ಸಚಿವ ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಭಗವಂತ ಖೂಬಾ ಆಗ್ರಹ

By Kannadaprabha NewsFirst Published Aug 24, 2023, 11:12 AM IST
Highlights

ಹೊರಗುತ್ತಿಗೆ ಹುದ್ದೆಗಳನ್ನು ನನ್ನ ಗಮನಕ್ಕೆ ತಂದು ನೇಮಕಾತಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಪತ್ರ ಬರೆದಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋಟ್‌ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಬೀದರ್‌ (ಆ.24): ಹೊರಗುತ್ತಿಗೆ ಹುದ್ದೆಗಳನ್ನು ನನ್ನ ಗಮನಕ್ಕೆ ತಂದು ನೇಮಕಾತಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಪತ್ರ ಬರೆದಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋಟ್‌ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಇದು ಈಶ್ವರ ಖಂಡ್ರೆ ಅವರು ಅಧಿಕಾರಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ, ಸರ್ಕಾರದಲ್ಲಿ ಯಾವುದೇ ನೇಮಕಾತಿಗಳು ಪಾರದರ್ಶಕ ಮತ್ತು ನ್ಯಾಯಯುತ ಹಾಗೂ ಅಯ್ಕೆ ನಿಯಮಾವಳಿ ಹಾಗೂ ಅವರ ಅರ್ಹತೆ ಮೇಲೆ ಆಯ್ಕೆ ಮಾಡುವುದು ಸರ್ಕಾರದ ನಿಯಮ. ಆದರೆ ಒಬ್ಬ ಉಸ್ತುವಾರಿ ಸಚಿವರಾಗಿ ಇವರು ಬಡವರಿಗೆ ಮತ್ತು ನಿಜವಾದ ಅರ್ಹರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ, ತಮ್ಮದೆಯಾದ ಒಂದು ಸ್ವತಂತ್ರ ನಿಯಮವನ್ನು ರೂಪಿಸಿ ತಾವು ಹೇಳಿದಂತೆ ನಡೆಯಬೇಕೆಂಬುವುದು ಇವರ ಪತ್ರದ ಸಾರಾಂಶವಾಗಿದೆ ಎಂದು ಸಚಿವ ಖೂಬಾ ಪತ್ರದಲ್ಲಿ ತಿಳಿಸಿದ್ದಾರೆ.

‘ಗೃಹ ಆರೋಗ್ಯ’ ಯೋಜನೆಗೆ ಸರ್ಕಾರದ ಚಿಂತನೆ: ಸಚಿವ ದಿನೇಶ ಗುಂಡೂರಾವ್‌

ನೌಕರರ ನೇಮಕಾತಿಯನ್ನು ನನ್ನ ಗಮನಕ್ಕೆ ತಂದು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಮುಂದುಮಾಡಿ, ಭ್ರಷ್ಟಾಚಾರದ ಮೂಲಕ ತಾವು ಹೇಳಿದವರನ್ನೇ ನೇಮಕ ಮಾಡಿ ಎನ್ನುವ ಭಯದ ವಾತಾವರಣ ನಿರ್ಮಾಣ ಮಾಡಿ ಅಧಿಕಾರಿಗಳ ಮೂಲಕ ಹಣ ಸಂಗ್ರಸಲು ಸಂಚು ರೂಪಿಸುತ್ತಿರುವುದು ಕಂಡು ಬರುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಈಶ್ವರ ಖಂಡ್ರೆಯವರು, ತಮ್ಮ ಸಿದ್ಧಾಂತ, ನಂಬಿಕೆ ಮತ್ತು ಸರ್ಕಾರದ ನಿಯಮಾವಳಿಗಳ ಮೇಲೆ ನಂಬಿಕೆ ಇಡದೆ ತಮ್ಮದೆ ಸ್ವತಂತ್ರ ನಿಯಮವನ್ನು ರಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವುದು ತಮ್ಮ ಗಮನಕ್ಕೆ ತರಬಯಸುತ್ತೇನೆ. ಜಿಲ್ಲೆಯ ಜನತೆ ಸಹ ಇದರಿಂದ ಬೇಸರಗೊಂಡು ಜನರ ಆಕ್ರೋಶ ಸ್ಫೋಟಗೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

2047ರ ವೇಳೆಗೆ ಭಾರತ ಸೂಪರ್‌ ಪವರ್‌: ಶೋಭಾ ಕರಂದ್ಲಾಜೆ

ಈಶ್ವರ ಖಂಡ್ರೆ ಅವರಿಗೆ ದೇಶದ ಸಂವಿಧಾನ ಹಾಗೂ ಆಡಳಿತ ಯಂತ್ರದ ಮೇಲೆ ನಂಬಿಕೆಯಿಲ್ಲ, ವಿಶೇಷವಾಗಿ ಸರ್ಕಾರಿ ನೌಕರರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ಪತ್ರ ಬರೆದು ದುಸ್ಸಾಹಸಕ್ಕೆ ಕೈ ಹಾಕಿರುವುದರಿಂದ ತಕ್ಷಣವೇ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಲು ಕ್ರಮ ವಹಿಸಬೇಕೆಂದು ಸಚಿವ ಖೂಬಾ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

click me!