ಕಿಂಗ್ ಖಾನ್ ಸಮಯಪ್ರಜ್ಞೆ, ಐಶ್ವರ್ಯಾ ರೈ ಮ್ಯಾನೇಜರ್ ಪ್ರಾಣ ಕಾಪಾಡಿದ ಶಾರುಖ್

By Web DeskFirst Published Oct 30, 2019, 11:55 PM IST
Highlights

ನಿಜ ಜೀವನದಲ್ಲಿಯೂ ಹೀರೋ ಆದ ಕಿಂಗ್ ಖಾನ್ ಶಾರುಖ್/ ಐಶ್ವರ್ಯಾ ರೈ ಮ್ಯಾನೇಜರ್ ಪ್ರಾಣ ಕಾಪಾಡಿದ ಕಿಂಗ್ ಖಾನ್/ ದೀಪಾವಳಿ ಪಟಾಕಿ ಅವಘಡದಿಂದ ರಕ್ಷಣೆ

ಮುಂಬೈ[ಅ. 30] ಶಾರುಖ್ ಖಾನ್ ಇಲ್ಲಿ ನಿಜಕ್ಕೂಹೀರೋ ಆಗಿದ್ದಾರೆ.ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಹಿಂದು ಧರ್ಮದವರಾಗಿರುವುದರಿಂದ ಪ್ರತಿವರ್ಷ ಅವರ ಮನೆಯಲ್ಲಿ ಹಿಂದು ಮತ್ತು ಮುಸ್ಲಿಂ ಹಬ್ಬಗಳೆರಡನ್ನೂ ಆಚರಿಸಲಾಗುತ್ತದೆ. ಗಣೇಶ ಹಬ್ಬ, ದೀಪಾವಳಿಯನ್ನು ಶಾರುಖ್ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  ಆದರೆ ಈ ಸಾರಿಯ ದೀಪಾವಳಿಗೆ ಶಾರುಖ್ ಕುಟುಂಬ ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಗೆ ತೆರಳಿತ್ತು.

ಅಮಿತಾಭ್ ಬಚ್ಚನ್ ಮನೆಯಲ್ಲಿ ವಿರಾಟ್- ಅನುಷ್ಕಾ ಶರ್ಮ, ದೀಪಿಕಾ- ರಣವೀರ್ ಸಿಂಗ್, ಶಿಲ್ಪಾ ಶೆಟ್ಟಿ, ಹೃತಿಕ್ ರೋಷನ್, ಪ್ರೀತಿ ಜಿಂಟಾ, ಕತ್ರಿನಾ ಕೈಫ್, ಶಾಹಿದ್ ಕಪೂರ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ದಂಪತಿ ಸೇರಿದಂತೆ ಘಟಾನುಘಟಿಗಳ ಮಿಲನವಾಗಿತ್ತು.

ಹಬ್ಬ ಅಂದ ಮೇಲೆ ಅಲ್ಲಿ ಪಟಾಕಿ ಸಂಭ್ರಮ ಇರಲೇಬೇಕು ಅಲ್ಲವೇ?  ಪಟಾಕಿ ಅವಘಡವೊಂದಕ್ಕೆ ನಾಂದಿಯಾಗಿಬಿಟ್ಟಿತ್ತು. ಪಟಾಕಿ ಬೆಂಕಿ  ಐಶ್ವರ್ಯ ರೈ ಬಚ್ಚನ್ ಅವರಿಗೆ ಹಲವಾರು ವರ್ಷಗಳಿಂದ ಮ್ಯಾನೇಜರ್ ಆಗಿರುವ ಅರ್ಚನಾ ಸದಾನಂದ್ ಅವರ ಲೆಹೆಂಗಾಕ್ಕೆ  ತಗುಲಿತ್ತು.

ಈ ಸಂದರ್ಭದಲ್ಲಿ ಎಲ್ಲರೂ ಏನು ಮಾಡಬೇಕೆಂದು ತೋಚದೆ ನಿಂತುಕೊಂಡಿದ್ದಾಗ ಕಿಂಗ್ ಖಾನ್ ಶಾರುಖ್ ಸಮಯ ಪ್ರಜ್ಞೆ ಮೆರೆದರು. ಹಿಂದೆ ಮುಂದೆ ಯೋಚಿಸದೆ ಅರ್ಚನಾ ಸದಾನಂದ್ ಅವರ ಬಳಿ ಓಡಿಹೋಗಿ ತಮ್ಮ ಜಾಕೆಟ್​ನಿಂದ ಬೆಂಕಿ ಆರಿಸಿದರು.

ಒಟ್ಟಿನಲ್ಲಿ ಶಾರುಖ್ ಸಮಯ ಪ್ರಜ್ಞೆಯಿಂದ  ಅವಘಡವೊಂದು ತಪ್ಪಿತು. ಕಿಂಗ್ ಖಾನ್ ನಿಜ ಜೀವನದಲ್ಲಿಯೂ ಹೀರೋ ಕೆಲಸ ಮಾಡಿದರು.

click me!