
ಭಾಲ್ಕಿ (ಬೀದರ್)(ಏ.18): ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 40ಕ್ಕಿಂತ ಒಂದೇ ಒಂದು ಹೆಚ್ಚುವರಿ ಶಾಸಕನನ್ನು ಕೊಡಬೇಡಿ. ಅವರಿಗೆ ಹೆಚ್ಚುವರಿ ಶಾಸಕರನ್ನು ನೀಡಿದರೆ ಭ್ರಷ್ಟಾಚಾರದ ಹಣವನ್ನು ಮುಂದೆ ನಿಮ್ಮದೇ ಶಾಸಕರ ಖರೀದಿಗೆ ಬಳಸುತ್ತಾರೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆರೋಪಿಸಿದರು.
ಸೋಮವಾರ ಭಾಲ್ಕಿಯಲ್ಲಿ ಕಾಂಗ್ರೆಸ್ ಜನ ಕ್ರಾಂತಿ ರಾರಯಲಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಶೇ.40ರ ಕಮಿಷನ್ ಸಂಬಂಧ ಕರ್ನಾಟಕ ಗುತ್ತಿಗೆದಾರರ ಸಂಘದಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರೂ ಅವರು ಉತ್ತರ ಕೊಡದೆ ಸುಮ್ಮನಾದರು ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಬಹುಮತಕ್ಕಾಗಿ ಶಾಸಕರನ್ನು ಖರೀದಿಸುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡುತ್ತದೆ. ಹೀಗಾಗಿ ಈ ಬಾರಿ ಬಿಜೆಪಿ ತಂತ್ರಗಾರಿಕೆ ಮೆಟ್ಟಿನಿಲ್ಲಲು ಕಾಂಗ್ರೆಸ್ ಪಕ್ಷಕ್ಕೆ 150 ಸೀಟುಗಳನ್ನು ದೊರಕಿಸಿಕೊಡಿ ಎಂದು ಜನತೆಗೆ ಮನವಿ ಮಾಡಿದರು.
ಬಸವಣ್ಣನ ವಿಚಾರಧಾರೆ ಮೇಲೆ ಆರ್ಎಸ್ಎಸ್ ಬಿಜೆಪಿ ಆಕ್ರಮಣ, ಬೀದರ್ನಲ್ಲಿ ರಾಹುಲ್ ವಾಗ್ದಾಳಿ!
ಪರಿಶಿಷ್ಟಜಾತಿ, ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಮೀಸಲಾತಿ ಸಿಗಬೇಕು. ಮೀಸಲಾತಿಯನ್ನು ಶೇ.50ಕ್ಕಿಂತ ಹೆಚ್ಚು ನೀಡದಂತೆ ನಿರ್ಬಂಧಗೊಳಿಸಿರುವುದನ್ನು ತೆಗೆದುಹಾಕಬೇಕು, ಇಲ್ಲವಾದಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಲೇಬೇಡಿ ಎಂದು ಪ್ರಧಾನಿ ಮೋದಿಗೆ ಇದೇ ವೇಳೆ ರಾಹುಲ್ ಗಾಂಧಿ ತಾಕೀತು ಮಾಡಿದರು.
ರಾಜ್ಯದಲ್ಲಿ ನಾವು ಘೋಷಣೆ ಮಾಡಿರುವ ನಮ್ಮ ನಾಲ್ಕು ಗ್ಯಾರಂಟಿಗಳು ಸರ್ಕಾರ ರಚನೆಯಾದ ಮೊದಲ ಕ್ಯಾಬಿನೇಟ್ ಸಭೆಯಲ್ಲೇ ಜಾರಿಗೆ ಬರುತ್ತವೆ. ಅಧಿಕಾರಕ್ಕೆ ಬಂದ ಬಳಿಕ ಇನ್ನೂ ಹಲವು ಕಾರ್ಯಕ್ರಮಗಳನ್ನು ದೀನ, ದಲಿತರು, ಹಿಂದುಳಿದವರ ಏಳ್ಗೆಗಾಗಿ ತರಲಿದ್ದೇವೆ ಎಂದರು.
ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ
ಹೋರಾಟ ನಿಲ್ಲಲ್ಲ: ರಾಹುಲ್
ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು, ದೇಶದ ಏರ್ಪೋರ್ಟ್ ಹಾಗೂ ಬಂದರುಗಳನ್ನು ಒಬ್ಬ ವ್ಯಕ್ತಿಗೇ ಗುತ್ತಿಗೆ ನೀಡಿರುವುದು ಯಾಕೆ? ಹಾಗೂ ಅದಾನಿ ಶೆಲ್ ಕಂಪನಿಯಲ್ಲಿರುವ .20 ಸಾವಿರ ಕೋಟಿ ಯಾರದ್ದು ಎಂದು ಪ್ರಶ್ನಿಸಿದಾಗ ನನ್ನ ಮೈಕ್ ಸ್ಥಗಿತಗೊಳಿಸಲಾಯಿತು. ನನ್ನನ್ನು ಲೋಕಸಭೆಯಿಂದ ಹೊರಹಾಕಲಾಯಿತು. ಇದ್ಯಾವುದಕ್ಕೂ ನಾನು ಜಗ್ಗಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.