ಆಯನೂರು ಮಂಜುನಾಥ್‌ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ; ಅವರನ್ನ ವರಿಷ್ಠರು ವಿಚಾರಿಸಿಕೊಳ್ತಾರೆ: ಈಶ್ವರಪ್ಪ

By Kannadaprabha NewsFirst Published Mar 24, 2023, 9:29 AM IST
Highlights

ದಾವಣಗೆರೆಯಲ್ಲಿ ಮಾ.25 ರಂದು ಬಿಜೆಪಿ ಮಹಾಸಂಗಮ ಸಮಾವೇಶ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶಿವಮೊಗ್ಗ (ಮಾ.24) : ದಾವಣಗೆರೆಯಲ್ಲಿ ಮಾ.25 ರಂದು ಬಿಜೆಪಿ ಮಹಾಸಂಗಮ ಸಮಾವೇಶ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹಾಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಭಾಗವಹಿಸಲಿದ್ದು, ಶಿವಮೊಗ್ಗ(Shivamogga) ಜಿಲ್ಲೆಯಿಂದಲೂ ಸಾವಿ​ರಾ​ರು ಮಂದಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗವಿನ್ನು ರಾಷ್ಟ್ರೀಯ ಭದ್ರತೆಯ ಪಾಠಶಾಲೆ! ರಕ್ಷಾ ವಿವಿಗೆ ನಾಳೆ ಚಾಲನೆ!

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ(Vijayasankalpa yatre) ಸೇರಿದಂತೆ ಎಲ್ಲ ಸಂಘಟನಾತ್ಮಕ ಕಾರ್ಯಕ್ರಮಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ್ದಾರೆ. ಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ರಾಜ್ಯದಲ್ಲಿ ಇಷ್ಟುದೊಡ್ಡ ಮಟ್ಟದ ಸಮಾವೇಶ ಎಂದೂ ನಡೆದಿಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಸಂದೇಶ ಈ ಮಹಾಸಂಗಮದ ಮೂಲಕ ನೀಡುತ್ತೇವೆ. ಮಹಾಸಂಗಮ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಲಿದೆ. ಮಾ.25ಕ್ಕೆ ಎಲ್ಲರೂ ದಾವಣಗೆರೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah)ವಿರುದ್ಧ ಮತ್ತೆ ಟೀಕಾಪ್ರಹಾರ ನಡೆಸಿದ ಈಶ್ವರಪ್ಪ(KS Eshwarappa), ವಿಪಕ್ಷ ನಾಯಕರಿಗೆ ಇನ್ನೂ ಸ್ಪರ್ಧೆ ಮಾಡಲು ಕ್ಷೇತ್ರವೇ ಸಿಕ್ಕಿಲ್ಲ. ಹೀಗಾಗಿ ಬಸ್‌ ಪಯಣ ಮಾಡುತ್ತಿದ್ದಾರೆ. ಮೊನ್ನೆ ಹೈಕಮಾಂಡ್‌ ತೀರ್ಮಾನ ಎಂದ ಸಿದ್ದರಾಮಯ್ಯ ಅವರು ನಿನ್ನೆ ಕುಟುಂಬ ನಿರ್ಧಾರ ಬಳಿಕ ಹೇಳುತ್ತೇನೆ ಎಂದಿದ್ದಾರೆ. ಅವರು 224 ಕ್ಷೇತ್ರದಲ್ಲಿ ಎಲ್ಲೇ ನಿಲ್ಲಲಿ, ಕಾಂಗ್ರೆಸ್‌ ಪಕ್ಷದವರೇ ಅವರನ್ನು ಸೋಲಿಸುತ್ತಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌(DK Shivakumar) ಒಕ್ಕಲಿಗರು ಆಶೀರ್ವಾದ ಮಾಡಿದರೆ ನಾನೇ ಸಿಎಂ ಎನ್ನುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಜಾತಿ ಜಾತಿ ಎನ್ನುತ್ತಲೇ ಕಾಂಗ್ರೆಸ್‌ ಪಕ್ಷದವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಯನೂರು ಮಂಜುನಾಥ್‌(Ayanuru manjunath) ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಪಕ್ಷದಲ್ಲಿ ಸ್ಪರ್ಧೆಯ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಕೇಂದ್ರದ ನಾಯಕರ ಎಲ್ಲಾ ತೀರ್ಮಾನಕ್ಕೆ ಪಕ್ಷದ ಕಾರ್ಯಕರ್ತನಾಗಿ ನಾನು ಬದ್ಧನಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌. ಅರುಣ್‌, ಸೂಡಾ ಅಧ್ಯಕ್ಷ ನಾಗರಾಜ್‌, ಬಿಜೆಪಿ ನಗರಾಧ್ಯಕ್ಷ ಜಗದೀಶ್‌, ಪ್ರಮುಖರಾದ ಕೆ.ಇ. ಕಾಂತೇಶ್‌, ಶಿವರಾಜ್‌, ಜ್ಞಾನೇಶ್ವರ್‌, ರಾಮಣ್ಣ, ಹೃಷಿಕೇಶ್‌ ಪೈ. ಇ.ವಿಶ್ವಾಸ್‌, ಅಣ್ಣಪ್ಪ ಮತ್ತಿತರರು ಇದ್ದರು.

ವರಿ​ಷ್ಠ​ರಿಗೆ ವರದಿ ಸಲ್ಲಿ​ಕೆ: ಬಿಜೆಪಿ ಜಿಲ್ಲಾ​ಧ್ಯ​ಕ್ಷ

ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ಅವರ ಅಭಿಪ್ರಾಯವನ್ನು ಕೂಡ ಪಕ್ಷ ಗಮನಿಸುತ್ತಿದ್ದು, ಈ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಹೇಳಿದರು.

ಆಯನೂರು ಮಂಜುನಾಥ್‌ ಹೇಳಿಕೆ ಮತ್ತು ಅಭಿಪ್ರಾಯಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಸ್ಪಷ್ಟವಾದ ವರದಿ ಕಳಿಸಿದ್ದೇವೆ. ಶಿಸ್ತು ಕ್ರಮದ ಬಗ್ಗೆ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ನಿರಂತರ ಪ್ರಕ್ರಿಯೆ. ಸರಿದಾರಿಗೆ ತರುವ ಕೆಲಸ ಆಗುತ್ತದೆ. ಪಕ್ಷದಲ್ಲಿ ಸಣ್ಣಪುಟ್ಟಗೊಂದಲಗಳು ಇರಬಹುದು. ಅದನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದರು.

ಅತಿರಥರ ಅಖಾಡ: ಶಿವಮೊಗ್ಗದಲ್ಲಿ ಹೇಗಿದೆ ಚುನಾವಣಾ ರಣಕಣ?

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅದರದೇ ಆದ ಮಾನದಂಡವಿದೆ. ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಮತ್ತು ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕೊಡುಗೆ ಗಮನಿಸಿ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತದೆ. ಪಕ್ಷದ ಘನತೆ, ಗೌರವಕ್ಕೆ ಧಕ್ಕೆ ತರುವ ಘಟನೆಗಳನ್ನು ಯಾರು ಕೂಡ ಮಾಡಬಾರದು. ಸೊರಬ ಕ್ಷೇತ್ರದಲ್ಲಿ ಕೂಡ ಕೆಲವು ಹಿರಿಯರ ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಮಾತುಕತೆ ಮಾಡಿದ್ದಾರೆ. ಅಲ್ಲಿ ಕೂಡ ಸಮಸ್ಯೆಯನ್ನು ಹಿರಿಯ ನಾಯಕರು ಬಗೆಹರಿಸುತ್ತಾರೆ ಎಂದರು.

click me!