TMC ನಾಯಕರ ಜೊತೆ ಸುವೇಂದು ಅಧಿಕಾರಿ ಚರ್ಚೆ: ಬಿಜೆಪಿ ತೊರೆವ ಬಗ್ಗೆ ಗುಸುಗುಸು

By Kannadaprabha NewsFirst Published Oct 25, 2022, 1:40 PM IST
Highlights

ಪಕ್ಷ ತೊರೆದ ಎಲ್ಲಾ ಬಹುತೇಕ ನಾಯಕರನ್ನು ಮರಳಿ ಟಿಎಂಸಿಗೆ ಕರೆ ತರುವಲ್ಲಿ ಯಶಸ್ವಿಯಾದ ಸಿಎಂ ಮಮತಾ, ಸುವೇಂದು ಅವರನ್ನೂ ಮರಳಿ ಪಕ್ಷಕ್ಕೆ ಕರೆಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ.

ಸುರಿ: ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ (West Bengal Leader of Opposition), ಬಿಜೆಪಿಯ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಲದ ಸುರಿಯ ಕಾಳಿ ದೇಗುಲದಲ್ಲಿ (Kali Temple) ಕೆಲ ಟಿಎಂಸಿ (TMC) ಕೌನ್ಸಿಲರ್‌ಗಳ (Councillor) ಜೊತೆ ಚರ್ಚೆ ಮಾಡಿದ ವಿಡಿಯೋವೊಂದು ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಪಕ್ಷ ತೊರೆದ ಬಹುತೇಕ ನಾಯಕರನ್ನು ಮರಳಿ ಟಿಎಂಸಿಗೆ ಕರೆ ತರುವಲ್ಲಿ ಯಶಸ್ವಿಯಾದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸುವೇಂದು ಅವರನ್ನೂ ಮರಳಿ ಪಕ್ಷಕ್ಕೆ ಕರೆಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ. ಆದರೆ ಇದೊಂದು ಆಕ್ಮಸಿಕ ಭೇಟಿ. ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.

ಶನಿವಾರದಂದು ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿರುವ ಬಾಮ್ನಿ ಕಾಳಿ ದೇವಸ್ಥಾನದಲ್ಲಿ ಸಭೆ ನಡೆದಿದ್ದು, ಕಾಳಿ ಪೂಜೆ ಆಚರಣೆಗೆ ಮುನ್ನ ಸುವೇಂದು ಅಧಿಕಾರಿ ಹಾಗೂ ಟಿಎಂಸಿ ಕೌನ್ಸಿಲರ್‌ಗಳ ಜತೆ ಭೇಟಿ ನಡೆದಿದೆ. ಸೂರಿ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಉಜ್ವಲ್ ಚಟರ್ಜಿ ಮತ್ತು ಕುಂದನ್ ಡೇ ಸೇರಿ ಇಬ್ಬರು ಕೌನ್ಸಿಲರ್‌ಗಳು ಹಿರಿಯ ಬಿಜೆಪಿ ನಾಯಕ ದೇವಸ್ಥಾನಕ್ಕೆ ಕಾಲಿಟ್ಟಾಗ ದೇವಸ್ಥಾನದಲ್ಲಿ ಉಪಸ್ಥಿತರಿದ್ದರು ಮತ್ತು ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕನೊಂದಿಗೆ ಮಾತನಾಡಿದರು. ನಂತರ, ಸುವೇಂದು ಅಧಿಕಾರಿ ಸಾಮಾಜಿಕ ಮಾಧ್ಯಮದಲ್ಲಿ ಸಭೆಯ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಉಜ್ವಲ್ ಚಟರ್ಜಿ ಅವರೊಂದಿಗೆ ಮಾತನಾಡುತ್ತಿದ್ದಾರೆ.

Latest Videos

ಇದನ್ನು ಓದಿ: ಡಿಸೆಂಬರ್‌ನಲ್ಲಿ Mamata Banerjee ಬಂಧನ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಭವಿಷ್ಯ

ಜಾನುವಾರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಬಿರ್ಭುಮ್‌ ಜಿಲ್ಲಾ ಟಿಎಂಸಿ ಅಧ್ಯಕ್ಷ ಅನುಬ್ರತಾ ಮೊಂಡಲ್ ಅವರು ಸಿಬಿಐ ಕಸ್ಟಡಿಯಲ್ಲಿದ್ದಾರೆ. ಹಾಗೂ, ಸುವೇಂದು ಅಧಿಕಾರಿ ಅನುಬ್ರತಾ ಮೊಂಡಲ್ ಅವರನ್ನು ಪದೇ ಪದೇ ಟೀಕಿಸಿದ್ದಾರೆ. ನಂದಿಗ್ರಾಮ ಶಾಸಕರಾದ ಸುವೇಂದು ಅಧಿಕಾರಿ ಟಿಎಂಸಿಯ ಮಾಜಿ ನಾಯಕ. ಅವರು 2020 ರಲ್ಲಿ ಪಶ್ಚಿಮ ಬಂಗಾಳ ರಾಜ್ಯ ಚುನಾವಣೆಯ ಮೊದಲು ಬಿಜೆಪಿಗೆ ಸೇರಿಕೊಂಡಿದ್ದರು ಮತ್ತು ಟಿಎಂಸಿ ಸರ್ಕಾರ ಹಾಗೂ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯ ಕಟು ಟೀಕಾಕಾರರಾಗಿದ್ದಾರೆ.

ಇನ್ನು, ಟಿಎಂಸಿ ಕೌನ್ಸಿಲರ್‌ಗಳು ಈ ಸಭೆಯನ್ನು "ಕಾಕತಾಳೀಯ" ಮತ್ತು "ಯಾವುದೇ ರಾಜಕೀಯ ಪ್ರಾಮುಖ್ಯತೆ ಇಲ್ಲದ್ದು" ಎಂದು ವಿವರಿಸಿದ್ದಾರೆ.  “ನಾನು ಪ್ರತಿ ವರ್ಷ ಕಾಳಿ ಪೂಜೆಗೆ ಮೊದಲು ಬಾಮ್ನಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಶನಿವಾರ ನಾನು ಇದ್ದಕ್ಕಿದ್ದಂತೆ ಸುವೇಂದು ಅಧಿಕಾರಿಯನ್ನು ದೇವಸ್ಥಾನದಲ್ಲಿ ಭೇಟಿಯಾಗಿ ಸೌಜನ್ಯದಿಂದ ಮಾತನಾಡಿದೆ. ಅವರು ಮೊದಲು ನಮ್ಮ ಪಕ್ಷದಲ್ಲಿ (ಟಿಎಂಸಿ) ಇದ್ದುದರಿಂದ, ನಮಗೆ ಒಬ್ಬರಿಗೊಬ್ಬರು ಪರಿಚಯವಿದೆ’’ ಎಂದು ಕೌನ್ಸಿಲರ್ ಉಜ್ವಲ್‌ ಚಟರ್ಜಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಇನ್ನೊಂದೆಡೆ, "ನಾವು ದೇವಸ್ಥಾನಕ್ಕೆ ರಾಜಕೀಯವನ್ನು ತೆಗೆದುಕೊಂಡುಹೋಗಲ್ಲ. ಟಿಎಂಸಿ ಯಾವಾಗಲೂ ವಿರೋಧ ಪಕ್ಷದ ನಾಯಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತದೆ." ಎಂದು ಕುಂದನ್ ಡೇ ಹೇಳಿದ್ದಾರೆ. ಇನ್ನು, ಈ ಸಭೆಯ ಬಗ್ಗೆ ಜಿಲ್ಲಾ ಟಿಎಂಸಿ ನಾಯಕತ್ವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಾಮ್ನಿ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಇಲ್ಲಿ ಎರಡು ಕಾಳಿ ಪೂಜೆಗಳನ್ನು ಉದ್ಘಾಟಿಸಿದ್ದರು. ಸೋಮವಾರ ರಾಜ್ಯಾದ್ಯಂತ ಕಾಳಿಪೂಜೆಯನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ನನ್ನ ಸಂಪರ್ಕದಲ್ಲಿ 21 TMC ಶಾಸಕರು: ಬಿಜೆಪಿ ನಾಯಕ Mithun Chakraborty

ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬಾ ಸಹಾ ಭಾನುವಾರ ಮಾತನಾಡಿದ್ದು, “ಹಲವು ಟಿಎಂಸಿ ನಾಯಕರು ಬಿಜೆಪಿ ಸೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮಗೆ ಯಾವುದೇ ಆತುರವಿಲ್ಲ. ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಅವರು ನಮ್ಮ ಕಾರ್ಯಕರ್ತರಿಗೆ ಮಾಡಿದ್ದನ್ನು ನಾವು ಮರೆತಿಲ್ಲ’’ ಎಂದು ಹೇಳಿದ್ದಾರೆ. 2021 ರಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಹಲವಾರು ಕೇಸರಿ ಪಕ್ಷದ ಕಾರ್ಯಕರ್ತರು ಬಲಿಯಾಗಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಟಿಎಂಸಿ ಈ ಆರೋಪವನ್ನು ಆಧಾರರಹಿತ ಎಂದು ಹೇಳಿತ್ತು. 

ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!

click me!