Bitcoin Scam: ಬಿಟ್‌ಕಾಯಿನ್‌ ಬಿಟ್ಹಾಕಿ, ಚೆನ್ನಾಗಿ ಕೆಲಸ ಮಾಡಿ: ಮೋದಿ ಕಿವಿಮಾತು!

By Kannadaprabha NewsFirst Published Nov 12, 2021, 1:09 AM IST
Highlights

*ನಾನೇ ಬಿಟ್‌ಕಾಯಿನ್‌ ವಿಚಾರ ಪ್ರಸ್ತಾಪಿಸಿದರೂ ಮೋದಿ ಮಾತಾಡಲಿಲ್ಲ
*Amit Shah ಭೇಟಿ ವೇಳೆಯೂ ಚರ್ಚೆಗೆ ಬರಲಿಲ್ಲ
*100 ದಿನದ ಸಾಧನೆ, ರೈತರ ಮಕ್ಕಳ ಯೋಜನೆ ಮೆಚ್ಚಿದರು: ಬೊಮ್ಮಾಯಿ
*ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ

ನವದೆಹಲಿ(ನ.12): ಬಿಟ್‌ಕಾಯಿನ್‌ ಪ್ರಕರಣದಲ್ಲಿ (Bitcoin Scam) ಪ್ರತಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavraj Bommai) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಧೈರ್ಯ ತುಂಬಿದ್ದಾರೆ. ಬಿಟ್‌ಕಾಯಿನ್‌ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ, ಜನಪರ ಕೆಲಸ ಮಾಡುವತ್ತ ಗಮನ ಕೊಡಿ ಎಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ರಾಜ್ಯದಲ್ಲಿ ಬಿಟ್‌ಕಾಯಿನ್‌ ಹಗರಣ ಆಡಳಿತ (Ruling) ಮತ್ತು ಪ್ರತಿಪಕ್ಷಗಳ (Opposition) ನಡುವೆ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗಿರುವ ನಡುವೆಯೇ ಗುರುವಾರ (ನ.11) ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಈ ವಿಚಾರ ತಿಳಿಸಿದರು. ಮೋದಿ ಜತೆಗಿನ ಭೇಟಿ ವೇಳೆ ಬಿಟ್‌ಕಾಯಿನ್‌ ವಿಚಾರ ಚರ್ಚೆಗೇ ಬರಲಿಲ್ಲ, ನಾನೇ ಈ ವಿಚಾರ ಅವರ ಮುಂದೆ ಪ್ರಸ್ತಾಪಿಸಲು ಪ್ರಯತ್ನಿಸಿದೆ ಎಂದು ಸ್ಪಷ್ಟನೆ ನೀಡಿದರು.

ಪ್ರಧಾನಿಗ ಹೆಚ್ಚಿಗೆ ಮಾತನಾಡಲು ಇಷ್ಟಪಡಲಿಲ್ಲ!

ಬಿಟ್‌ಕಾಯಿನ್‌ ವಿಚಾರವಾಗಿ ಪ್ರಧಾನಿಗಳು ಹೆಚ್ಚಿಗೆ ಮಾತನಾಡಲು ಇಷ್ಟಪಡಲಿಲ್ಲ. ಆದರೆ ನಾನೇ ಪ್ರಧಾನಿಗಳಿಗೆ (Prime Minister) ಈ ವಿಚಾರ ತಿಳಿಸಿದೆ. ಆಗ ಅವರು ಬಿಟ್‌ಕಾಯಿನ್‌ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಿ. ನಿಷ್ಠೆ, ದಿಟ್ಟತನದಿಂದ ಚೆನ್ನಾಗಿ ಕರ್ತವ್ಯ ನಿರ್ವಹಿಸಿ. ಆಗ ಎಲ್ಲವೂ ಸರಿಹೋಗುತ್ತದೆ ಎಂದು ಅಭಯ ನೀಡಿದರು ಎಂದು ಬೊಮ್ಮಾಯಿ ತಿಳಿಸಿದರು.

Amit Shah ಭೇಟಿ ವೇಳೆಯೂ ಚರ್ಚೆಗೆ ಬರಲಿಲ್ಲ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿದ್ದೆ. ಅವರ ಜೊತೆ ಹೆಚ್ಚು ಹೊತ್ತು ಚರ್ಚೆ ಮಾಡಲು ಸಾಧ್ಯವಾಗಲಿಲ್ಲ. ಶಾ ಜತೆಗಿನ ಮಾತುಕತೆ ವೇಳೆಯೂ ಬಿಟ್‌ಕಾಯಿನ್‌ ವಿಚಾರ ಚರ್ಚೆಗೆ ಬರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆಗಳ ಬಳಿಯೇ ಸಾಕಷ್ಟುಮಾಹಿತಿ ಇರುತ್ತದೆ. ಹೀಗಾಗಿ ಅವರಿಗೆ ಈ ವಿಚಾರದಲ್ಲಿ ಸಾಕಷ್ಟುಮಾಹಿತಿ ಇರುವ ಹಿನ್ನೆಲೆಯಲ್ಲಿ ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ನೂರು ದಿನಗಳ ಸಾಧನೆಗೆ ಮೆಚ್ಚುಗೆ

ರಾಜ್ಯದಲ್ಲಿ ನೂರು ದಿನಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ನೂತನ ಯೋಜನೆಗಳ ಕುರಿತು ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ, ಕೆಲ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಪ್ರಧಾನಿ ಅವರಿಂದ ಹಲವು ಸಲಹೆ, ಮಾರ್ಗದರ್ಶನವೂ ಸಿಕ್ಕಿದೆ ಎಂದು ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಶಿವಕುಮಾರ್ ಉದಾಸಿ ಅಚ್ಚರಿ ಹೇಳಿಕೆ

ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಹಾಗೂ ಟೆಂಡರ್‌ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ರೈತ ವಿದ್ಯಾನಿಧಿ ಯೋಜನೆ ಯಶಸ್ಸನ್ನು ಗಮನಿಸಿ ಇತರ ರಾಜ್ಯಗಳಿಗೂ ಈ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಪ್ರಧಾನಿಯವರು ಇದೇ ವೇಳೆ ತಿಳಿಸಿದರು. ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಒಂದು ದಿಟ್ಟನಿರ್ಧಾರ. ಎಲ್ಲ ಇಲಾಖೆಗಳಲ್ಲೂ ಇದನ್ನು ಜಾರಿಗೊಳಿಸಿ ಎಂದು ಪ್ರಧಾನಿ ಸಲಹೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ ಪಡೆದ ಪ್ರಧಾನಿ ವಿಶ್ವವಿದ್ಯಾಲಯಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನೀತಿ ಅನುಷ್ಠಾನಗೊಳಿಸಿ ಎಂದು ತಿಳಿಸಿದರು. ಅಮೃತ ಯೋಜನೆಗಳ ಕುರಿತು ಹರ್ಷ ವ್ಯಕ್ತಪಡಿಸಿ, ಗ್ರಾಪಂಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಂಯೋಜನೆಗೊಳಿಸಿ, ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿ ನೇಮಿಸುವಂತೆ ತಿಳಿಸಿದರು. ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯೊಂದಿಗೆ ಸಂಯೋಜನೆ ಮಾಡುವಂತೆ ಹೇಳಿದರು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

Bitcoin Scam: ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌!

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಹಾಗೂ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ನೆರವು ನೀಡಲು ಬ್ಯಾಂಕುಗಳು ಹೆಚ್ಚಿನ ಉತ್ಸುಕತೆ ತೋರದಿರುವ ಬಗ್ಗೆ ಪ್ರಧಾನಿಯವರ ಗಮನ ಸೆಳೆದಿದ್ದು, ಈ ಸಂಬಂಧ ಬ್ಯಾಂಕುಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

click me!