
ನವದೆಹಲಿ : 2023ರಲ್ಲಿ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ, ಆಧಾರ ರಹಿತ ಎಂದು ಕರೆದಿದೆ. ಸಾರ್ವಜನಿಕರು ಆನ್ಲೈನ್ ಮೂಲಕ ಇನ್ನೊಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಫ್ಯಾಕ್ಟ್ಚೆಕ್ ಮೂಲಕ ಟ್ವೀಟರ್ನಲ್ಲಿ ಹೇಳಿಕೆ ನೀಡಿರುವ ಆಯೋಗ, ‘ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಾಕ್ಷಣ ಮತಪಟ್ಟಿಯಿಂದ ಹೆಸರು ರದ್ದಾಗುವುದಿಲ್ಲ. ಇಂಥ ಪ್ರಕರಣಗಳಲ್ಲಿ ಖುದ್ದು ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ವಿಚಾರದಲ್ಲಿ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪ ತಪ್ಪು ಹಾಗೂ ಆಧಾರರಹಿತ. ಅವರಿಗೆ ಈ ಕುರಿತು ಸೂಕ್ತ ಮಾಹಿತಿ ಇದ್ದಂತಿಲ್ಲ’ ಎಂದು ಆಯೋಗ ತಿಳಿಸಿದೆ.
‘ರಾಹುಲ್ ಆರೋಪದಂತೆ 2023ರಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಮತದಾರರ ಹೆಸರು ರದ್ದುಪಡಿಸುವ ಪ್ರಯತ್ನ ನಡೆದಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಈ ಕುರಿತು ಚುನಾವಣಾ ಆಯೋಗವೇ ಖುದ್ದು ಎಫ್ಐಆರ್ ದಾಖಲಿಸಿದೆ. ಇನ್ನು ಆಳಂದದಲ್ಲಿ 2018ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೆ, 2023ರಲ್ಲಿ ಕಾಂಗ್ರೆಸ್ಸಿಗರೇ ಆದ ಬಿ.ಆರ್.ಪಾಟೀಲ್ ಗೆದ್ದಿದ್ದಾರೆ’ ಎಂದೂ ಆಯೋಗ ಸ್ಪಷ್ಟನೆ ನೀಡಿದೆ.
ಜ್ಞಾನೇಶ್ ಮೇಲಿನ ಆರೋಪಕ್ಕೆ ಕಿಡಿ:
ಇನ್ನು ರಾಹುಲ್ ಗಾಂಧಿ ನೇರವಾಗಿ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹೆಸರೆತ್ತಿ ಆರೋಪ ಮಾಡುತ್ತಿರುವ ಕುರಿತೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಇಂಥ ಆರೋಪ ಮಾಡುತ್ತಿರುವುದು ದುರದೃಷ್ಟಕರ. ಜ್ಞಾನೇಜ್ ಕುಮಾರ್ ಅವರು ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಷ್ಟೇ ಆಗಿದೆ. ಕಳೆದ ವರ್ಷ ನಡೆದ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿ ಕುಮಾರ್ ಅವರು ಬಾಧ್ಯಸ್ಥರು ಹೇಗಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.