
ಬೆಂಗಳೂರು (ಏ.24): ಪಹಲ್ಗಾಮ್ನಲ್ಲಿ ಉಗ್ರರು ಪೈಶಾಚಿಕ ದಾಳಿ ನಡೆಸಿದರು. ಸಂತ್ರಸ್ಥ ಕುಟುಂಬದವರೇ ಉಗ್ರರು ಧರ್ಮ ಯಾವುದೆಂದು ಕೇಳು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಸ್ವತಃ ಅಸಾದುದ್ದೀನ್ ಓವೈಸಿ 'ಧರ್ಮ ಕೇಳಿ ಗುಂಡು ಹೊಡೆದಿದ್ದು ತಪ್ಪು' ಎಂದಿದ್ದಲ್ಲದೆ, ಉಗ್ರರ ಕೃತ್ಯವನ್ನು ಖಡಾಖಂಡಿತವಾಗಿ ಟೀಕಿಸಿದ್ದರು. ಆದರೆ, ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಮಾತ್ರ ಮಾನವೀಯತೆಯೇ ಮೊದಲ ಧರ್ಮ ಎಂದಿದ್ದಲ್ಲದೆ, ಧರ್ಮ ಕೇಳಿ ಉಗ್ರರು ಗುಂಡು ಹಾರಿಸಿಯೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಕಾಂಗ್ರೆಸ್ನ ಕಾರ್ಯಕರ್ತೆಯೊಬ್ಬರು ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು,ಆಕೆಯ ಪ್ರಕಾರ, 'ಭಾರತದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ. ನಾನು ಕೂಡ ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿಯೇ ಇದ್ದೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಉಗ್ರರು ಸಾಯಿಸುವ ಮುನ್ನ ನೀನು ಹಿಂದೂನೋ, ಮುಸ್ಲಿಮೋ ಎಂದು ಕೇಳಿಯೇ ಇಲ್ಲ. ಎಲ್ಲವೂ ಸುಳ್ಳು ಸುದ್ದಿ' ಎಂದಿದ್ದಾರೆ.
ಅಲ್ಲಿದ್ದ ಮುಸ್ಲಿಮರು ಎಲ್ಲರಿಗೂ ಸಹಾಯ ಮಾಡಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ನನ್ನ ಡ್ರೈವರ್ ಕೂಡ ಮುಸ್ಲಿಂ. ನನ್ನ ಜೀವವನ್ನಾದರೂ ಬೇಕಾದರೆ ಕೊಡುತ್ತೇನೆ, ಹಿಂದೂಗಳಿಗೆ ಏನೂ ಮಾಡಲು ಬಿಡುವುದಿಲ್ಲ ಎಂದರು. ಅಷ್ಟು ಒಳ್ಳೆಯವರು ಮುಸ್ಲಿಂ ಸಮುದಾಯವರು. ಆದರೆ ಹಿಂದೂ-ಮುಸ್ಲಿಂ ಎಂದು ಕೇಳುವ ಮೂಲಕ ಉಗ್ರರು ಸಾಯಿಸಿದ್ದಾರೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾಳೆ ಈಕೆ. ಇಲ್ಲಿ ಧರ್ಮ- ಧರ್ಮದ ನಡುವೆ ಏನೂ ಇಲ್ಲ. ಇಲ್ಲಿ ಇರುವುದು ಮಾನವೀಯತೆಯೇ ಎಂದು ಹೇಳಿದ್ದಳು.
ಆಕೆಯ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ,
ಪೆಹಲ್ಗಾಮ್ ಭಯೋತ್ಪಾದಕ ದಾಳಿಯಿಂದ 27 ಜನರ ಅತ್ಯಮೂಲ್ಯ ಜೀವಹಾನಿಯಾಗಿದೆ, ಪ್ರವಾಸೋದ್ಯಮವನ್ನೇ ಜೀವನಾಧಾರವಾಗಿಸಿಕೊಂಡಿದ್ದ ಪೆಹಲ್ಗಾಮ್ ಜನತೆಯ ಜೀವನಕ್ಕೂ ಹಾನಿಯಾಗಿದೆ. ಆದರೆ, ದಾಳಿಯ ಮರುಕ್ಷಣವೇ #GodhiMedia ಗಳ ಸ್ಟುಡಿಯೋಗಳಲ್ಲಿ ಹಿಂದೂ ಮುಸ್ಲಿಂ ಬೆಂಕಿ ಹಚ್ಚುವ ಬೆಂಕಿಪಟ್ಟಣಗಳು ತಯಾರಾಗಿಬಿಟ್ಟವು.
ಇಂಟೆಲಿಜೆನ್ಸ್ ವೈಫಲ್ಯವಾಗಿದ್ದೇಕೆ? ಪ್ರವಾಸಿ ಸ್ಥಳದಲ್ಲಿ ಸೈನ್ಯ ನಿಯೋಜಿಸದೆ ಭದ್ರತಾ ವೈಫಲ್ಯವಾಗಿದ್ದೇಕೆ? ಕೋವಿಡ್ ನಂತರ ನೇಮಕಾತಿ ನಡೆಸದೆ 1.8 ಲಕ್ಷ ಯೋಧರನ್ನು ಕಡಿಮೆಗೊಳಿಸಿದ್ದೇಕೆ? ಲೇಸರ್ ಬೇಲಿ ಏನಾಯ್ತು? ಎಂದು ಸರ್ಕಾರವನ್ನು ಪ್ರಶ್ನೆ ಮಾಡುವ ಬದಲು ಸರ್ಕಾರದ ಮರ್ಯಾದೆ ಉಳಿಸುವ ಸ್ಕ್ರಿಪ್ಟ್ ತಯಾರಿಗೆ ಇಳಿದವು ಮಾಧ್ಯಮಗಳು.
ಗುಂಡಿಟ್ಟವರು ಭಾರತದ ಬಾಹ್ಯ ದಾಳಿಕೋರರಾದರೆ, ಇವರು ಭಾರತದ ಅಂತರಾತ್ಮಕ್ಕೆ ಕಿಚ್ಚು ಹಚ್ಚುವ ಆಂತರ್ಯದ ದಾಳಿಕೋರರು.ಪೆಹಲ್ಗಾಮ್ ದಾಳಿಯಲ್ಲಿ ಸಿಲುಕಿದ್ದ ಪ್ರಜ್ಞಾವಂತ ಯುವತಿಯೊಬ್ಬರು ಬಿಜೆಪಿಯ ಮಡಿಲ ಮಾಧ್ಯಮಗಳಿಗೆ ಕಪಾಳಮೋಕ್ಷವೆನ್ನುವಂತೆ ಸತ್ಯವನ್ನು ತೆರೆದಿಟ್ಟಿದ್ದಾರೆ,
ಮಾನವಿಯತೆಗೆ ಜಾತಿ, ಧರ್ಮಗಳ ಹಂಗಿಲ್ಲ, ದಾಳಿಯಾದಾಗ ಪೆಹಲ್ಗಾಮ್ ನ ಸ್ಥಳೀಯರು ಜಾತಿ ಧರ್ಮಗಳನ್ನು ನೋಡದೆ, ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರನ್ನು ರಕ್ಷಿಸಿದ್ದಾರೆ, ಅದರಲ್ಲೊಬ್ಬರು ತಮ್ಮ ಜೀವವನ್ನೂ ಕಳೆದುಕೊಂಡಿದ್ದಾರೆ. "ಮಾನವಿಯತೆಯೇ ಮೊದಲ ಧರ್ಮ" ಎಂಬ ಭಾರತೀಯರ ನೈಜ ಮನಸ್ಥಿತಿಯ ಮೇಲೆ ದಾಳಿ ಮಾಡುವವರ ಎದೆಗೆ ಈ ಯುವತಿಯ ಮಾತುಗಳು ನಾಟಲಿ ಎಂದು ಆಶಿಸುತ್ತೇನೆ.
ಪ್ರಿಯಾಂಕ್ ಖರ್ಗೆ ಅವರೇ, ಘಟನೆ ಆದ ಬಳಿಕ ಅಲ್ಲಿರುವ ಮುಸ್ಲಿಮರು ಸಹಾಯ ಮಾಡಿದ್ದರು. ಇಡೀ ಘಟನೆಯಲ್ಲಿ ಒಬ್ಬ ಮುಸ್ಲಿಂ ಕೂಡ ಹತನಾಗಿದ್ದಾನೆ ಅನ್ನೋದನ್ನ ಯಾರೂ ಕೂಡ ಅಲ್ಲಗಳೆಯುತ್ತಿಲ್ಲ. ಆದರೆ, ನಿಮ್ಮ ಟ್ವೀಟ್ನ ಮೂಲಕ ಉಗ್ರರು ಧರ್ಮ ಕೇಳಿ ಗುಂಡು ಹಾರಿಸಿದ್ದೇ ಸುಳ್ಳು ಎನ್ನುವ ತೀರ್ಮಾನಕ್ಕೆ ಬಂದು ಬಿಡಬೇಡಿ. ದಾಳಿಯಲ್ಲಿ ಗಂಡನನ್ನು ಕಳೆದುಕೊಂಡ ಕರ್ನಾಟಕದ ಪಲ್ಲವಿ, ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪುಟ್ಟ ಹುಡುಗನೊಬ್ಬ ಆಡಿರುವ ಮಾತನ್ನು ಕೇಳಿ. ನಿಮ್ಮ ಯೋಚನೆ ಬದಲಾದರೂ ಬದಲಾಗಬಹುದು..
ನಿಮ್ಮ ಕಾರ್ಯಕರ್ತೆ ಪೋಸ್ಟ್ ಮಾಡುವ ವಿಡಿಯೋ ಕೇಳುವ ಮುನ್ನ, ಘಟನೆಯಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಹುಡಗನ ಮಾತನ್ನು ಪ್ರಿಯಾಂಕ್ ಖರ್ಗೆ ಕೇಳಬೇಕು...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.