ಕನ್ನಡ ವಚನ ಸಾಹಿತ್ಯ ಕನ್ನಡದ ದೊಡ್ಡ ಶಕ್ತಿ: ಮನು ಬಳಿಗಾರ್‌

By Kannadaprabha NewsFirst Published Sep 28, 2020, 8:11 AM IST
Highlights

ಸಾಗರೋತ್ತರ ಕನ್ನಡಿಗರು ಯಕೆ, ಯುಎಸ್‌ಎ, ಆಸ್ಪ್ರೇಲಿಯಾ, ಕೆನಡಾ, ದುಬೈ, ಜಕರ್ತಾ ಮತ್ತು ಇಥೋಪಿಯಾಗಳಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದು ಉತ್ತಮ ಸಂಗತಿ| ನೀವೆಲ್ಲ ಸೇರಿ ಜಾಗವನ್ನು ದಾನವಾಗಿ ನೀಡಿದರೆ ಕನ್ನಡ ಭವನ ಸ್ಥಾಪಿಸಲು ನಾವು ಸಿದ್ಧ ಎಂದ ಮನು ಬಳಿಗಾರ್‌| 
 

ಬೆಂಗಳೂರು(ಸೆ.28): ಕನ್ನಡ ವಚನ ಸಾಹಿತ್ಯ ಮತ್ತು ಕವನ ಕನ್ನಡದ ದೊಡ್ಡ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ಹೇಳಿದ್ದಾರೆ.

ಭಾನುವಾರ ನಡೆದ ಸಾಗರೋತ್ತರ ಕನ್ನಡಿಗರ 17ನೇ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಪ, ರನ್ನ, ಬಸವಣ್ಣ ದಾಸಾದಿ ದಾಸರು ಶತಮಾನಗಳಿಂದ ಕನ್ನಡವನ್ನು ಬೆಳೆಸುತ್ತಾ ಬಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಸಂಸತ್‌ ಇದೆ. ಈ ಸಂಸತ್‌ ಪರಿಕಲ್ಪನೆ ಬಸವಣ್ಣನವರಿಂದ ಬಂದಿದೆ. ಅವರು ಸಾವಿರ ವರ್ಷ ಹಿಂದಿನವರಾದರೂ ಸಾವಿರ ವರ್ಷ ಮುಂದಿನವರೂ ಆಗಿದ್ದಾರೆ. ಅಂತಹ ಕಾಲಜ್ಞಾನ ಹೊಂದಿದ್ದ ಮಹಾನ್‌ ವ್ಯಕ್ತಿಗಳನ್ನು ಪಡೆದ ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಡೆಬೇಕು. ಅವರನ್ನು ಸದಾ ಸ್ಮರಿಸುತಾ ಕನ್ನಡತನವನ್ನು ಬೆಳೆಸಬೇಕು ಎಂದರು.

ಹಿಂದಿ ಹೊರತಾಗಿ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಈ ಪ್ರಶಸ್ತಿ ಪಡೆದ ಮಹಾನ್‌ ವ್ಯಕ್ತಿಗಳು ತಮ್ಮ ವೈಚಾರಿಕತೆ ಮೂಲಕ ಕನ್ನಡವನ್ನು ಪ್ರಸಾರ ಮಾಡಿದರು. ಹೀಗಾಗಿ ಕನ್ನಡ ಜಗತ್ತಿನ ಮಹತ್ವದ ಭಾಷೆಗಳಲ್ಲಿ ಸ್ಥಾನ ಪಡೆದಿದೆ. 55 ದೇಶದ ಕನ್ನಡಿಗರು ಒಗ್ಗೂಡಿ ಈ ಕಾರ್ಯಕ್ರಮ ಆಯೋಜಿಸಲು ಕನ್ನಡ ಭಾಷೆಯೇ ಕಾರಣ. ನಿಮ್ಮಲ್ಲಿ ಯಾರಾದರೂ ಗುಣಮಟ್ಟದ ಕಥೆ-ಕವನ ಬರೆದಿದ್ದರೆ, ಪರಿಷತ್ತಿನ ಆಡಳಿತ ಮಂಡಳಿ ಮುಖಾಂತರ ಪರಿಶೀಲಿಸಿ ಪ್ರಕಟಿಸುವುದಾಗಿ ಹೇಳಿದರು.

ಜನವರಿ-ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ

ಸಾಗರೋತ್ತರ ಕನ್ನಡಿಗರು ಯಕೆ, ಯುಎಸ್‌ಎ, ಆಸ್ಪ್ರೇಲಿಯಾ, ಕೆನಡಾ, ದುಬೈ, ಜಕರ್ತಾ ಮತ್ತು ಇಥೋಪಿಯಾಗಳಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದು ಉತ್ತಮ ಸಂಗತಿ. ನೀವೆಲ್ಲ ಸೇರಿ ಜಾಗವನ್ನು ದಾನವಾಗಿ ನೀಡಿದರೆ ಕನ್ನಡ ಭವನ ಸ್ಥಾಪಿಸಲು ನಾವು ಸಿದ್ಧ ಎಂದರು.

ಸಾಗರೋತ್ತರ ಕನ್ನಡಿಗರ ಸಂಘಟನೆಯ ಉಪಾಧ್ಯಕ್ಷ ಗೋಪಾಲ್‌ ಕುಲಕರ್ಣಿ (ಯುಕೆ), ಖಜಾಂಚಿ ಬಸವ ಪಾಟೀಲ್‌(ಯುಕೆ), ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ (ದುಬೈ), ಸಂಘಟನಾ ಕಾರ್ಯದರ್ಶಿ ಹೇಮೆಗೌಡ ಮಧು (ಇಟಲಿ), ಜಂಟಿ ಕಾರ್ಯದರ್ಶಿ ರವಿ ಮಹಾದೇವ (ಸೌದಿ ಆರೇಬಿಯಾ) ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
 

click me!