ಬಿಜೆಪಿಗೆ ಹಿರೇಕೆರೂರು ಮಾಜಿ ಶಾಸಕ ಯು.ಬಿ.ಬಣಕಾರ ಗುಡ್‌ಬೈ : ಕಾಂಗ್ರೆಸ್‌ನತ್ತ ಹೆಜ್ಜೆ..?

By BK AshwinFirst Published Nov 9, 2022, 5:31 PM IST
Highlights

ಬಿಜೆಪಿ ಸದಸ್ಯತ್ವ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಯು.ಬಿ. ಬಣಕಾರ ರಾಜೀನಾಮೆ ನೀಡಿದ್ದು, ಅವರು ಕಾಂಗ್ರೆಸ್‌ನತ್ತ ಹೆಜ್ಜೆ ಇಡುವ ಸಾಧ್ಯತೆ ಇದೆ.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ವಲಯದಲ್ಲಿ ಹಲವು ಬದಲಾವಣೆಗಳಾಗುತ್ತಿದೆ. ಹಲವು ರಾಜಕೀಯ ನಾಯಕರು ಪಕ್ಷ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಈಗ ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಬಿಜೆಪಿ ಸದಸ್ಯತ್ವ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಯು.ಬಿ. ಬಣಕಾರ ರಾಜೀನಾಮೆ ನೀಡಿದ್ದು, ಅವರು ಕಾಂಗ್ರೆಸ್‌ನತ್ತ ಹೆಜ್ಜೆ ಇಡುವ ಸಾಧ್ಯತೆ ಇದೆ. ಕಳೆದ ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ್‌ಗೆ ಬಣಕಾರ ಅವರು ಸಾಥ್‌ ನೀಡಿದ್ದರು. 

ಈ ಬಗ್ಗೆ ತಮ್ಮ ಬಂಧುಗಳು ಹಾಗೂ ಸ್ನೇಹಿತರಿಗೆ ಸುದೀರ್ಘ ಪತ್ರ ಬರೆದಿರುವ ಯು.ಬಿ. ಬಣಕಾರ ಅವರು ಸಾರ್ವಜನಿಕ ಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ನನ್ನ ತಂದೆಯಯವರ ಕಾಲದಿಂದಲೂ ಹಾಗೂ ನನ್ನ 38 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳನ್ನು ಆದರಪೂರ್ವಕ ಗೌರವಿಸಿದ್ದೀರಿ. 

ಇದನ್ನು ಓದಿ: ಸಚಿವ ಬಿ.ಸಿ ಪಾಟೀಲ್ ವಿರುದ್ದ ತೊಡೆ ತಟ್ಟಿದ ಯು.ಬಿ.ಬಣಕಾರ್: ಶುರುವಾಯ್ತು ಜಂಗಿ ಕುಸ್ತಿ

ಕೆಲವೊಂದು ನಿರ್ಣಯಗಳು ಪ್ರಾರಂಭದಲ್ಲಿ ಕೆಲವರಿಗೆ ಸರಿ ಎನ್ನಿಸದಿದ್ದರೂ ಕೊನೆಗೆ ಸಂತೋಷದಿಂದ ಸ್ವೀಕರಿಸಿದ್ದೀರಿ. ತಮ್ಮೆಲ್ಲರ ಅಭಿಮಾನವೇ ನಮ್ಮ ಸಂಪತ್ತು, ನಮ್ಮ ಶ್ರೀರಕ್ಷೆ. ಅಧಿಕಾರ ದೊಡ್ಡದಲ್ಲ ಹಾಗೂ ಶಾಶ್ವತವಲ್ಲ ಎಂದು ನಂಬಿದವರು ನಾವೆಲ್ಲ. ರಾಜಕಾರಣಕ್ಕಿಂತ ಹೆಚ್ಚಾಗಿ ನಾವೆಲ್ಲ ಒಂದು ಕುಟುಂಬದವರು ಎಂದು ನಂಬಿ ಬಂದವರು. ತಾವು ಎಂದೂ ನನ್ನ ಜತೆ, ಅಧಿಕಾರಕ್ಕಾಗಲೀ, ವೈಯಕ್ತಿಕ ಹಿತಾಸಕ್ತಿಗಾಗಲಿ ಬಂದವರಲ್ಲ. 

ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಎಲ್ಲರೂ ಒಂದೇ ಎಂಬ ಭಾವನೆಯ ಜತೆಗೆ ನಾವಿದ್ದೇವೆ. ನಾವು ಒಳ್ಳೆಯ ಉದ್ದೇಶದಿಂದ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಾಗ ನಂತರದ ದಿನಗಳಲ್ಲಿ ಅದು ಸರಿ - ತಪ್ಪು ಅಂತ ವಿಮರ್ಶೆ ಮಾಡುವ ಅಗತ್ಯವಿಲ್ಲ. ನಾವು ತೆಗೆದುಕೊಂಡ ನಿರ್ಣಯ ನೂರಕ್ಕೆ ನೂರರಷ್ಟು ಸರಿ, ಪರಿಶುದ್ಧ ಇದ್ದ ಸಂದರ್ಭದಲ್ಲಿ ನಾವು ಯಾವುದಕ್ಕೂ ಚಿಂತನೆ ಮಾಡುವ ಅವಶ್ಯತೆ ಇಲ್ಲ. ಸಹಸ್ರಾರು ಚಿಂತಕರು ನಿರ್ಧಾರಗಳನ್ನು ಗೌರವಿಸುವ ಸಮಯದಲ್ಲಿ ಕೆಲವರ ಟೀಕೆಗಳು ನಮಗೆ ಪ್ರಸ್ತುತವಲ್ಲ. 

ಇದನ್ನೂ ಓದಿ: ಹಿರೇಕೆರೂರಲ್ಲೂ ಬಿಜೆಪಿಗೆ ಬಿಸಿ: ಯಡಿಯೂರಪ್ಪ ಸಂಧಾನ ವಿಫಲ!

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನ ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು, ಸಲಹೆಗಳನ್ನು ನೇರವಾಗಿ, ಮುಕ್ತವಾಗಿ ಹಂಚಿಕೊಂಡಿದ್ದೀರಿ. ತಮ್ಮಂಥ ಅಪರೂಪದ ಹಿರಿಯರನ್ನು, ಸ್ನೇಹಿತರನ್ನು ಗಳಿಸಿರುವುದು ನನ್ನ ಪುಣ್ಯ. ವಯಸ್ಸಿನಲ್ಲಿ ಕೆಲವರು ಅತ್ಯಂತ ಕಿರಿಯರಾದರೂ ಸಹ ಮುತ್ಸದ್ಧಿತನದ ಗುಣಗಳನ್ನು ಬೆಳೆಸಿಕೊಂಡು ನನಗೆ ಸಲಹೆ ಸೂಚನೆಗಳನ್ನು ನೀಡಿದ್ದೀರಿ. 

ನಿಮ್ಮೆಲ್ಲರ ನೋವು, ಸಲಹೆ, ಮಾರ್ಗದರ್ಶನ ಹಾಗೂ ಇಂದಿನ ಪರಿಸ್ಥಿತಿಯ ಅಡಿಯಲ್ಲಿ ಮತ್ತೊಮ್ಮೆ ನಿರ್ಧಾರ ತೆಗೆದುಕೊಳ್ಳುವ ಕಾಲ ಕೂಡಿ ಬಂದಿದೆ. ನಾನು ಈ ದಿವಸ ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಯಾರಿಗಾದರೂ ಅಸಂತೋಷ, ಬೇಸರ ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ಅವರು ಬಿಜೆಪಿಗೆ ಗುಡ್‌ಬೈ ಹೇಳಿರುವ ಬಗ್ಗೆ ತಮ್ಮ ಬಂಧುಗಳು ಹಾಗೂ ಸ್ನೇಹಿತರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. 

ಇದನ್ನೂ ಓದಿ: ಮೂಲ ಬಿಜೆಪಿ VS ಅನರ್ಹರ ಫೈಟ್, ಹಿರೇಕೆರೂರಿನಲ್ಲಿ ಯಾರಿಗೆ ಟಿಕೆಟ್?

click me!