
ಬೆಂಗಳೂರು (ಆ.24): ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಜಾಗಾಗಿ ತಕರಾರು ಅರ್ಜಿ ಸಲ್ಲಿಸದೇ ರಾಜ್ಯ ನೀರಿಗಾಗಿ ಸಂಕಷ್ಟಪಡುತ್ತಿರುವ ಕಾಲದಲ್ಲೂ ತಮಿಳುನಾಡಿಗೆ ನೀರು ಹರಿಸಿದ್ದಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ತಮಿಳುನಾಡಿಗೆ ನೀರು ಬಿಡುವ ಮೊದಲೇ ಸರ್ವ ಪಕ್ಷಗಳ ಸಭೆ ಕರೆದು ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ, ನ್ಯಾಯಾಧಿಕರಣ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡದೇ ನೀರು ಬಿಟ್ಟನಂತರ ಸರ್ವ ಪಕ್ಷದ ಸಭೆ ಕರೆದಿರುವುದಕ್ಕೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರು ಆಕ್ಷೇಪ ವ್ಯಕ್ತಪಡಿಸಿದರು
ಸೌಜನ್ಯ ಹತ್ಯೆ ಮರುತನಿಖೆಗೆ ಕೇಂದ್ರಕ್ಕೆ ಪತ್ರ: ಸಿದ್ದರಾಮಯ್ಯ
ರಾಜ್ಯದ ಜಲ ವಿವಾದಗಳ ಕುರಿತು ಬುಧವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಈ ನಾಯಕರು, ತಮಿಳುನಾಡಿಗೆ ನೀರು ಬಿಟ್ಟು ಈಗ ಸರ್ವಪಕ್ಷ ಸಭೆ ಕರೆದಿರುವ ಸರ್ಕಾರದ ನಡೆ ಸರಿಯಲ್ಲ. ಮೊದಲೇ ಕರೆಯಬೇಕಿತ್ತು. ತಡವಾಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ತಮಿಳುನಾಡಿಗೆ ನಾವು ಹೆಚ್ಚು ನೀರು ಬಿಟ್ಟಿಲ್ಲ ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ರಾಜ್ಯದ ರೈತರಿಗೆ ಎಷ್ಟುನೀರು ಹರಿಸಿದೆ ಎಂಬುದನ್ನೂ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪ್ರತಿಪಕ್ಷಗಳು ನೆಲ, ಜಲ, ಭಾಷೆ ವಿಚಾರದಲ್ಲಿ ಪ್ರಶ್ನೆ ಮಾಡಿದರೆ ರಾಜಕೀಯ ಎಂದು ಭಾವಿಸಬಾರದು. ನೀರು ಬಿಡುವ ಮೊದಲೇ ಸಭೆ ಕರೆದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ನೀರು ಬೇಕಾದರೆ ರೈತರೇ ನ್ಯಾಯಾಲಯಕ್ಕೆ ಹೋಗಲಿ ಎನ್ನುವುದಾದರೆ ಸರ್ಕಾರ ಏಕೆ ಬೇಕು. ಇನ್ನಾದರೂ ಸರ್ಕಾರ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಹೇಳಿದ್ದಾಗಿ ತಿಳಿದು ಬಂದಿದೆ.
ಸಿಎಂ ಸಮರ್ಥನೆ: ಪ್ರತಿಪಕ್ಷಗಳ ಚಾಟಿಗೆ ಸರ್ಕಾರವೂ ಸಮರ್ಥವಾಗಿಯೇ ಪ್ರತಿಕ್ರಿಯೆ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಈ ವರೆಗೆ 86.38 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ನಾವು 26 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದ್ದೇವೆ. ಹಿಂದಿನ ಸರ್ಕಾರಗಳಲ್ಲಿ ಇಂತಹ ಸಂಕಷ್ಟದ ಸಮಯದಲ್ಲಿ ಎಷ್ಟೆಷ್ಟುನೀರು ಬಿಡಲಾಗಿದೆ ಎಂಬುದು ಗೊತ್ತಿದೆ. ನಾವು ರಾಜ್ಯದ ರೈತರು ಹಾಗೂ ಜನರ ಹಿತ ರಕ್ಷಣೆಗೆ ಬದ್ಧವಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಈ ಹಿಂದೆ ನೀರು ಹರಿಸದೆ ನ್ಯಾಯಾಲಯದ ಮೊರೆ ಹೋದಾಗ ಮೊದಲು ತಮಿಳುನಾಡಿಗೆ ನೀರು ಹರಿಸಿ ನಂತರ ನಿಮ್ಮ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದ ಉದಾಹರಣೆಗಳಿವೆ.
ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಮತ್ತಷ್ಟು ಕಾಲ ವಿಳಂಬ: ಯಾಕೆ ಗೊತ್ತಾ?
ಪ್ರತಿಪಕ್ಷಗಳು ಅನಗತ್ಯ ಟೀಕೆ ಮಾಡದೆ ತಮ್ಮ ಸಲಹೆಗಳನ್ನು ಸರ್ಕಾರಕ್ಕೆ ನೀಡಿದರೆ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಅಲ್ಲದೆ, ಅವರು ಸೂಕ್ತ ಸಮಯದಲ್ಲೇ ಸರ್ವಪಕ್ಷ ಸಭೆ ಕರೆಯಲಾಗಿದೆ. ಜೂನ್, ಜುಲೈನಲ್ಲಿ ಇಷ್ಟು ತಕ್ಕಷ್ಟು ಮಳೆಯಾಗಿತ್ತು. ಇಷ್ಟುಸಮಸ್ಯೆ ಇರಲಿಲ್ಲ. ಆಗಸ್ಟ್ನಲ್ಲಿ ತೀವ್ರ ಕೊರತೆ ಉಂಟಾಗಿದ್ದರಿಂದ ಸಂಕಷ್ಟಎದುರಾಗಿದೆ. ಹಾಗಾಗಿ ಸರ್ವಪಕ್ಷ ಸಭೆ ಕರೆಯಲಾಗಿದೆ. ನೀರು ಬಿಟ್ಟಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಹಿಂದಿನ ಸರ್ಕಾರಗಳಲ್ಲೂ ಇಂತಹ ಸ್ಥಿತಿ ಎದುರಾಗಿದೆ. ಎಂದು ಸಭೆಯಲ್ಲಿ ಭಾಗವಹಿಸಿದ್ದ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.