
ಬೆಂಗಳೂರು(ಡಿ.08): ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮತ್ತು ಅನರ್ಹಗೊಳಿಸುವ ಸಂಬಂಧ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಶನಿವಾರ ಇಲ್ಲಿ ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.
ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 'ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಕಳೆದ ಹಲವು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ಶಾಸಕರ ವಿಚಾರವನ್ನು ಬಹಳ ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ. ಈ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥಗೊಳಿಸಲು ತೀರ್ಮಾನಿಸಲಾಗಿದೆ' ಎಂದು ಹೇಳಿದರು.
ಎಲೆಕ್ಷನ್ ಟೈಂನಲ್ಲೇ ಹೇಳ್ಬೇಕಿತ್ತಾ?' ಸಚಿವ ಜಮೀರ್ 'ಕರಿಯ' ಹೇಳಿಕೆಗೆ ಎಸ್ಟಿ ಸೋಮಶೇಖರ್ ಅಸಮಾಧಾನ
ಹಲವು ತಿಂಗಳಿಂದ ಪಕ್ಷದ ಕೆಲ ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂತೆಯೆ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.
ಸತ್ಯಶೋಧನಾ ಸಮಿತಿ ರಚನೆ:
ಸಭೆಯಲ್ಲಿ ಇತ್ತೀಚಿನ ಉಪಚುನಾವಣೆ ಸೋಲಿನ ಪರಾಮರ್ಶೆ ಮಾಡಲಾಗಿದೆ. ಶಿಗ್ಗಾಂವಿ ಮತ್ತು ಸಂಡೂರಿನ ಸೋಲಿಗೆ ಕಾರಣ ತಿಳಿಯಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಮಾಜಿ ಸಚಿವ ಎನ್,ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ತಂಡ ಎರಡೂ ಕ್ಷೇತ್ರಗಳಿಗೆ ತೆರಳಿ ಸೋಲಿನ ಬಗ್ಗೆ ಮಾಹಿತಿ ಕಲೆಹಾಕಲಿದೆ ಎಂದರು.
ಬಾಲ್ ವರಿಷ್ಠರ ಅಂಗಳದಲ್ಲಿ:
ಶಾಸಕ ಬಸನಗೌಡ ಯತ್ನಾಳ್ ಅವರು ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಈಗ ಬಾಲ್ ವರಿಷ್ಠರ ಅಂಗಳದಲ್ಲಿದೆ. ಯಾರೂ ಶಿಸ್ತು ಮೀರುವಂತಿಲ್ಲ. ಈ ಹಿಂದಿನ ಘಟನೆಗಳಿಂದ ಪಕ್ಷದ ಕಾರ್ಯಕರ್ತರಿಗೆ ಬೇಸರವಾಗಿದೆ. ಪಕದ ಬೆಳವಣಿಗೆ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸ ಬೇಕು. ಹಾದಿ-ಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ವಿಜಯೇಂದ್ರ ಉತ್ತರಿಸಿದರು.
ಶೋಭಾ- ಸೋಮಶೇಖರ್ ಮಧ್ಯೆ ತಾಕತ್ತಿನ ವಾಕ್ಸಮರ!
ಈ ಹಿಂದಿನ ಘಟನೆಗಳಿಂದ ಕಾರ್ಯಕರ್ತರಿಗೆ ಬೇಸರವಾ ಗಿದೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದಲೂ ಇದು ಒಳ್ಳೆಯ ದಲ್ಲ. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಸೋಲಿನ ಕಾರಣ ಪತ್ತೆಗಾಗಿ ಸಮಿತಿ ಇತ್ತೀಚಿನ ಶಿಗ್ಗಾಂವಿ, ಸಂಡೂರು ಉಪಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿಗೆ ಕಾರಣ ತಿಳಿಯಲು ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು ಕೋರ್ ಕಮಿಟಿ ನಿರ್ಧರಿಸಿದೆ. ಈ ತಂಡ ಎರಡೂ ಕ್ಷೇತ್ರಗಳಿಗೆ ತೆರಳಿ ಸೋಲಿನ ಬಗ್ಗೆ ಮಾಹಿತಿ ಕಲೆಹಾಕಲಿದೆ.
* ಪಕ್ಷದಲ್ಲಿನ ಭಿನ್ನಮತ ಚಟುವ ಟಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ಕೋರ್ ಕಮಿಟಿ ಸಭೆ
* ಬೆಳಗಾವಿ ಅಧಿವೇಶನ ವೇಳೆ ಭಿನ್ನಮತದ ಪರಿಣಾಮ ಆಗದಂತೆ ಕ್ರಮಕ್ಕೆ ಸೂಚನೆ
* ಯತ್ನಾಳ್ ಕೇಸು ಹೈಕಮಾಂಡ್ ಅಂಗಳದಲ್ಲಿರುವ ಹಿನ್ನೆಲೆ: ಅವರ ಉತ್ತರಕ್ಕೆ ಕಾಯಲು ನಿರ್ಧಾರ
* ಪಕ್ಷ ವಿರೋಧಿ ಚಟುವಟಿಕೆ: ಎಸ್ಟಿಎಸ್, ಹೆಬ್ಬಾರ್ ವಿರುದ್ಧ ಕ್ರಮಕ್ಕೆ ವರಿಷ್ಠರಿಗೆ ಮನವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.