್‌ ಮೇಲಿನ ಆರೋಪ ಸಲ್ಲ. ಆದರೆ ಹರಿಪ್ರಸಾದ ಅವರಿಗೆ ಬೆಂಗಳೂರಿನ ಜನತೆ ಸೋಲಿಸಿ ಮನೆಗೆ ಕಳುಹಿಸಿದರೂ ಹಗುರ ಮಾತುಗಳನ್ನಾಡುವುದು ಬಿಟ್ಟಿಲ್ಲ. ಮುಂದಿನ ದಿನಮಾನಗಳಲ್ಲಿ ಜನ ಹರಿಪ್ರಸಾದ ಅವರಿಗೆ ಜನ ಮತ್ತೊಮ್ಮೆ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.

click me!