
ಪಂಜಾಬ್: ಎಎಪಿ ಪಕ್ಷದ ರಾಜ್ಯಸಭಾ ಸಂಸದರಾಗಿರುವ ರಾಘವ್ ಚಡ್ಡಾ ಅವರನ್ನು ಇತ್ತೀಚೆಗೆ ಎಎಪಿ ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಹುದ್ದೆಯಿಂದ ತೆಗೆದು ಹಾಕಿತ್ತು. ಇದಾದ ಬಳಿಕ ಪಂಜಾಬ್ ಮೂಲದ ಈ ಸಂಸದ ರಾಘವ್ ಚಡ್ಡಾ ಅವರಿಗೆ ನೀಡಿದ್ದ ಜೆಡ್ ಪ್ಲಸ್ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿತ್ತು. 37 ವರ್ಷದ ರಾಘವ್ ಚಡ್ಡಾ ಅವರ ಭದ್ರತೆಗೆ ಇದ್ದ ಪಂಜಾಬ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಪ್ರಧಾನ ಕಚೇರಿಗೆ ವರದಿ ಮಾಡುವಂತೆ ಕೇಳಲಾಗಿತ್ತು. ಎಎಪಿ ಪಕ್ಷ ಹಾಗೂ ಸಂಸದ ರಾಘವ್ ಚಡ್ಡಾ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದ ಮಧ್ಯೆಈ ಬೆಳವಣಿಗೆ ನಡೆದಿದೆ.
ಆದರೆ ಪಂಜಾಬ್ ಸರ್ಕಾರ ಎಎಪಿ ಸಂಸದ ರಾಘವ್ ಚಡ್ಡಾ ಅವರ ಭದ್ರತೆಯನ್ನು ವಾಪಸ್ ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಕೇಂದ್ರದ ಎನ್ಡಿಎ ಸರ್ಕಾರ ಎಎಪಿ ಸಂಸದ ರಾಘವ್ ಚಡ್ಡಾಗೆ ಭದ್ರತೆ ಒದಗಿಸಿದೆ. ಕೆಲ ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವಾಲಯವು ಎಎಪಿ ಸಂಸದ ರಾಘವ್ ಚಡ್ಡಾ ಅವರಿಗೆ ದೆಹಲಿ ಹಾಗೂ ಪಂಜಾಬ್ನಲ್ಲಿ ಭದ್ರತೆ ಒದಗಿಸಲಿದೆ. ಹಾಗೆಯೇ ದೇಶಾದ್ಯಂತ ಅವರಿಗೆ ವೈ ಕೆಟಗರಿಯ ಭದ್ರತೆಯನ್ನು ನೀಡಲಾಗುತ್ತದೆ.
ರಾಘವ್ ಚಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ ಮತ್ತು ಬದಲಿಗೆ ಅವ ಬಗ್ಗೆ ಮೃದು ಧೋರಣೆ ತೊಡಗಿದ್ದಾರೆ ಎಂದು ಆರೋಪಿಸಿ, ಎಎಪಿ ಏಪ್ರಿಲ್ 2 ರಂದು ಅವರನ್ನು ರಾಜ್ಯಸಭೆಯಲ್ಲಿ ಉಪ ನಾಯಕನ ಸ್ಥಾನದಿಂದ ತೆಗೆದು ಹಾಕಿತು.
ಆದರೆ ತಮ್ಮದೇ ಪಕ್ಷದ ಈ ಆರೋಪಗಳನ್ನು ಸುಳ್ಳು ಎಂದ ಚಡ್ಡಾ, ಜನರ ಸಮಸ್ಯೆಗಳನ್ನು ಎತ್ತಲು ತಾನು ಸಂಸತ್ತಿಗೆ ಹೋಗಿರುವುದೇ ಹೊರತು ಗದ್ದಲ ಸೃಷ್ಟಿಸಲು ಅಲ್ಲ ಎಂದು ಹೇಳಿದರು. ರಾಘವ್ ಚಡ್ಡಾ ಅವರು ಸ್ವಾತಿ ಮಲಿವಾಲ್ ನಂತರ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಎಎಪಿಯ ಎರಡನೇ ರಾಜ್ಯಸಭಾ ಸಂಸದರಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಆಪ್ತರಾಗಿದ್ದ ಚಡ್ಡಾ:
ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಮತ್ತು ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಚಡ್ಡಾ, ಪಕ್ಷದ ವ್ಯವಹಾರಗಳಲ್ಲಿ, ವಿಶೇಷವಾಗಿ ಪಂಜಾಬ್ನಲ್ಲಿ ಮತ್ತು ದೆಹಲಿಯಲ್ಲಿ ಎಎಪಿಯ ಅಧಿಕಾರಾವಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ ಸಂಸತ್ನಲ್ಲಿ ರಾಘವ್ ಚಡ್ಡಾ ಅವರು ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಮತ್ತು ಜನರನೋವುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದು, ಪಕ್ಷಬೇಧ ಮರೆತು ಜನ ಅವರ ಕಾರ್ಯವನ್ನು ಮೆಚ್ಚಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ
ಟೆಲಿಕಾಂ ಕಂಪನಿಗಳು ನೀಡುವ 'ಮಾಸಿಕ' ರಿಚಾರ್ಜ್ ಪ್ಲ್ಯಾನ್ಗಳು 30 ದಿನಗಳ ಬದಲಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವುದರ ಬಗ್ಗೆ ಸಂಸತ್ತಿನಲ್ಲಿ ರಾಘವ್ ಚಡ್ಡ ಧ್ವನಿ ಎತ್ತಿದ್ದರು. 28 ದಿನಗಳ ವ್ಯಾಲಿಡಿಟಿಯಿಂದಾಗಿ ಗ್ರಾಹಕರು ವರ್ಷಕ್ಕೆ 12 ಬಾರಿ ಬದಲಾಗಿ 13 ಬಾರಿ ರಿಚಾರ್ಜ್ ಮಾಡಬೇಕಾಗುತ್ತದೆ. ಇದು ಗ್ರಾಹಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಚಡ್ಡಾ ವಾದಿಸಿದರು. ನೀವು ದಿನಕ್ಕೆ 2GB ಡೇಟಾಗೆ ಹಣ ಪಾವತಿಸಿರುತ್ತೀರಿ. ಆದರೆ 1.5GB ಮಾತ್ರ ಬಳಕೆಯಾದರೆ ಉಳಿದ 0.5GB ಮಧ್ಯರಾತ್ರಿ ಮಾಯವಾಗುತ್ತದೆ. ನಾವು ಹಣ ನೀಡಿದ ಡೇಟಾ ನಮಗೆ ಸಿಗಬೇಕು. ಬಳಕೆಯಾಗದ ಡೇಟಾ ಮುಂದಿನ ಅವಧಿಗೆ ವರ್ಗಾವಣೆಯಾಗಬೇಕು (Data Rollover) ಎಂದು ಆಗ್ರಹಿಸಿದರು. ರಿಚಾರ್ಜ್ ಮುಗಿದ ತಕ್ಷಣ ಇನ್ ಕಮಿಂಗ್ ಕರೆಗಳನ್ನು ಕಟ್ ಮಾಡಬಾರದು. ಕನಿಷ್ಠ ಒಂದು ವರ್ಷದವರೆಗೆ ಇನ್ ಕಮಿಂಗ್ ಮತ್ತು SMS ಸೌಲಭ್ಯ ಇರಬೇಕು ಎಂದು ಅವರು ಶಿಫಾರಸು ಮಾಡಿದರು.
ಇದನ್ನೂ ಓದಿ: ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.